ನದಿಗಳ ಜೋಡಣೆಯ ಲಾಭ ನಷ್ಟಗಳು…….

Team Newsnap
4 Min Read

ಮೇಲ್ನೋಟಕ್ಕೆ ಅಭಿವೃದ್ಧಿ ಮತ್ತು ಅನಿವಾರ್ಯ ನಿಜ ಆದರೆ ದೀರ್ಘಕಾಲದ ಪರಿಣಾಮಗಳು……….

ಸಾಮಾನ್ಯ ಮನುಷ್ಯರ ತಿಳುವಳಿಕೆಗೆ ನಿಲುಕದ ವಿಷಯವೆಂದರೆ ” ನದಿಗಳ ಜೋಡಣೆ ” ಎಂಬ ಬೃಹತ್ ಯೋಜನೆ……….

ಬಹಳ ಹಿಂದಿನಿಂದಲೂ ಈ ಬಗ್ಗೆ ಚರ್ಚೆಗಳು ಆಗುತ್ತಲೇ ಇವೆ. ಚರ್ಚೆಗಳಿಗೂ ನಿಲುಕದ ಭವಿಷ್ಯದ ಫಲಿತಾಂಶಗಳ ಬಗ್ಗೆ ಖಚಿತವಾದ ನಿರ್ಧಾರ ಸಾಧ್ಯವಿಲ್ಲದ ಆದರೆ ಪ್ರಕೃತಿಯ ಮೇಲಿನ ಬಹುದೊಡ್ಡ ಹಲ್ಲೆಯೋ ಅಥವಾ ನಿಯಂತ್ರಣವೋ ಅಥವಾ ಸಾಧನೆಯೋ ತುಂಬಾ ಗಂಭೀರವಾಗಿ ಯೋಚಿಸಬೇಕಾದ ವಿಷಯ………

ಕೇವಲ ಪರಿಸರ ತಜ್ಞರ ವಿರೋಧ – ನೀರಾವರಿ ತಜ್ಞರ ತಾಂತ್ರಿಕ ಸಾಮರ್ಥ್ಯ – ದೇಶಭಕ್ತರ ಉತ್ಸಾಹ – ರೈತರ ಲಾಭ – ಸರ್ಕಾರದ ಸಾಧನೆ ಎಂಬ ಅಂಶಗಳ ಮೇಲೆ ಮಾತ್ರ ಇದನ್ನು ನಿರ್ಧರಿಸಲು ಸಾಧ್ಯವಿಲ್ಲ……

ಇಡೀ ಪ್ರಕೃತಿಯ ಸಮಗ್ರ ದೃಷ್ಟಿಯಿಂದ ಇದನ್ನು ವಿಶ್ಲೇಷಿಬೇಕಾಗುತ್ತದೆ…….

ನೀರಾವರಿ ತಜ್ಞನೂ ಅಲ್ಲದ ಪರಿಸರ ತಜ್ಞನೂ ಅಲ್ಲದ ಇಂಜಿನಿಯರ್ ಕೂಡ ಅಲ್ಲದ ಸಾಮಾನ್ಯನಾದ ನಾನು ಈ ಬಗ್ಗೆ ಒಂದು ಸಣ್ಣ ಅಭಿಪ್ರಾಯ ವ್ಯಕ್ತಪಡಿಸಲು ಇಚ್ಚಿಸುತ್ತೇನೆ…………

ಇಡೀ ಮನುಕುಲದ ನಾಗರಿಕತೆ ಪ್ರಾರಂಭವಾಗುವುದೇ ನದಿ ತೀರದ ಪ್ರಾಂತಗಳಲ್ಲಿ. ಕಾಡುಗಳ ಅಲೆದಾಟದ ನಂತರ ಒಂದು ನಿಶ್ಚಿತ ಜಾಗದಲ್ಲಿ ವಾಸಿಸಲು ಪ್ರಾರಂಭಿಸಿದಾಗ ಆತನಿಗೆ ವ್ಯವಸಾಯದಿಂದ ಹಿಡಿದು ಎಲ್ಲಾ ದೃಷ್ಟಿಯಿಂದಲೂ ಅನುಕೂಲಕರವಾಗಿದ್ದ ಸ್ಥಳ ನದಿಯ ತೀರ – ಮುಖಜ ಭೂಮಿ……

ಅನಂತರ ತನ್ನ ರಕ್ಷಣೆ – ಅನುಕೂಲಗಳಿಗೆ ತಕ್ಕಂತೆ ಮನೆ ಆಹಾರ ಸಂಪರ್ಕ ಅಡಳಿತ ಇತ್ಯಾದಿಗಳನ್ನು ರೂಪಿಸಿಕೊಂಡ……

ಜನಸಂಖ್ಯೆ ಬೆಳೆದಂತೆ ಹಳ್ಳಿ ಊರು ಪಟ್ಟಣ ನಗರಗಳನ್ನು ನಿರ್ಮಿಸಿದ…..

