ನ.17 ರಂದು ಮಂಡ್ಯ ಡಿಸಿಸಿ ಬ್ಯಾಂಕ್ ನ ಅಧಿಕಾರ ಸೂತ್ರ ಯಾರ ‘ ಕೈ’ ಗೆ ?

Team Newsnap
2 Min Read

ಮಂಡ್ಯ ಡಿಸಿಸಿ ಬ್ಯಾಂಕ್ ಅಧ್ಯಕ್ಷ- ಉಪಾಧ್ಯಕ್ಷರ ಚುನಾವಣೆಯು ನ.17 ದಿನಾಂಕ ನಿಗದಿಯಾಗಿದೆ.
ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು‌ ಡಿಸಿಸಿ ಬ್ಯಾಂಕ್ ನಲ್ಲಿ ಅಧಿಕಾರ ಸೂತ್ರ ಹಿಡಿಯಲು ಸಾಕಷ್ಟು ಪೈಪೋಟಿ ಮತ್ತು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ.

ಕಾಂಗ್ರೆಸ್ ಬೆಂಬಲಿತ 8 ಮಂದಿ ನಿರ್ದೇಶಕರು ಮತ್ತು ಮುಖಂಡರು, ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದ್ದಾರೆ.

ಮಾಜಿ ಸಚಿವ ಹಾಗೂ ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ.ಎಂ.ನರೇಂದ್ರಸ್ವಾಮಿ, ನ್ಯೂಸ್ ಸ್ನ್ಯಾಪ್ ನೊಂದಿಗೆ ಮಾತನಾಡಿ, ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಸಂಬಂಧಿಸಿದಂತೆ ಚುನಾವಣೆ ನಡೆಯುವ ಒಂದು ದಿನದ ಮುಂಚಿತವಾಗಿ ಅಭ್ಯರ್ಥಿ ಘೋಷಣೆ ಮಾಡಲಾಗುವುದು. ನಮ್ಮಲ್ಲಿ ಪೈಪೋಟಿ ಇಲ್ಲ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು, ಯಾವುದೇ ಗೊಂದಲವಿಲ್ಲದಂತೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ಮಾಡಿಕೊಳ್ಳುವುದಾಗಿ ವಿಶ್ವಾಸದಿಂದ ಹೇಳಿದರು.

ಡಿಸಿಸಿ ಬ್ಯಾಂಕ್‍ನ ಅಧಿಕಾರ ಹಿಡಿಯುವುದು ಮತ್ತು ಜಿಲ್ಲೆಯ ಅಭಿವೃದ್ಧಿಯ ಬಗ್ಗೆ ನಮ್ಮ ನಾಯಕರಾದ ಡಿ.ಕೆ.ಶಿವಕುಮಾರ್ ಬಳಿ ಚರ್ಚೆ ನಡೆಸಲಾಗಿದೆ. ಜೊತೆಗೆ ಮಂಡ್ಯ ಜಿಲ್ಲೆಯಲ್ಲಿ ಡಿಸಿಸಿ ಬ್ಯಾಂಕ್ ಅಧಿಕಾರ ಹಿಡಿಯುವಲ್ಲಿ ಬೆನ್ನೆಲುಬಾಗಿ ನಿಂತ ನಮ್ಮ ನಾಯಕರುಗಳನ್ನು ಭೇಟಿ ಮಾಡಿ ಕೃತಜ್ಞತೆ ಸಲ್ಲಿಸುವುದಾಗಿತ್ತು. ಅದೇ ರೀತಿ ನಮ್ಮ ಜಿಲ್ಲೆಯ ಡಿಸಿಸಿ ಬ್ಯಾಂಕ್ ಮತದಾರರು ಸಹ ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸಲು ಪಕ್ಷಾತೀತ ವಾಗಿ ಸಹಕರಿಸಿದ್ದಾರೆ ಎಂದು ನರೇಂದ್ರ ಸ್ವಾಮಿ ಹೇಳಿದ್ದಾರೆ.

ಬೆಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ಮಾಜಿ ಶಾಸಕರಾದ ಕೆ.ಬಿ. ಚಂದ್ರಶೇಖರ್, ಹಾಲಹಳ್ಳಿ ಅಶೋಕ್, ಸಿ.ಅಶ್ವತ್ಥ್, ರಮೇಶ್‍ಬಾಬು ಬಂಡಿಸಿದ್ದೇಗೌಡ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ, ಮಹಿಳಾಧ್ಯಕ್ಷೆ ಅಂಜನಾ ಶ್ರೀಕಾಂತ್ ಸೇರಿ ದಂತೆ ಡಿಸಿಸಿ ಬ್ಯಾಂಕ್ ಕಾಂಗ್ರೆಸ್ ಬೆಂಬ ಲಿತ ನಿರ್ದೇಶಕರು ಮತ್ತು ಮುಖಂಡರು ನಾಯಕರನ್ನು ಭೇಟಿ ಮಾಡಿರುವುದಾಗಿ‌ ಹೇಳಿದರು.

