ಶಂಕರ್‌ನಾಗ್ ಸವಿನೆನಪು (Shankar Nag)

Team Newsnap
4 Min Read

“ಜೊತೆಯಲಿ, ಜೊತೆ ಜೊತೆಯಲಿ ಇರುವೆನು ಹೀಗೆ ಎಂದೂ..”

“ಕೇಳದೆ ನಿಮಗೀಗ.. ದೂರದಲ್ಲಿ ಯಾರೋ.. ಹಾಡು ಹೇಳಿದಂತೆ..”

“ಗೀತ… ಸಂಗೀತ… ಏಕೆ ಹೀಗೆ.. ದೂರವಾದೆ.. ಎಲ್ಲಿಹೋದೆ..”

ನಲಿವಾ ಗುಲಾಬಿ ಹೂವೆ,ಮುಗಿಲಾ ಮೇಲೇರಿ ನಗುವೇ
ನಿನಗೆ ನನ್ನಲ್ಲಿ ಒಲವೂ,ಅರಿಯೆ ನನ್ನಲ್ಲಿ ಛಲವೂ
ನಲಿವಾ ಗುಲಾಬಿ ಹೂವೆ ….ಒಲವೂ ….ಛಲವೂ…ಒಲವೂ ….ಛಲವೂ…

ಮೇಲಿನ ಸುಮಧುರ ಗೀತೆಗಳನ್ನು ಕನ್ನಡಿಗರು ಎಂದಾದರೂ ಮರೆಯಲಾದೀತೆ? ಇಂದಿಗೂ ಗುನುಗುವ, ನಮ್ಮೆಲ್ಲರ ಮನಸ್ಸಿನಲ್ಲಿ ಸದಾ ಅಚ್ಚ-ಹಸಿರಾಗಿರುವ ಇವುಗಳು ಆಟೋ ರಾಜ ‘ಗೀತ’ ಕನ್ನಡ ಚಲನಚಿತ್ರದ ಗೀತೆಗಳು. ಗೀತ ಚಿತ್ರದ ಯಶಸ್ಸಿನ ರೂವಾರಿ ಸಾಹಿತಿ-ನಟ-ನಿರ್ದೇಶಕ ‘ಶಂಕರ್ ನಾಗ್’.

ಆಟೋ ಎಂದ ತಕ್ಷಣ ನೆನಪಾಗುವುದು ಶಂಕರನಾಗ್,ಕನ್ನಡಿಗರಲ್ಲಿ ಅತೀ ಚಿಕ್ಕ ವಯಸ್ಸಲ್ಲಿ ಅತೀ ದೊಡ್ಡ ಸಾಧನೆ ಮಾಡಿದವರು, ಅತೀ ಹೆಚ್ಚು ಅಭಿಮಾನಿ ಬಳಗ ಹೊಂದಿದವರು. ಒಳ್ಳೆಯ ನಟ,ಅದ್ಭುತವಾದ ನಿರ್ದೇಶಕ, ಕಥೆಗಾರ.

ಶಂಕರನಾಗ್ ಕನ್ನಡ ಚಿತ್ರರಂಗದ ದಂತಕಥೆ. ಕನ್ನಡ ಚಿತ್ರ ಪ್ರೇಮಿಗಳ ಮನಃಪಟಲದಲ್ಲಿ ಅಚ್ಚಳಿಯದ ಮುದ್ರೆಯನ್ನೊತ್ತಿರುವ ಶಂಕರ ನಾಗ್ ಕನ್ನಡಿಗರಲ್ಲಿ ಬೆರೆತು ಹೋಗಿದ್ದಾರೆ. 35 ವರ್ಷದ ಕಿರಿದಾದ ಬದುಕಿನ ಪಯಣದಲ್ಲಿ ನೂರಾರು ವರುಷ ನೆನೆಯುವಂತಹ ಕಾರ್ಯ ಸಾಧಿಸಿದ ಛಲಗಾರ.