ಈ ಎಲ್ಲಾ ಸಂದರ್ಭದಲ್ಲೂ ಪ್ರಕೃತಿಯ ಜೊತೆ ಅದಕ್ಕೆ ಪೂರಕವಾಗಿ ವರ್ತಿಸುತ್ತಿದ್ದ ಮತ್ತು ಅವನ ಅವಶ್ಯಕತೆಗಳು ಮಿತಿಯಲ್ಲಿ ಇದ್ದುದರಿಂದ ಪ್ರಕೃತಿಯ ವಿರುದ್ಧದ ಕೆಲವು ನಿಲುವುಗಳು ಅಷ್ಟೇನು ಹೆಚ್ಚು ಭಾದಿಸಲಿಲ್ಲ……….

ಆದರೆ ಅನಂತರ ಅತಿಯಾದ ಜನಸಂಖ್ಯೆ ಮತ್ತು ಆತನ ತೀರದ ದಾಹ ಹೆಚ್ಚಾಗಿ ಅಭಿವೃದ್ಧಿಯ ಹೆಸರಿನಲ್ಲಿ ಪ್ರಕೃತಿಗೆ ವಿರುದ್ಧವಾದ ಯೋಜನೆಗಳನ್ನು ಕೈಗೆತ್ತಿಕೊಂಡ…….

ಅಣೆಕಟ್ಟೆಗಳ ನಿರ್ಮಾಣ – ಜಲಾಶಯಗಳಲ್ಲಿ ನೀರು ಸಂಗ್ರಹ ಅದರ ಮೊದಲ ಪ್ರಯೋಗ,

ಹಸಿರು ಕ್ರಾಂತಿಯ ಪರಿಣಾಮ ಕೃಷಿಯ ಅಧಿಕ ಫಸಲಿಗಾಗಿ ರಾಸಾಯನಿಕಗಳ ಸಿಂಪಡಣೆ ಭೂಮಿಯ ಫಲವತ್ತತೆಯ ನಾಶದ ಎರಡನೇ ಪ್ರಯೋಗ,

ಪರಿಸರ, ಕಾಡು, ಅಲ್ಲಿನ ಜೀವ ಜಂತುಗಳು, ಬೆಟ್ಟು ಗುಡ್ಡಗಳ ಮೇಲೆ ಆಕ್ರಮಣ ಆತನ ಮೂರನೇ ಪ್ರಯೋಗ……

ಈ ಹಿನ್ನೆಲೆಯಲ್ಲಿ ನದಿ ಜೋಡಣೆಯನ್ನು ನೋಡಬೇಕಾಗಿದೆ……..

ಬಹುಶಃ ಇಂದಿನ ಭಾರತದ ನಗರೀಕರಣದ ಪ್ರಭಾವದಿಂದಾಗಿ ಬಹುತೇಕ ಜನರಿಗೆ ನದಿಗಳ ಅಗಾಧತೆಯ ಕಲ್ಪನೆಯೂ ಇರುವುದಿಲ್ಲ. ಅಮೆಜಾನ್ – ನೈಲ್ ಮುಂತಾದ ನದಿಗಳ ಆಳ ಅಗಲ ವಿಸ್ತೀರ್ಣ ರಭಸ ಹರಿಯುವ ಭಯಾನಕತೆ ಅಡಗಿರುವ ವಿಸ್ಮಯಗಳು ಊಹೆಗೂ ನಿಲುಕದ್ದು…….

ದಕ್ಷಿಣ ಭಾರತದಲ್ಲಿ ಹರಿಯುವ ಕೃಷ್ಣಾ ಕಾವೇರಿ ಭೀಮಾ ಗೋದಾವರಿ ನೇತ್ರಾವತಿ ವೃಷಭಾವತಿ ಮುಂತಾದವುಗಳು ಆ ಅಗಾಧತೆಗೆ ಹೋಲಿಸಿದರೆ ಸಣ್ಣ ನದಿಗಳು. ಅತಿಯಾದ ಮಳೆ ಸಂದರ್ಭದಲ್ಲಿ ಬಿಟ್ಟರೆ ಅಂತಹ ಅಪಾಯಕಾರಿ ನದಿಗಳಲ್ಲ. ಈ ಹೋಲಿಕೆಯೊಡನೆ ಉತ್ತರ ಭಾರತದ ಗಂಗಾ ಸಿಂಧೂ ಬ್ರಹ್ಮಪುತ್ರ ನರ್ಮದಾ ಇತ್ಯಾದಿ ನದಿಗಳನ್ನು ಹೆಚ್ಚು ಕಡಿಮೆ ಮಧ್ಯಮ ಗಾತ್ರದ ನದಿಗಳೆಂದು ಕರೆಯಬಹುದು……..

