ದಾರಿ ದೀಪ – 9

Team Newsnap
3 Min Read

ಡಾ.ಶ್ರೀರಾಮ ಭಟ್ಟ

ಆದರ್ಶದ ಶಿಖರ


ಇಂದು ಬಳಕೆಯಲ್ಲಿಲ್ಲದ, ಕೋಶಗಳಲ್ಲಿ ಮಾತ್ರ ಕಾಣುವ ಪದವೊಂದಿದೆ. ಅದೊಂದು ಪರಿಭಾಷೆ ಅಥವಾ ಪರಿಕಲ್ಪನೆ ಎನ್ನಬಹುದೇನೋ. ಇಂದಿನ ಸಾರ್ವತ್ರಿಕ ಬದುಕಿನಲ್ಲಿ ಆ ಪರಿಕಲ್ಪನೆಯನ್ನು ಎಂದಿಗಿAತ ಹೆಚ್ಚಾಗಿ ಮನಗಾಣಬೇಕಾದ ಅಗತ್ಯ ಇದೆ. ಅದೊಂದು ಎಲ್ಲರೂ ಏರಲಾರದ ಗೌರೀಶಂಕರ ಶಿಖರಸ್ಥಿತಿ. ಆದರೂ ಮೌಂಟ್ ಎವರೆಸ್ಟ್ ಬಗ್ಗೆ ಕೇಳಿದವರಿಗೆಲ್ಲ ತಾವೂ ಏರಬೇಕು ಎಂಬ ಆಸೆ ಕನಸು ಮನವನ್ನು ಮುತ್ತದೆ ಇರಲಾರದು. ಅಂಥ ಆದರ್ಶದ ಶಿಖರ ಸ್ಥಿತಿಯ ಪದ ಅಥವಾ ಪರಿಕಲ್ಪನೆ ‘ಆನೃಶಂಸ್ಯಮ್’. ಈ ಪದವನ್ನು ಹೇಳಲೂ ಕೇಳಲೂ ಕಷ್ಟ ಎನಿಸಿತೆ! ಮೆಲ್ಲಗೆ ಈ ಪದದ ಅಂಗಾಂಗಗಳನ್ನು ಬಿಡಿಸಿ ನೋಡೋಣ.


ನೃಶಂಸ (ಕ್ರೂರ) ಅ+ನೃಶಂಸ (ಕ್ರೂರ ಅಲ್ಲದವ); ಅನೃಶಂಸದ ಭಾವಾರ್ಥ ‘ಆನೃಶಂಸ್ಯ’ (ಕ್ರೌರ್ಯ ಇಲ್ಲದಿರುವಿಕೆ). ನೃಶಂಸ ಪದದ ನೈಜ ಅರ್ಥವನ್ನು ಪಂಚತಂತ್ರದ ಈ ಪದ್ಯದಲ್ಲಿ (೩:೧೩೫) ನೋಡಬಹುದು:

ಯೇ ನೃಶಂಸಾ ದುರಾತ್ಮಾನಃ ಪ್ರಾಣಿನಾಂ ಪ್ರಾಣನಾಶಕಾಃ ಉದ್ವೇಜನೀಯಾ ಭೂತಾನಾಂ ವ್ಯಾಲಾ ಇವ ಭವನ್ತಿ ತೇ
“ಜೀವಿಗಳ ಜೀವ ಕಳೆಯುವ ದುಷ್ಟರು ನೃಶಂಸರು. ಅವರು ಕ್ರೂರ ಪ್ರಾಣಿಗಳಂತೆ ಜೀವಿಗಳನ್ನು ಉದ್ವೇಗ ಗೊಳಿಸುವರು.” ನೃಶಂಸ ಎಂದರೆ ಕ್ರೂರ. ಅದರ ನಿರ್ವಚನ ‘ನೃ_ನ್ ಶಂಸತಿ ಇತಿ ನೃಶಂಸಃ’ ಮನುಷ್ಯರನ್ನು, ಜೀವಿಗಳನ್ನು ಹಿಂಸಿಸುವವನು ನೃಶಂಸ. ಶಂಸ ಎಂದರೆ ಹಿಂಸೆ (ಶಂಸ ಹಿಂಸಾಯಾಮ್). ಕ್ರೂರಿ ಹಿಂಸಕ ಅಲ್ಲದವನು ಅನೃಶಂಸ (ನ ನೃಶಂಸಃ). ಅನೃಶಂಸ ಎನ್ನುವುದು ವಿಶೇಷಣ. ಅದನ್ನು ಭಾವಾರ್ಥಕ ನಾಮಪದವಾಗಿ ಪರಿವರ್ತಿಸಿದಾಗ ಅದು ಆನೃಶಂಸ್ಯಂ ಎಂದಾಗುತ್ತದೆ. ಅಲ್ಲಿಗೆ ಕ್ರೌರ್ಯ ಇಲ್ಲದಿರುವಿಕೆಯೇ ಆನೃಶಂಸ್ಯ. ಅವಯವಾರ್ಥವನ್ನು ಮೀರಿ ಈ ಪದವನ್ನು ತುಂಬ ಸೂಕ್ಷ ಸ್ತರದಲ್ಲಿ ಬಳಸಲಾಗಿದೆ ಎನ್ನುವುದನ್ನೂ ಗಮನಿಸಬೇಕು. ಯಾವುದೇ ಬಗೆಯಲ್ಲೂ ಮನದ ಮೂಲೆಯಲ್ಲೂ ಕೊಂಚವೂ ಕ್ರೌರ್ಯವಿಲ್ಲದಂಥ ಸ್ಥಿತಿಯನ್ನು ಅಭಿವ್ಯಕ್ತಿಸಬೇಕಾದ ಸಂದರ್ಭದಲ್ಲಿ ಮಾತ್ರ ಈ ಪದದ ಪ್ರಯೋಗ ಕಾಣುತ್ತದೆ-ಮಹಾಭಾರತದಲ್ಲಿ ಮತ್ತು ಧರ್ಮಶಾಸ್ತçದಲ್ಲಿ. ಇದನ್ನು ಸ್ಪಷ್ಟಪಡಿಸಿಕೊಳ್ಳಲು ಮಹಾಭಾರತದ ಸಂದರ್ಭವನ್ನು ನೋಡಬಹುದು.