ನವೆಂಬರ್ 9 .1954 ರಂದು ಕರ್ನಾಟಕದ ಹೊನ್ನಾವರ ತಾಲೂಕಿನ ಮಲ್ಲಾಪುರ ಎಂಬ ಪುಟ್ಟ ಹಳ್ಳಿಯಲ್ಲಿ ಶಂಕರ್‌ನಾಗ್ ಅವರು ಹುಟ್ಟಿದರು. ನಕ್ಷತ್ರ ನಾಮ’ಅವಿನಾಶ’. ಹೀಗೆಂದರೆ ವಿನಾಶವಿಲ್ಲದವನು ಎಂದರ್ಥ. ತಂದೆ ಹೊನ್ನಾವರದ ನಾಗರ ಕಟ್ಟೆಯ ಸದಾನಂದ, ಬಾಲ್ಯದಲ್ಲಿ ಪ್ರೀತಿಯಿಂದ ಮಗನನ್ನು ಕರೆಯುತಿದ್ದ ಹೆಸರು ಭವಾನಿ ಶಂಕರ್. ಶಂಕರ್‌ನಾಗ್ ತನ್ನ ವಿದ್ಯಾಭ್ಯಾಸದ ನಂತರ ಮುಂಬೈಗೆ ತೆರಳಿದರು.

ಮುಂಬೈನ ಮರಾಠಿ ಚಿತ್ರಮಂದಿರದ ಕಡೆಗೆ ಆಕರ್ಷಿತರಾದ ಶಂಕರ್‌ನಾಗ್ ಮರಾಠಿ ರಂಗಭೂಮಿ ಹವ್ಯಾಸವನ್ನು ಬೆಳೆಸಿಕೊಳ್ಳುತ್ತಾ ಮರಾಠಿ ರಂಗಭೂಮಿಯಲ್ಲಿ ತೀವ್ರವಾಗಿ ತೊಡಗಿಕೊಂಡಿದ್ದರು. ತಮ್ಮ ಗೆಳೆಯರೊಂದಿಗೆ ಅವರು ಚಿತ್ರಕತೆ ರಚಿಸಿದ ಮರಾಠಿ ಚಿತ್ರ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆದಿತ್ತು.

ನಾಟಕ -ರಂಗಭೂಮಿ ಸೇವೆ

ಮುಂಬೈನಲ್ಲಿ ಮರಾಠಿ ಮತ್ತು ಹಿಂದಿ ನಾಟಕಗಳಿಂದ ಶುರುವಾದ ರಂಗಭೂಮಿ ಸೇವೆ ಬೆಂಗಳೂರಿಗೆ ಬಂದ ಮೇಲೂ ಮುಂದುವರೆಯಿತು. ಅಣ್ಣ ಅನಂತನಾಗ್‌ರ ಜೊತೆ ಸೇರಿ ಸಂಕೇತ ಎಂಬ ಹವ್ಯಾಸಿ ನಾಟಕ ತಂಡ ಕಟ್ಟಿದರು.ಅಂಜು ಮಲ್ಲಿಗೆ', ಬ್ಯಾರಿಸ್ಟರ್’, ಸಂಧ್ಯಾ ಚಾಯ' ಮುಂತಾದ ನಾಟಕಗಳನ್ನು ನಿರ್ಮಿಸಿ ನಿರ್ದೇಶಿಸಿದ್ದಾರೆ.

ನಾಟಕಗಳಿಗಾಗಿಯೇ ಒಂದು ದೊಡ್ಡ ರಂಗಮಂದಿರ ಕಟ್ಟಿಸಬೇಕೆಂಬ ಆಸೆ ಹೊಂದಿದ್ದರು. ಈ ಆಸೆಯನ್ನು ಇವರ ಪತ್ನಿ ಅರುಂಧತಿನಾಗ್ ರಂಗಶಂಕರ’ ರೂಪದಲ್ಲಿ ಈಡೇರಿಸಿದರು.

