ದಾರಿ ದೀಪ – 6

Team Newsnap
2 Min Read

ಡಾ.ಶ್ರೀರಾಮ ಭಟ್ಟ

ಮಹಾ ಸಾಮರಸ್ಯ


ಏಷ ಮ ಆತ್ಮಾ ಅಂತರ್ಹೃದಯೇ ಅಣೀಯಾನ್ ವ್ರೀಹೇರ್ವಾ ಯವಾದ್ವಾ
ಸರ್ಷಪಾದ್ವಾ ಶ್ಯಾಮಾಕಾದ್ವಾ ಶ್ಯಾಮಾಕತಂಡುಲಾದ್ವಾ
ಏಷ ಮ ಆತ್ಮಾ ಅಂತರ್ಹೃದಯೇ ಜ್ಯಾಯಾನ್ ಪೃಥಿವ್ಯಾ ಜ್ಯಾಯಾನ್
ಅಂತರಿಕ್ಷಾತ್ ಜ್ಯಾಯಾನ್ ದಿವಃ ಜ್ಯಾಯಾನೇಭ್ಯೋ ಲೋಕೇಭ್ಯಃ

(ಛಾಂದೋಗ್ಯ ಉಪನಿಷತ್ ೩.೧೪)
ನನ್ನ ಹೃದಯದಲ್ಲಿರುವ ಇದು ಅಕ್ಕಿಯ ಕಾಳಿಗಿಂತ ಜವೆಯ ಕಾಳಿಗಿಂತ ಸಾಸಿವೆ ಕಾಳಿಗಿಂತ ಸಾಮೆ ಕಾಳಿಗಿಂತ ಸಾಮೆಯ ತಿರುಳಿಗಿಂತ ಚಿಕ್ಕದಾಗಿದೆ; ನನ್ನ ಹೃದಯದಲ್ಲಿರುವ ಅದೇ ಭೂಮಿಗಿಂತ ಅಂತರಿಕ್ಷಕ್ಕಿಂತ ಸ್ವರ್ಗಕ್ಕಿಂತ ಎಲ್ಲ ಲೋಕಗಳಿಗಿಂತ ದೊಡ್ಡದಾಗಿದೆ. ಅದುವೆ ನನ್ನ ಆತ್ಮ.


ಛಾಂದೋಗ್ಯ ಉಪನಿಷತ್ತು ಸಾಮವೇದದ ಕೊನೆಯ ಭಾಗ. ಶಾಂಡಿಲ್ಯ ಎಂಬ ಋಷಿಯ ಅನುಭಾವದ ಮಾತು ಇದು. ವ್ಯಷ್ಟಿ ಮತ್ತು ಸಮಷ್ಟಿಯ ಅಂತರಂಗದ ಸಾಮರಸ್ಯ ಇಲ್ಲಿ ಅನನ್ಯವಾಗಿ ಅಭಿವ್ಯಕ್ತವಾಗಿದೆ. ವ್ಯಕ್ತಿ ಮತ್ತು ಪ್ರಕೃತಿಯ ಸಹಭಾವದ ಮಹಾಸಾಮರಸ್ಯವು ಸರಳವಾದ ಮಾತುಗಳಲ್ಲಿ ಧ್ವನಿಸಿದೆ. ಆದರೂ ಈ ಮಾತಿನ ನಡೆಗೆ ಅಂತರಂಗದ ಅಣುವಿನಿಂದ ಬಹಿರಂಗದ ಮಹತ್ತಿನ ವರೆಗೆ ಚಲಿಸುವ ವಿಶ್ವವ್ಯಾಪಕ ಗುಣ ಒದಗಿರುವುದನ್ನು ಗಮನಿಸಬಹುದಾಗಿದೆ.


ಜೀವಿಗಳನ್ನು ಚೇತನಾತ್ಮಕವಾಗಿಸುವ ಅಂತಸ್ಥ ಚೈತನ್ಯವನ್ನು ವಿಸ್ಮಯದಿಂದ ಪರಿಭಾವಿಸಿದ ಮಾತು ಇದು. ನನ್ನೊಳಗಿನ ಚೈತನ್ಯ ಮತ್ತು ನನ್ನೆದುರಿನ ಅಸಂಖ್ಯ ಜೀವಿಗಳ ಅಂತಸ್ಥ ಚೈತನ್ಯ ಬೇರೆ ಬೇರೆಯೇ? ಒಂದೆಯೇ? ಈ ಜಿಜ್ಞಾಸೆ ಸಹಸ್ರಮಾನಗಳಿಂದ ನಡೆದು ಬಂದಿದೆ. ಅದು ಏನೇ ಇರಲಿ, ಈ ಜಡ ಜಗದೊಳಗೊಂದು ಚೈತನ್ಯ ಪ್ರವಾಹ ಅನುಸ್ಯೂತವಾಗಿದೆ ಎನ್ನುವುದು ನಮ್ಮೆಲ್ಲರ ಅನುಭವ. ಚೈತನ್ಯವೇ (ಎನರ್ಜಿಯೇ) ಜಡ(ಮ್ಯಾಟರ್)ಆಗಿ ಪರಿವರ್ತನಗೊಳ್ಳುತ್ತದೆ ಎನ್ನುವುದು ಆಧುನಿಕ ವಿಜ್ಞಾನದ, ಅದರಲ್ಲೂ ಕ್ವಾಂಟಮ್ ಸಿದ್ಧಾಂತದ ತರುವಾಯದ ಪ್ರತಿಪಾದನೆ. ಜಡ ಜಗ ನಮ್ಮ ಕಣ್ಣ ಮುಂದಿದೆ. ಆದರೆ ಚೈತನ್ಯ? ಜಡದ ಸಂಚಲನದಿಂದ ಚೈತನ್ಯ ನಮಗೆ ಪ್ರತೀತವಾಗಬೇಕು ಅಷ್ಟೆ. ಚೈತನ್ಯದ ಸಂಚಲನ ಪರಿಕ್ರಮವನ್ನುಪ್ರಯೋಗಗಳ ಮೂಲಕ ಕಂಡುಕೊಳ್ಳಲು ಕಣವಿಜ್ಞಾನ ನಿರಂತರವಾಗಿ ಶ್ರಮಿಸುತ್ತಿದೆ. ಅದು ಸಾರ್ಥಕವಾದಂದು ಚೈತನ್ಯದ ಸ್ವರೂಪವು ನಮ್ಮ ಬುದ್ಧಿಯ ಕಣ್ಣಿಗೆ ಗೋಚರಿಸೀತು.