ಪ್ರಸಿದ್ಧವಾದ ‘ಯಕ್ಷಪ್ರಶ್ನ’ ಪ್ರಸಂಗ. ಯಕ್ಷ-ಈ ಜಗದಲ್ಲಿ ಶ್ರೇಷ್ಠವಾದ ಧರ್ಮ ಯಾವುದು? ಯುಧಿಷ್ಠಿರ-ಆನೃಶಂಸ್ಯ ಶ್ರೇಷ್ಠವಾದ ಧರ್ಮ. ಯಕ್ಷ ಹಲವು ಪ್ರಶ್ನೆಗಳನ್ನೇನೋ ಕೇಳಿದ. ಇದು ಯಕ್ಷಪ್ರಶ್ನೆಯ ಹೃದಯ. ಏಕೆಂದರೆ ಯುಧಿಷ್ಠಿರನ ಈ ಉತ್ತರ ಮಾತ್ರ ಯಕ್ಷನ ತೀವ್ರ ನಿಕಷಕ್ಕೆ ಒಳಗಾಯಿತು. ಯಕ್ಷ ಹೇಳಿದ: “ನಿನ್ನ ಸಮರ್ಪಕವಾದ ಉತ್ತರಗಳು ನನಗೆ ತುಂಬ ಸಂತಸ ಕೊಟ್ಟಿವೆ. ಹಾಗಾಗಿ ತೀರಿಹೋದ ನಾಲ್ವರು ತಮ್ಮಂದಿರಲ್ಲಿ ಒಬ್ಬನನ್ನು ಬದುಕಿಸುವೆನು. ಯಾರನ್ನು ಬದುಕಿಸಲಿ ಹೇಳು.” ‘ನಕುಲ ಬದುಕಲಿ’ ಎಂದು ಯುಧಿಷ್ಠಿರ ಕೇಳಿಕೊಂಡ. ಯಕ್ಷ ಮತ್ತೆ ಕುಟುಕಿದ: “ನಿನ್ನ ಸ್ವಂತ ತಾಯಿಯ ಮಕ್ಕಳು ಭೀಮಾರ್ಜುನರು ಬೇಡವೆ? ಅವರಿಲ್ಲದೆ ಯುದ್ಧ ಗೆಲ್ಲಬಲ್ಲೆಯಾ? ನಕುಲ ನಿನ್ನ ಮಲತಾಯಿಯ ಮಗ!”