ಮಾಲ್ಗುಡಿ ಡೇಸ್

90 ರ ದಶಕದಲ್ಲಿ ದೂರದರ್ಶನವೊಂದೆ ಏಕಮಾತ್ರ ಕಿರುತೆರೆ ವಾಹಿನಿಯಾಗಿತ್ತು. ದೂರದರ್ಶನದ ಆರಂಭದ ದಿನಗಳಲ್ಲಿ ಶಂಕರ ಪರಿಚಯ' ಎಂಬ ಕಾರ್ಯಕ್ರಮವನ್ನು ನಿರೂಪಿಸುತ್ತಿದ್ದರು. ಆಗೆಲ್ಲಾ ದೂರದರ್ಶನವೇ ಕಿರುತೆರೆ ಧಾರಾವಾಹಿಗಳನ್ನು ನಿರ್ಮಿಸಲು ನಿರ್ಮಾಪಕರನ್ನು ಆಹ್ವಾನ ಮಾಡುತ್ತಿತ್ತು. ಈ ಆಹ್ವಾನವನ್ನು ಒಪ್ಪಿಕೊಂಡ ಶಂಕರ ನಾಗ್ ಆರ್.ಕೆ.ನಾರಾಯಣ್‌’ರ ಮಾಲ್ಗುಡಿ ಡೇಸ್ ಪುಸ್ತಕವನ್ನು ಕಿರುತೆರೆ ಧಾರಾವಾಹಿ ಮಾಡಲು ನಿರ್ಧರಿಸಿದರು. ಹಿಂದಿ ಭಾಷೆಯಲ್ಲಿ ಸುಮಾರು 39 ಎಪಿಸೋಡ್‌ಗಳಲ್ಲಿ 1987 ರಲ್ಲಿ ಪ್ರಸಾರವಾದ ಈ ಸೀರಿಯಲ್ ರಾಷ್ಟ್ರವ್ಯಾಪ್ತಿ ಮನ್ನಣೆ ಪಡೆಯಿತು.

ಚಿತ್ರರಂಗ ಪ್ರವೇಶ

 ಗಿರೀಶ್ ಕಾರ್ನಾಡರ ‘ಒಂದಾನೊಂದು ಕಾಲದಲ್ಲಿ’ ಎನ್ನುವ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು, ಒಂದಾನೊಂದು ಕಾಲದಲ್ಲಿ ಚಿತ್ರದ ಅಭಿನಯಕ್ಕೆ ಸ್ಪರ್ಧಾರ್ಥಕ ಅಂತರರಾಷ್ಟೀಯ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ನಟ ಪ್ರಶಸ್ತಿ ದೊರೆಯಿತು. ನಂತರದ 12 ವರ್ಷಗಳಲ್ಲಿ ಕನ್ನಡದ ಸುಮಾರು 92 ಚಿತ್ರಗಳಲ್ಲಿ ನಟಿಸಿದರು. ಶಂಕರ್‌ನಾಗ್ ಪ್ರಥಮ ಬಾರಿಗೆ ತ್ರಿಪಾತ್ರದಲ್ಲಿ ಅಭಿನಯಿಸಿದ ಚಿತ್ರ “ಗೆದ್ದ ಮಗ”. ತಮ್ಮ ಸಹೋದರ ಅನಂತ ನಾಗ್ ಅವರೊಡನೆ “ಮಿಂಚಿನ ಓಟ”, “ಜನ್ಮ ಜನ್ಮದ ಅನುಬಂಧ” ಮತ್ತು “ಗೀತಾ” ಚಿತ್ರಗಳನ್ನು ನಿರ್ಮಿಸಿದರು.

ಇದರಲ್ಲಿ “ಜನ್ಮ ಜನ್ಮದ ಅನುಬಂಧ” ಮತ್ತು “ಗೀತಾ” ಚಿತ್ರಗಳು ಇಳಯರಾಜ ಅವರ ಮಧುರ ಸಂಗೀತವನ್ನು ಹೊಂದಿ ಜನಮನ್ನಣೆ ಗಳಿಸಿವೆ. ನಾಟಕಗಳನ್ನು ಮತ್ತು ರಂಗಭೂಮಿಯನ್ನು ಗೌರವಿಸಿ ಶ್ರೀಮಂತಗೊಳಿಸಿದ ಶಂಕರ್ ಅವರು ಗಿರೀಶ ಕಾರ್ನಾಡ ರ “ಅಂಜು ಮಲ್ಲಿಗೆ”, “ನೋಡಿ ಸ್ವಾಮಿ ನಾವಿರೋದು ಹೀಗೆ” ಮತ್ತು ಮುಂತಾದ ನಾಟಕಗಳನ್ನು ನಿರ್ದೇಶಿಸಿದ್ದಾರೆ.

