ಮಕ್ಕಳಾಗುವುದಿಲ್ಲ ಎಂದ ಜ್ಯೋತಿಷಿ – ನವ ವಿವಾಹಿತೆ ಅನುಮಾನಾಸ್ಪದ ಸಾವು

Team Newsnap
2 Min Read

ಹಸೆಮಣೆ ಏರಿ ಇನ್ನೂ ಒಂಬತ್ತು ತಿಂಗಳು ಕಳೆದಿಲ್ಲ. ಮದುವೆಯ ಖುಷಿ ಮರೆಯುವ ಮುನ್ನವೇ ನವ ವಿವಾಹಿತೆ ನಿಗೂಢ ಸಾವನ್ನಪ್ಪಿದ್ದಾಳೆ.

ಈಕೆಯ ಹೆಸರು ಅಶ್ವಿನಿ, 25ರ ಯುವತಿ, ಪತಿ ಯುವರಾಜ್. ಕಾಲೇಜುದಿನಗಳಿಂದಲೇ ಅಶ್ವಿನಿ ಹಿಂದೆ ಸುತ್ತಿ ಪ್ರೀತಿ – ಪ್ರೇಮ ಅಂತಾ ನಂಬಿಸಿ ಬಳಿಕ ಯುವತಿಯನ್ನು ಮದುವೆಗೆ ಒತ್ತಾಯಿಸಿದ್ದಾನೆ. ತಂದೆಯನ್ನು ಕಳೆದುಕೊಂಡು ತಾಯಿ ಆಸರೆಯಲ್ಲಿದ್ದ ಅಶ್ವಿನಿ ಅಮ್ಮನನ್ನು ಒಪ್ಪಿಸಿ ಕಳೆದ ಫೆಬ್ರವರಿಯಲ್ಲಿ ಮದುವೆಯಾಗಿದ್ದರಂತೆ.

ಒಂದೆರಡು ತಿಂಗಳು ಬೇರೆ ಮನೆಯಲ್ಲಿ ಇಬ್ಬರು ಸಂಸಾರ ಕೂಡ ನಡೆಸಿದ್ದಾರೆ. ಆದರೆ, ಯುವರಾಜ್ ಉದ್ಯೋಗ ಕಳೆದುಕೊಂಡ ಬಳಿಕ ಸ್ನೇಹಿತನೊಂದಿಗೆ ಉಂಡಾಡಿ ಗುಂಡನಂತೆ ಓಡಾಡುತ್ತಿದ್ದ ಕಾರಣ ಸಂಸಾರದಲ್ಲಿ ಬಿರುಕು ಕಾಣಲಾರಂಭಿಸಿ ಏರುಪೇರು ಶುರುವಾಗಿದೆ‌.

ಜ್ಯೋತಿಷಿ ಮಕ್ಕಳಾಗುವುದಿಲ್ಲ ಎಂದ:

ಇನ್ನೂ ಕೆಲಸವಿಲ್ಲದೇ ಇದ್ದ ಪತಿ ಯುವರಾಜ್ ನನ್ನ ಪತ್ನಿ ಅಶ್ವಿನಿಯೇ ಕೆಲಸ‌ ಮಾಡಿ ಸಾಕುತ್ತಿದ್ದರಂತೆ. ಬಳಿಕ ತನ್ನ ಹಾಗೂ ಪತ್ನಿಯ ಬಗ್ಗೆ ಜ್ಯೋತಿಷಿ ಬಳಿ ಭವಿಷ್ಯ ಕೇಳಿದ್ದಾನೆ.‌ ಈ ವೇಳೆ ಜ್ಯೋತಿಷಿ ನಿನಗೆ ಮಕ್ಕಳಾಗಲ್ಲ ಅಂತ ಹೇಳಿದ್ದನಂತೆ. ಇದನ್ನೇ ನೆಪ ಮಾಡಿಕೊಂಡ ಆಸಾಮಿ ಯುವರಾಜ್ ನಿಂಗೆ ಮಕ್ಕಳಾಗಲ್ಲ ಅಂತಾ ಜರಿಯೋದಕ್ಕೆ ಮುಂದಾಗಿದ್ದನಂತೆ.