ಜೆಡಿಎಸ್ ಸಮಾನ ಹೋರಾಟ

ಈ ನಡುವೆ ಜೆಡಿಎಸ್ ಬೆಂಬಲಿತ 4 ಮತ್ತು ಬಿಜೆಪಿ ಸರ್ಕಾರದ ನಾಮ ನಿರ್ದೇಶಿತ ಮೂವರು ನಿರ್ದೇಶಕರು ಸೇರಿ ಒಟ್ಟು 7 ಮತಗಳ ಜೊತೆಗೆ ಕಾಂಗ್ರೆಸ್‍ನ ಬೆಂಬಲಿತ ನಿರ್ದೇಶಕರುಗಳಲ್ಲಿ ಯಾರಾದರೂ ಅತೃಪ್ತರಿದ್ದರೇ ಅವರನ್ನು ಸೆಳೆದು ಅಧಿಕಾರ ಹಿಡಿಯಲು ಜೆಡಿಎಸ್ ತಂತ್ರಗಾರಿಕೆ ಹೆಣೆಯುತ್ತಿದೆ ಎಂದು ಹೇಳಲಾಗುತ್ತಿದೆ.

ಕಾಂಗ್ರೆಸ್ ನಲ್ಲಿ ಅಧ್ಯಕ್ಷ ಆಕಾಂಕ್ಷಿತರ ಸಂಖ್ಯೆ ಹೆಚ್ಚಿದೆ. ಕಳೆದ ಬಾರಿ ಅಧ್ಯಕ್ಷರಾಗಿದ್ದ ಸಿ. ಅಶ್ವತ್ಥ ತಾವು ಕಾಂಗ್ರೆಸ್ಸಿಗನೇ ಎಂದು ಹೇಳಿಕೊಂಡಿದ್ದಾರೆ. ಅಲ್ಲದೆ ಬಹುತೇಕ ನಿರ್ದೇಶಕರು ಕಾಂಗ್ರೆಸ್ ಹೈ ಕಮಾಂಡ್ ಹೇಳಿದಂತೆ ನಾವು ನಡೆದುಕೊಳ್ಳುತ್ತೇವೆ ಎಂದು ಮೇಲ್ ಮಾತಿಗೆ ಹೇಳುತ್ತಿದ್ದಾರೆ. ಕೊನೆಯ ಕ್ಷಣದಲ್ಲಿ ಏನಾಗುತ್ತದೆ ಎನ್ನುವುದನ್ನೂ ಕೂಡ ಊಹಿಸಲು ಸಾದ್ಯವಿಲ್ಲ.

ಬಿಜೆಪಿ ಸಧ್ಯಕ್ಕೆ ಮೌನ

ನ.17ರಂದು ರಾಜಕೀಯ ಮೇಲಾಟಕ್ಕೆ ನಾಂದಿಯಾಗುವ ದಿನ. ರಾಜ್ಯ ಬಿಜೆಪಿ ನಾಯಕರು, ಜಿಲ್ಲಾ ಮಂತ್ರಿ ಇದುವರೆಗೂ ತಮ್ಮ ಮೂರು ಮಂದಿ ನಿರ್ದೇಶಕರು ಯಾರನ್ನು ಬೆಂಬಲಿಸುತ್ತಾರೆ ಎನ್ನುವುದರ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ.

ಜಿಲ್ಲೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಬಿಜೆಪಿಗೆ ಬದ್ಧ ವೈರಿಗಳು. ಆದರೂ ರಾಜಕೀಯ ಚದುರಂಗ ಆಟದಲ್ಲಿ ಯಾವ ಪಕ್ಷ ಅಥವಾ ನಾಯಕರು ಶಾಶ್ವತ ಮಿತ್ರರಲ್ಲ, ಶತ್ರುಗಳೂ ಅಲ್ಲ. ಹೀಗಾಗಿ ಬಿಜೆಪಿ ಕೈಗೊಳ್ಳುವ ನಿಲುವಿನಲ್ಲಿ ಡಿಸಿಸಿ ಬ್ಯಾಂಕ್ ಅಧಿಕಾರ ಯಾರಿಗೆ ದಕ್ಕುತ್ತದೆ ಎನ್ನುವುದನ್ನು ಕಾದು ನೋಡಬೇಕು.

Share This Article
Leave a comment