ವಿಜಯಪುರದಲ್ಲಿ ಮರ್ಯಾದೆ ಹತ್ಯೆ ಪ್ರಕರಣವೊಂದು ಜರುಗಿದೆ. ಅನ್ಯ ಜಾತಿಯನ್ನು ಯುವತಿಯನ್ನು ಪ್ರೀತಿಸಿದ ಎಂಬ ಕಾರಣಕ್ಕೆ ಯುವಕನನ್ನು ಆಕೆಯ ಸಂಬಂಧಿಕರು, ಪ್ರೇಯಸಿಯ ಎದುರಿನಲ್ಲೇ ಕೊಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ವಿಜಯಪುರದ ಆಲಮೇಲು ತಾಲೂಕಿನ ಬಳಗಾನೂರಲ್ಲಿ ಘಟನೆ ನಡೆದಿದೆ. ಮಾರಣಾಂತಿಕ ಹಲ್ಲೆಗೆ ಒಳಗಾಗಿದ್ದ 32 ವರ್ಷದ ರವಿ ನಿಂಬರಗಿ ಎಂಬ ಯುವಕ ನಾಪತ್ತೆಯಾಗಿದ್ದಾನೆ. ರವಿಯನ್ನು ಹತ್ಯೆ ಮಾಡಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಕಳೆದ ಮೂರ್ನಾಲ್ಕು ವರ್ಷದಿಂದ ರವಿ ಹಾಗೂ ಅದೇ ಗ್ರಾಮದ ಯುವತಿ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದ್ದು, ಇಬ್ಬರದ್ದು ಬೇರೆ ಜಾತಿಯಾಗಿದ್ದ ಕಾರಣ ಯುವತಿಯ ಕುಟುಂಬಸ್ಥರು ವಿರೋಧ ವ್ಯಕ್ತಪಡಿಸಿದ್ದರಂತೆ.
ಆದರೆ ಕಳೆದ 2 ದಿನದ ಹಿಂದೆ ಸಂತೆಯಿಂದ ತೋಟದ ಮನೆಗೆ ತೆರಳುತ್ತಿದ್ದ ರವಿಯನ್ನು ಅಡ್ಡಗಟ್ಟಿದ್ದ 8 ಮಂದಿ ಆತನ ಮೇಲೆ ಮಾರಣಾಂತಿಕವಾಗಿ ದಾಳಿ ನಡೆಸಿದ್ದರು ಎನ್ನಲಾಗಿದೆ. ಅಲ್ಲದೇ ಯುವತಿ ಕಣ್ಣೆದುರಲ್ಲೇ ಪ್ರಿಯಕರನ ಬರ್ಬರ ಹತ್ಯೆ ಮಾಡಿರುವ ಆರೋಪ ಕೇಳಿ ಬಂದಿದ್ದು, ಹತ್ಯೆ ಮಾಡಿದ ಬಳಿಕ ಶವದ ಸಮೇತ ಆರೋಪಿಗಳು ನಾಪತ್ತೆಯಾಗಿದ್ದಾರೆ ಎಂದು ಯುವಕನ ಕುಟುಂಸ್ಥರು ಆರೋಪಿಸಿದ್ದಾರೆ.
ಈ ಘಟನೆ ಕುರಿತಂತೆ ಯುವತಿಯಿಂದಲೇ ಆಲಮೇಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ತಮ್ಮ ಮಗ ನಾಪತ್ತೆಯಾಗಿರುವ ಕುರಿತು ಆರೋಪ ಮಾಡಿರುವ ಯುವಕನ ಪೋಷಕರು ರೋಧನ ಮುಗಿಲು ಮುಟ್ಟಿದೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ರವಿ ಪತ್ತೆ ಕಾರ್ಯ ಆರಂಭಿಸಿದ್ದಾರೆ.