ಅಮ್ಮನ ಮಾತು ಆಲಿಸದೆ ಪ್ರೇಮ ವಿವಾಹವಾಗಿದ್ದಕ್ಕೆ ಇನ್ನಿಲ್ಲದ ಸಂಕಟ ಪಡುತ್ತಾ ನೋವು ಪಡುತ್ತಿದ್ದಳು ಅಶ್ವಿನಿ. ವಿಲಾಸಿ ಜೀವನಕ್ಕಾಗಿ ಹಪಾಹಪಿಸ್ತಿದ್ದ ಪಾಪಿ ಪತಿ ದುಬಾರಿ ಮೊಬೈಲ್ ಬೇಕು, ವರದಕ್ಷಿಣೆ ಬೇಕು ಸಾಲ‌ ಮಾಡಿಯಾದರೂ ತಂದು‌ಕೊಡು ಅಂತಾ ಪೀಡಿಸುತ್ತಿದ್ದ‌.

ಹೀಗೆ ಜಗಳವಾಡುತ್ತಿದ್ದ ಪತಿ-ಪತ್ನಿ ನಡುವೆ ಶುಕ್ರವಾರ ರಾತ್ರಿಯೂ ಜಗಳ ನಡೆದಿದೆ. ಪತಿ ಯುವರಾಜ್ ಬೆಳಗ್ಗೆ ಕೂಡ ಪತ್ನಿ ಅಶ್ವಿನಿ‌ ಮೇಲೆ ಹಲ್ಲೆ ನಡೆಸಿದ್ದಾನಂತೆ. ಬಳಿಕ ತಂಗಿ ವರ್ಷಿಣಿಗೆ ಕರೆ‌ಮಾಡಿ ಅಳುತ್ತಾ ಸಂಕಟ ಹೇಳಿಕೊಂಡಿದ್ದಾಳೆ. ಕೆಲವೇ ಹೊತ್ತಿನಲ್ಲಿ ಅಶ್ವಿನಿ ಸಿರೀಯಸ್ ಆಗಿದೆ. ಆಸ್ಪತ್ರೆಗೆ ದಾಖಲಿಸಿರುವುದಾಗಿ ಪತಿ ಯುವರಾಜ್ ಸಂಬಂಧಿಕರಿಗೆ ತಿಳಿಸಿದ್ದಾರೆ. ತಾಯಿ, ಮಗಳು ಆಸ್ಪತ್ರೆಗೆ ಬಂದು ನೋಡುವಷ್ಟರಲ್ಲಿ ಮಗಳು ಶವವಾಗಿದ್ದಾಳೆ.

ಪ್ರಿಯಕರನ ನಂಬಿ ಪ್ರೇಮ ವಿವಾಹವಾಗಿದ್ದ ಆಕೆ ಭವಿಷ್ಯವನ್ನು ಜ್ಯೋತಿಷಿಯ ಮಾತು ಕೇಳಿ ಪಾಪಿ ಪತಿ ಹಾಳುಗೆಡವಿದ್ದಾನೆ. ಅಶ್ವಿನಿ ಮೃತದೇಹದ ಮೇಲೆ ಗಾಯಾದ ಗುರುತುಗಳಿದ್ದು, ಯುವರಾಜ್ ನೇಣು ಹಾಕಿ ಆತ್ಮಹತ್ಯೆಯಂತೆ ಬಿಂಬಿಸಿದ್ದಾರೆಂದು ಮನೆಯವರು ಆರೋಪಿಸಿದ್ದಾರೆ.

ಅಶ್ವಿನಿ ಮರಣೋತ್ತರ ಪರೀಕ್ಷೆ ಹಾಗೂ ಪೊಲೀಸರ ನಿಸ್ಪಕ್ಷಪಾತ ತನಿಖೆ ನಂತರವೇ ಅಶ್ವಿನಿ ಸಾವಿಗೆ ಕಾರಣವೇನು ಎಂಬುದು ರಿವೀಲ್ ಆಗಲಿದೆ. ಘಟನೆ ಸಂಬಂಧ ಹೆಣ್ಣೂರು ಠಾಣೆಯಲ್ಲಿ‌ ಕೇಸ್ ದಾಖಲಾಗಿದ್ದು, ಆರೋಪಿ ಯುವರಾಜ್ ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Share This Article
Leave a comment