ನದಿ ಸಣ್ಣ ನೀರಾವರಿ ಯೋಜನೆಯ ಉದಾಹರಣೆ ನೋಡೋಣ…….

ಕರ್ನಾಟಕದ ನೇತ್ರಾವತಿ ನದಿಯ ಹೆಚ್ಚುವರಿ ನೀರನ್ನು ಚಿಕ್ಕಬಳ್ಳಾಪುರ ಕೋಲಾರದ ವರೆಗೆ ಹರಿಸುವ ಎತ್ತಿನಹೊಳೆ ಎಂಬ ಯೋಜನೆಯಿಂದಲೇ ( ಸರಿಯೋ – ತಪ್ಪೋ ನನಗೆ ಖಚಿತವಾಗಿ ತಿಳಿದಿಲ್ಲ )
ಕಾಡು ಭೂಮಿ ಜೀವಸಂಕುಲದ ಮೇಲಾಗುವ ಪರಿಣಾಮ ಅತ್ಯಂತ ಗಂಭೀರ ಮತ್ತು ಅಪಾಯಕಾರಿ ಎಂದು ಹೇಳಲಾಗುತ್ತದೆ.( ಚಿಕ್ಕಬಳ್ಳಾಪುರ – ಕೋಲಾರದ ಜನರ ನೀರಿನ ಅವಶ್ಯಕತೆ ಅದಕ್ಕಿಂತ ಹೆಚ್ಚು ಎನ್ನುವುದು ನಿಜ. ಆದರೆ ಪರ್ಯಾಯ ಮಾರ್ಗಗಳು ಹುಡುಕಬೇಕಿದೆ.)

ಈ ಎತ್ತಿನಹೊಳೆ ಯೋಜನೆಯ ಹಲವಾರು ಪಟ್ಟು ದೊಡ್ಡ ಯೋಜನೆ ನಿನ್ನೆ ಕೇಂದ್ರ ಬಜೆಟ್ ನಲ್ಲಿ ಘೋಷಿಸಿದ ನದಿಗಳ ಜೋಡಣೆ……..

ಅಂದರೆ ಪ್ರಕೃತಿಯ ಮೇಲೆ ಭೂಮಿಯ ಮೇಲೆ ಬೀಳಬಹುದಾದ ಒತ್ತಡ ಗಮನಿಸಿ. ಜೊತೆಗೆ ಎಲ್ಲರೂ ಅಂದಾಜಿಸಿದಂತೆ ನದಿಗಳ ಪ್ರವಾಹವನ್ನು ನಿಯಂತ್ರಿಸುವುದು ಮನುಷ್ಯ ಮಾತ್ರನಿಗೆ ಇನ್ನೂ ಅಸಾಧ್ಯವೇ ಸರಿ…………

ಇಡೀ ಕಾಡುಗಳು – ಊರುಗಳು – ಸಾಕಷ್ಟು ಜನರು ತಮ್ಮ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತಾರೆ. ಪ್ರಕೃತಿಯ ಶ್ರೇಷ್ಠ ಸೃಷ್ಟಿ ಜೀವಸಂಕುಲ ನಾಶವಾಗುತ್ತದೆ……..

ಈಗ ಯೋಚಿಸುವ ಸರದಿ ನಮ್ಮದು…..

ಪ್ರಕೃತಿಯನ್ನು ನಮ್ಮ ಅನುಕೂಲಕ್ಕೆ ತಕ್ಕಂತೆ ಉಪಯೋಗಿಸುವುದು ಮತ್ತು ತಿರುಗಿಸುವುದನ್ನು ಬಿಟ್ಟು ಪ್ರಕೃತಿಯ ಮೂಲ ಆಶಯಕ್ಕೆ ಅನುಗುಣವಾಗಿ ನಾವು ಬದುಕು ರೂಪಿಸಿಕೊಳ್ಳುವುದು. ಅಂದರೆ ನೀರು ಹೇಗೆ ತನ್ನ ಗುಣಕ್ಕೆ ತಕ್ಕಂತೆ ಚಲಿಸುತ್ತದೋ ಆ ಪ್ರದೇಶದಲ್ಲಿ ನಾವು ವಾಸಿಸಬೇಕೆ ಹೊರತು ನಾವು ವಾಸಿಸುವ ಜಾಗಕ್ಕೆ ಅದನ್ನು ಕರೆದುಕೊಳ್ಳಬಾರದು. ಸಣ್ಣ ಅವಶ್ಯಕ ಮತ್ತು ಅನಿವಾರ್ಯ ಅನುಕೂಲ ಹೊರತುಪಡಿಸಿ……