ಶಂಕರ್ ಅವರದು ಬಿಡುವಿಲ್ಲದ ‘ಮಿಂಚಿನ ಓಟ’ದ ಬದುಕು; ಅತ್ಯಂತ ಕಡಿಮೆ ಅವಧಿಯಲ್ಲಿ ಹೆಚ್ಚಿನ ಸಾಧನೆ ಮಾಡಿದ ಶಂಕರನಾಗ್‌ 1990 ಸೆಪ್ಟಂಬರ್ 30 ರ ಬೆಳಗ್ಗೆ ಜೋಕುಮಾರಸ್ವಾಮಿ ಚಿತ್ರದ ಶೂಟಿಂಗ್‌ಗಾಗಿ ಪತ್ನಿ ಮತ್ತು ಮಗಳು ಕಾವ್ಯ ಜೊತೆ ಕಾರಿನಲ್ಲಿ ಹೋಗುವಾಗ ದಾವಣಗೆರೆ ಹೊರ ವಲಯದ ಬಳಿ ಅಪಘಾತಕ್ಕೀಡಾಗಿ ನಿಧನರಾದರು.

ಶಂಕರ್‌ನಾಗ್ ಕನಸುಗಳು

1.ಲಂಡನ್‌ನಲ್ಲಿನ ಮೇಟ್ರೋ ನೋಡಿದ್ದ ಇವರು ಬೆಂಗಳೂರಿಗೆ ಒಂದು ಮೆಟ್ರೋ ಇರಬೇಕೆಂದು ಒಂದು ನೀಲಿ ನಕ್ಷೆಯನ್ನು ಕೂಡ ತಯಾರಿಸಿದ್ದರು.

2.ಸರ್ಕಾರ ನಂದಿ ಬೆಟ್ಟಕ್ಕೆ ಒಂದು ರೋಪ್ ವೇ ಹಾಕಬೇಕೇಂದು ಬಯಸಿದ್ದರು.

3.ಕಡಿಮೆ ವೆಚ್ಚದ ಫ್ಯಾಬ್ರಿಕೇಟೇಡ್ ಮನೆ ನಿರ್ಮಾಣ ಯೋಜನೆ ರೂಪಸಿದ್ದರು.

4.ಬೆಂಗಳೂರಿನ ಹತ್ತಿರವಿರುವ ತಮ್ಮ ತೋಟದಲ್ಲಿ ಒಂದು ಕಂಟ್ರಿ ಕ್ಲಬ್ ಮಾಡಬೇಕೆಂದು ನಿರ್ಧರಿಸಿದ್ದರು.

`ಸಂಕೇತ ಇಲೆಕ್ಟ್ರಾನಿಕ್ಸ್’ ಹೆಸರಿನಲ್ಲಿ ಬೆಂಗಳೂರಿನಲ್ಲಿ ಮೊದಲ ಇಲೆಕ್ಟ್ರಾನಿಕ್ ರಿಕಾರ್ಡಿಂಗ್ ಸ್ಟುಡಿಯೋ ನಿರ್ಮಿಸಿದ ಕೀರ್ತಿ ಕೂಡ ನಾಗ್ ಸಹೋದರರಿಗೆ ಸಲ್ಲಬೇಕು.

ಬೆಂಗಳೂರಿಗೆ ಲಂಡನ್ ಮಾದರಿಯ ಮೆಟ್ರೋ ರೈಲು ಸೇವೆ ಬೇಕೆಂಬ ಬೇಡಿಕೆಯ ಜೊತೆಗೆ ಅದರ ನೀಲಿನಕ್ಷೆಯನ್ನೂ ಸಹ ತಯಾರಿಸಿದ್ದ ಶಂಕರ್ ಅದನ್ನು ಅಂದಿನ ಮುಖ್ಯಮಂತ್ರಿ ಶ್ರೀ ರಾಮಕೃಷ್ಣ ಹೆಗ್ಡೆ ಅವರಿಗೆ ಸಲ್ಲಿಸಿದ್ದರು. ಅಂದಿನ ಅವರ ಈ ಎರಡೂ ಮಹತ್ವಾಕಾಂಕ್ಷೆ ಯೋಜನೆಗಳು ಇಂದಿಗೆ ಕ್ರಮವಾಗಿ ‘ರಂಗಶಂಕರ‘ ಮತ್ತು ‘ನಮ್ಮ ಮೆಟ್ರೋ‘ ರೂಪದಲ್ಲಿ ಬೆಂಗಳೂರಿನಲ್ಲಿ ಸಾಕಾರಗೊಂಡಿವೆ.

Share This Article
Leave a comment