ನಿರಾಕಾರವೆ ಚೈತನ್ಯ (ಚಿನ್ಮಾತ್ರ)ದ ಆಕಾರ ಎನ್ನುತ್ತದೆ ಉಪನಿಷತ್ತು. ಬಹುಪಾಲು ಅದರ ನಿರೂಪಣೆಗೇ ಉಪನಿಷತ್ತು ತೊಡಗಿಕೊಂಡಿದೆ. ಅದು ಚೈತನ್ಯವನ್ನು ವ್ಯಕ್ತಿಯ ನೆಲೆಯಲ್ಲಿ ಆತ್ಮ(ಪ್ರತ್ಯಗಾತ್ಮ) ಎಂದೂ ಸಮಷ್ಟಿಯ ನೆಲೆಯಲ್ಲಿ ಬ್ರಹ್ಮ ಎಂದೂ ಸ್ಥೂಲವಾಗಿ ಹೆಸರಿಸಿದೆ. ಉಪನಿಷತ್ತಿನ ಬ್ರಹ್ಮವು ಪುರಾಣದ ಬ್ರಹ್ಮದೇವನಲ್ಲ. ಬ್ರಹ್ಮವು ಬೃಹತ್ತಾಗಿ ವಿಶ್ವವನ್ನೆಲ್ಲ ವ್ಯಾಪಿಸಿ ವಿಶ್ವದ ಕಣಕಣದಲ್ಲೂ ನೆಲಸಿದ ಚೈತನ್ಯ. ನಿರಾಕಾರವೆ ಸಾಕಾರವಾಗಿ ಪರಿವರ್ತನಗೊಳ್ಳುತ್ತದೆ ಎನ್ನುವುದು ಉಪನಿಷತ್ತಿನ ದರ್ಶನ. ಇದು ಎನರ್ಜಿಯೇ ಮ್ಯಾಟರ್ ಆಗಿ ರೂಪಾಂತರಗೊಳ್ಳುವ ವಿಜ್ಞಾನದ ಚಿಂತನೆಗೆ ಹತ್ತಿರವಾದದ್ದು. “ಅದನ್ನು (ಜಡ ಜಗವನ್ನು) ಸೃಷ್ಟಿಸಿ ಅದರೊಳಗೆ ತಾನೂ ಸೇರಿಕೊಂಡಿತು”(ತತ್ ಸೃಷ್ಟಾ÷್ವ ತದೇವಾನುಪ್ರಾವಿಶತ್) ಎನ್ನುವ ತೈತ್ತಿರೀಯ ಉಪನಿಷತ್ತಿನ ಮಾತನ್ನು ಗಮನಿಸಬಹುದು.


ಮುಖ್ಯವಾಗಿ ವ್ಯಕ್ತಿಯೊಳಗಿನ ಕಾಳಿಗಿಂತ ಚಿಕ್ಕದಾದ ಕಣವೆ ವಿಶ್ವದ ಕಣ ಕಣದಲ್ಲೂ ಇದೆ; ವಿಶ್ವವನ್ನೆಲ್ಲ ಬೃಹತ್ತಾಗಿ ವ್ಯಾಪಿಸಿದುದರ ಕಣವೆ ವ್ಯಕ್ತಿಯೊಳಗೂ ಇದೆ ಎನ್ನುವ ಕಾಣ್ಕೆ ಇಂದಿಗೂ ಪ್ರಸ್ತುತ. ವ್ಯಕ್ತಿ ಮತ್ತು ಪ್ರಕೃತಿ ಅಂತರAಗದಲ್ಲಿ ಬೇರೆ ಬೇರೆ ಅಲ್ಲ, ಒಂದೇ! ಇಡಿಯೊಳಗಿನ ಬಿಡಿ, ಬಿಡಿಯೊಳಗಿನ ಇಡಿ. ವ್ಯಕ್ತಿಯೊಳಗೆ ಪ್ರಕೃತಿ, ಪ್ರಕೃತಿಯೊಳಗೆ ವ್ಯಕಿ. ನಾನು ಪ್ರಕೃತಿಯ ಅವಿಭಾಜ್ಯ ಅಂಗ; ಪ್ರಕೃತಿ ನನ್ನೊಳಗಣ ಅವಿನಾಭಾವ. ಜೀವಿ ಮತ್ತು ಪ್ರಕೃತಿಗಳ ಸದಾಸಾಮರಸ್ಯವನ್ನು ಅನುಭವಿಸದೆ ಬದುಕು ಹಸನಾಗುವುದು ಹೇಗೆ!

Share This Article
Leave a comment