ಇಲ್ಲದಿದ್ದರೆ ಆಗಲೇ ಇದರಿಂದ ನಿಜವಾದ ದುರಂತ ಪ್ರಾರಂಭವಾಗುತ್ತದೆ. ಅದಕ್ಕೆ ಬದಲಾಗಿ ಆ ಯೋಜನೆಗೆ ಖರ್ಚುಮಾಡಲಾಗುತ್ತದೆ ಎಂದು ಹೇಳಲಾದ ಬೃಹತ್ ಹಣಕ್ಕಿಂತ ಕಡಿಮೆ ಖರ್ಚಿನಲ್ಲಿ ಅತ್ಯಂತ ಆಧುನಿಕ ಮತ್ತು ಬೃಹತ್ ಕೆರೆಗಳನ್ನು ನಿರ್ಮಿಸಿ ರೈತರಿಗೆ ಅತ್ಯುತ್ತಮ ಮಟ್ಟದ ನೀರಾವರಿ ಸೌಕರ್ಯ ಒದಗಿಸಬಹುದಾಗಿದೆ…..

ರೈತರಲ್ಲಿ ವೈಜ್ಞಾನಿಕ ಕೃಷಿ ಪದ್ದತಿಯನ್ನು ಪ್ರೋತ್ಸಾಹಿಸಿ ನದಿ ತೀರದ ಪ್ರದೇಶಗಳಲ್ಲಿ ಮತ್ತಷ್ಟು ಕೃಷಿಯೋಗ್ಯ ಭೂಮಿಯನ್ನು ಅಭಿವೃದ್ಧಿ ಪಡಿಸುವುದು ಮತ್ತೊಂದು ಉತ್ತಮ ಪ್ರಯೋಗ.

ಕೊಳವೆ ಮಾರ್ಗದ ಮುಖಾಂತರ ಕಡಿಮೆ ಖರ್ಚು ಮತ್ತು ಕಡಿಮೆ ಪರಿಸರ ಹಾನಿಯ ಮೂಲಕ ನೀರನ್ನು ಪೂರೈಸುವ ಯೋಜನೆಯ ಬಗ್ಗೆ ಸಹ ಯೋಚಿಸಬಹುದು.

ಇಷ್ಟೇ ಅಲ್ಲದೇ ಇನ್ನೂ ಹಲವಾರು ಕ್ರಮಗಳನ್ನು ಕೈಗೊಳ್ಳಬಹುದು. ಪ್ರಕೃತಿಯ ಸಹಜತೆಯನ್ನು ಕಾಪಾಡುತ್ತಾ ನಾವು ಬದುಕಲು ಪ್ರಯತ್ನಿಸಬೇಕು……

ಅಭಿವೃದ್ಧಿ ಬೇಕು ಆದರೆ ಅದಕ್ಕಾಗಿ ಪರಿಸರ ಮೇಲೆ ಹಲ್ಲೆ ತುಂಬಾ ಕಡಿಮೆ ಪ್ರಮಾಣದಲ್ಲಿ ಇರಬೇಕು. ಶೋಕಿಗಾಗಿ, ಓಟಿಗಾಗಿ, ಹಣಕ್ಕಾಗಿ, ಅಧಿಕಾರಕ್ಕಾಗಿ, ಹೆಸರಿಗಾಗಿ ಪರಿಸರ ನಾಶದ ಬೇಜವಾಬ್ದಾರಿ ಯೋಜನೆಗಳನ್ನು ಯಾವ ಸರ್ಕಾರಗಳು ಮಾಡಬಾರದು.

ಇದು ನನ್ನ ಅಲ್ಪ ತಿಳುವಳಿಕೆ. ಇದರ ಬಗ್ಗೆ ಆಳವಾಗಿ
ಮಾಹಿತಿ ಇದ್ದವರು ಮತ್ತಷ್ಟು ಹಂಚಿಕೊಳ್ಳಬಹುದು

ವಿವೇಕಾನಂದ. ಹೆಚ್.ಕೆ.

Share This Article
Leave a comment