ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ದಂಧೆಗೆ ಒಳಗಾಗಿ ಹಣ ಕಳೆದುಕೊಂಡ ಓರ್ವ ಯುವಕ ಮತ್ತು ಮೂವರು ಅಪ್ರಾಪ್ತರ ಹುಡುಗರ ಗುಂಪು ಒಂಟಿ ಮಹಿಳೆಯರ ಕತ್ತಿನಲ್ಲಿದ್ದ ಚಿನ್ನದ ಸರಗಳನ್ನು ಲೂಟಿ ಮಾಡುತ್ತಿದ್ದವರನ್ನು ಪೋಲೀಸರು ಎಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ಮದ್ದೂರು ತಾಲ್ಲೂಕಿನ ಕದಲೂರು ಗ್ರಾಮದ ನಿತೀಶ್ ಅಲಿಯಾಸ್ ಒಂಟೆ (19) ಹಾಗೂ ಅಪ್ರಾಪ್ತ ಯುವಕರಾದ ಚಂದನ್ , ಹರ್ಷಿತ್ ಗೌಡ ಹಾಗೂ ಶೇಷಾದ್ರಿ ಬಂಧಿತರಿಂದ 7.70 ಲಕ್ಷ ರೂಪಾಯಿ ಮೌಲ್ಯದ 118 ಗ್ರಾಂ ಮಾಂಗಲ್ಯ ಸರ , ಕೃತ್ಯಕ್ಕೆ ಬಳಸಿದ್ದ ಎರಡು ಬೈಕ್ ಹಾಗೂ ಮೊಬೈಲ್ ಗಳನ್ನು ಆರೋಪಿಗಳಿಂದ ವಶ ಪಡಿಸಿಕೊಳ್ಳಲಾಗಿದೆ.
ಮದ್ದೂರು ಪಟ್ಟಣದ ಶ್ರೀ ನರಸಿಂಹ ಸ್ವಾಮಿ ದೇವಾಲಯ ರಸ್ತೆ , ಲೀಲಾವತಿ ಬಡಾವಣೆ ತಾಲ್ಲೂಕಿನ ಮಾರಸಿಂಗನಹಳ್ಳಿ , ಅಜ್ಜಹಳ್ಳಿ ಗ್ರಾಮಗಳಲ್ಲಿ ಹಾಡು ಹಗಲೇ ಮತ್ತು ರಾತ್ರಿ ವೇಳೆ ರಸ್ತೆಗಳಲ್ಲಿ ಓಡಾಡುತ್ತಿದ್ದ ಒಂಟಿ ಮಹಿಳೆಯರ ಕತ್ತಿನಲ್ಲಿದ್ದ ಮಾಂಗಲ್ಯ ಸರಗಳನ್ನು ಆರೋಪಿಗಳು ಬೈಕಿನಲ್ಲಿ ಬಂದು ಲೂಟಿ ಮಾಡಿ ಪರಾರಿಯಾಗಿದ್ದರು.
ಕಳೆದ ನವೆಂಬರ್ 4 ರಂದು ಬೆಸಗರಹಳ್ಳಿ ಪೋಲೀಸ್ ಠಾಣಾ ವ್ಯಾಪ್ತಿಯ ಮಾರಸಿಂಗನಹಳ್ಳಿ ಗ್ರಾಮದಲ್ಲಿ ಮೊಟ್ಟೆ ಖರೀದಿಸಲು ಬಂದಿದ್ದ ಸುಧಾ ಎಂಬ ಮಹಿಳೆಯ ಕತ್ತಿನಲ್ಲಿದ್ದ ಚಿನ್ನದ ಮಾಂಗಲ್ಯ ಸರವನ್ನು ಕಳವು ಮಾಡಲಾಗಿದ್ದ ಪ್ರಕರಣ ದಾಖಲಾಗಿತ್ತು.
ಆರೋಪಿಗಳ ಪತ್ತೆಗೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಕೆ.ಪರಶುರಾಮ್ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಎಂ.ಜೆ.ಪೃಥ್ವಿ ಮತ್ತು ಸಿಪಿಐ ಕೆ.ಆರ್.ಪ್ರಸಾದ್ ನೇತೃತ್ವದಲ್ಲಿ ಸರಗಳ್ಳರ ಪತ್ತೆಗೆ ಮದ್ದೂರು ಠಾಣೆ ಅಪರಾಧ ವಿಭಾಗದಿಂದ ವಿಶೇಷ ತಂಡ ರಚನೆ ಮಾಡಲಾಗಿತ್ತು
ನಿತೀಶ್ ಅಲಿಯಾಸ್ ಒಂಟೆ ಹಾಗೂ ಅಪ್ರಾಪ್ತ ವಯಸ್ಸಿನ ಮೂವರು ಆರೋಪಿಗಳನ್ನು ತಾಲ್ಲೂಕಿನ ನಿಡಘಟ್ಟ ಸಂತೆ ಮೈದಾನ ಹಾಗೂ ಚಾಮನಹಳ್ಳಿಯಲ್ಲಿ ನವೆಂಬರ್ 12ರಂದು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಇಡೀ ಸರಗಳ್ಳತನ ಪ್ರಕರಣಗಳು ಬೆಳಕಿಗೆ ಬಂದಿದೆ.
ಬಂಧಿತ ಆರೋಪಿಗಳು ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ದಂಧೆಗೆ ಹಾಗೂ ಮೋಜು ಮಸ್ತಿ ಜೀವನ ನಡೆಸಲು ಇಂತಹ ಕೃತ್ಯದಲ್ಲಿ ತೊಡಗಿದ್ದರು ಎಂದು ಗೊತ್ತಾಗಿದೆ.
ಬಂಧಿತರನ್ನು ಜೆ.ಎಂ.ಎಫ್.ಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ ನಂತರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.