ಯುದ್ಧ ಯುಧಿಷ್ಠಿರನ ಕನಸಾಗಿರಲಿಲ್ಲ. ಅವನಿಗೆ ಐದು ಹಳ್ಳಿ ಸಾಕಾಗಿತ್ತು. ಅವನ ಉತ್ತರ ಬೇರೆಯೇ ಆಗಿತ್ತು: “ಹೌದು, ನನ್ನ ಇಬ್ಬರು ತಾಯಂದಿರೂ ‘ಸಪುತ್ರೆ’ಯರಾಗಿರಬೇಕು ಎನ್ನುವುದೇ ನನ್ನ ದೃಢ ನಿಶ್ಚಯ. ನನಗೆ ಮಲತಾಯಿಯೂ ಸ್ವಂತ ತಾಯಿಯೇ.” ತನ್ನನ್ನೇ ಸುಟ್ಟು ಸತ್ತುಕೊಂಡ ತಾಯಿಯ ಮನವನ್ನು ನೋಯಿಸಲಾರದಷ್ಟು ಯುಧಿಷ್ಠಿರನ ಮನಸ್ಸು ಅಕ್ರೂರ. ಯಕ್ಷ ಉದ್ಗರಿಸಿದ: “ನಿನಗೆ ಸಂಪತ್ತಿಗಿAತ ಕಾಮನೆಗಳಿಗಿಂತ ಆನೃಶಂಸ್ಯವೆ ಹಿರಿದೆನಿಸಿತಲ್ಲ. ನಿನ್ನ ತಮ್ಮಂದಿರೆಲ್ಲ ಬದುಕಲಿ.” (ತಸ್ಯ ತೇ ಅರ್ಥಾಚ್ಚ್ ಕಾಮಾಚ್ಚ ಆನೃಶಂಸ್ಯಂ ಪರಂ ಮತಂ/ತಸ್ಮಾತ್ತೇ ಭ್ರಾತರಃ ಸರ್ವೇ ಜೀವಂತು). ಯಕ್ಷ(ಯಮ) ಒಡ್ಡಿದ ನಿಕಷದಲ್ಲಿ ಯುಧಿಷ್ಠಿರನ ಮನದಾಳದ ಅಕ್ರೌರ್ಯ ಹೊಳೆಹೊಳೆಯಿತು. ‘ಆನೃಶಂಸ್ಯದಿಂದ ಸಂತುಷ್ಟನಾಗಿದ್ದೇನೆ’ (ಆನೃಶಂಸ್ಯೇನ ತುಷ್ಟೋ$ಸ್ಮಿ) ಎಂದು ಮತ್ತೆ ಮತ್ತೆ ಯಮ ಹೇಳಿದ. ಚಿತ್ರರಥ ಗಂಧರ್ವನಿಗೆ ಸೆರೆ ಸಿಕ್ಕಾಗಲೂ ದುರ್ಯೋಧನನನ್ನು ಕಾಪಾಡಿದ್ದು ಯುಧಿಷ್ಠಿರನ ಅಕ್ರೌರ್ಯವೆ. ಬೇಟೆಯಿಂದ ಹೈರಾಣಾಗಿ ಹೋದ ಜಿಂಕೆಗಳು ಯುಧಿಷ್ಠಿರನ ಕನಸಿನಲ್ಲಿ ಕಾಣಿಸಿಕೊಂಡು ತಮ್ಮ ಸಂತತಿಯ ಉಳಿವಿಗಾಗಿ ಬೇರೆಡೆಗೆ ಹೋಗುವಂತೆ ಕೇಳಿಕೊಂಡ ಸಂದರ್ಭ. ಮಾರನೆಯ ಬೆಳಿಗ್ಗೆಯೇ ಯುಧಿಷ್ಠಿರ ಪರಿವಾರದೊಂದಿಗೆ ಕಾಮ್ಯಕ ವನಕ್ಕೆ ಹೊರಟುಹೋದ. ಇದು ಆನೃಶಂಸ್ಯದ ಆದರ್ಶ ಸ್ಥಿತಿಯ ಶಿಖರ.


ಇಂಥ ಯುಧಿಷ್ಠಿರನನ್ನೂ ಯುದ್ಧ ಬಿಡಲಿಲ್ಲ ಎನ್ನುವುದು ವೈಚಿತ್ರö್ಯ. ಆದರೆ ಯುದ್ಧೋನ್ಮಾದದಿಂದ ಆತ ವಿಜೃಂಭಿಸಲಿಲ್ಲ; ಯುದ್ಧ ಗೆದ್ದೂ ಸಂತಸ ಪಡಲಿಲ್ಲ. ಬದಲಾಗಿ ನಿರಂತರವಾಗಿ ಪರಿತಪಿಸಿದ. ಸಂದರ್ಭ ನಿನ್ನನ್ನು ನಿಯೋಜಿಸುತ್ತದೆ (ಪ್ರಕೃತಿಸ್ತ್ವಾಂ ನಿಯೋಕ್ಷ್ಯತಿ) ಎಂಬ ಭಗವದ್ಗೀತೆಯ ಮಾತು ನಿಜವೇನೊ! ಆತನ ಹೆಸರೇ ವಿಚಿತ್ರ! ಯುಧಿಷ್ಠಿರ (ಯುದ್ಧದಲ್ಲಿ ನೆಲೆ ನಿಂತವನು) ನೈಜತೆಯಲ್ಲಿ ಆನೃಶಂಸ್ಯಪ್ರಜ್ಞೆಯ ಪ್ರತೀಕ. ಚರಿತ್ರೆಯ ಸಂದರ್ಭ, ಬದುಕಿನ ವೈಚಿತ್ರö್ಯ ಏನೇ ಇದ್ದರೂ, ಹೇಗೇ ಇದ್ದರೂ ಆನೃಶಂಸ್ಯಪ್ರಜ್ಞೆಯನ್ನು ಇಂದಿಗೂ ಎಂದಿಗೂ ಕಾಪಿಟ್ಟುಕೊಳ್ಳಬೇಕಾದುದು ಅತ್ಯಗತ್ಯ. ಅದು ಆದರ್ಶದ ಶಿಖರ.

Share This Article
Leave a comment