ದಾರಿ ದೀಪ – 14

Team Newsnap
3 Min Read

ಡಾ.ಶ್ರೀರಾಮ ಭಟ್ಟ

ಪ್ರಬೋಧ ವಿನಯಗಳ ಅವಳಿ


ಸುತೌಲಕ್ಷ್ಮಣಶತ್ರುಘ್ನೌ ಸುಮಿತ್ರಾ ಸುಷುವೇ ಯಮೌ
ಸಮ್ಯಗಾರಾಧಿತಾ ವಿದ್ಯಾ ಪ್ರಬೋಧವಿನಯಾವಿವ.
ಸರಿಯಾದ ಕ್ರಮದಲ್ಲಿ ಕಲಿತ, ಕಲಿಸಿದ ವಿದ್ಯೆಯು ಪ್ರಬೋಧ ಮತ್ತು ವಿನಯಗಳನ್ನು ಹುಟ್ಟುಹಾಕುವಂತೆ, ಸುಮಿತ್ರೆಯು ಲಕ್ಷö್ಮಣ ಶತ್ರುಘ್ನರೆಂಬ ಅವಳಿ ಮಕ್ಕಳನ್ನು ಹಡೆದಳು.’


ಕಾಳಿದಾಸನ ರಘುವಂಶ ಮಹಾಕಾವ್ಯದಲ್ಲಿ ಕಾಣುವ ಅಪರೂಪದ ಮಾತು ಇದು. ರಘು ಮಹಾರಾಜನ ವಂಶದ ರಾಜರ ಚರಿತೆಯ ನೆಪದಲ್ಲಿ ರಾಜತ್ವ ಮೀಮಾಂಸೆಯನ್ನೂ, ಮನುಷ್ಯ ಜೀವನದ ಮೌಲ್ಯವಿವೇಚನೆಯನ್ನೂ ಸಾರ್ಥಕವಾಗಿ ನಡೆಸಿದ ಮಹಾಕಾವ್ಯ ರಘುವಂಶ. ರಾಮನೂ ರಘುವಿನ ವಂಶಕ್ಕೆ ಸೇರಿದವನು. ಇಡೀ ರಾಮಾಯಣ ತುಂಬ ಅಡಕವಾಗಿ ಇಲ್ಲಿ ಪುನಃಕಥಿತವಾಗಿದೆ. ಸುಮಿತ್ರೆಯು ಅವಳಿ ಮಕ್ಕಳನ್ನು ಹಡೆದದ್ದನ್ನೆ ನೆಪವಾಗಿಸಿಕೊಂಡು ಕಾಳಿದಾಸ ಪರಿಪೂರ್ಣ ಶಿಕ್ಷಣದ ಬಗ್ಗೆ ಮಾತನಾಡುತ್ತಾನೆ-ಕೇವಲ ಒಂದು ಉಪಮೆಯ ಮೂಲಕ. ಅದೊಂದು ಅತ್ಯಂತ ಸಾರ್ಥಕ ಉಪಮೆ.


ಮಾಹಿತಿ ಅಥವಾ ವಿಷಯಪರಿಣತಿ ಮತ್ತು ಸಜ್ಜನಿಕೆ ಉತ್ತಮ ಶಿಕ್ಷಣದ ಫಲಗಳು; ಒಳ್ಳೆಯ ಶಿಕ್ಷಣದಿಂದ ಸಿಗಬೇಕಾದ ಸಂಗತಿಗಳು. ಪ್ರಬೋಧ ಎಂದರೆ ಮಾಹಿತಿ ಅಥವಾ ವಿಷಯಪರಿಣತಿ. ಅದು ಕೇವಲ ಅರಿವನ್ನು ಹೆಚ್ಚಿಸುವಂಥದು, ಜ್ಞಾನಸಂಬಂಧಿಯಾದುದು. ವಿನಯ ಎಂದರೆ ಉತ್ತಮ ಮಾನವೀಯ ನಡೆವಳಿಕೆಯ ಸಜ್ಜನಿಕೆ. ವಿಶೇಷವಾದ ನಯವೆ ವಿನಯ. ಅವೆರಡನ್ನೂ ನೀಡುವಂಥದು ಶಿಕ್ಷಣ ಅಥವಾ ವಿದ್ಯೆ. ಕೇವಲ ಪ್ರಬೋಧವನ್ನು ನೀಡಿದ ಶಿಕ್ಷಣ ಪರಿಪೂರ್ಣ ಅಲ್ಲ. ಹೃದಯ ಸಂಸ್ಕಾರರೂಪ ವಿನಯವೂ ದಕ್ಕಿದಾಗ ಅದು ಪರಿಪೂರ್ಣ.

ಸಾಕ್ಷರತೆಗೂ ವಿದ್ಯಾವಂತಿಕೆಗೂ ಅಂತರ ಇದೆ. ವಿದ್ಯೆ ಇಲ್ಲದ ಸಾಕ್ಷರರನ್ನೂ, ಅಕ್ಷರ ಕಲಿಯದ ವಿದ್ಯಾವಂತರನ್ನೂ ದಿನವೂ ನೋಡುತ್ತಿದ್ದೇವೆ. ಕೇವಲ ಮಾಹಿತಿ ಅಥವಾ ವಿಷಯ ಪರಿಣತಿ ಅಪಾಯಕಾರಿ. ಅಕ್ಷರದ ಮೂಲಕ ಪಡೆದ ಮಾಹಿತಿಯನ್ನು ವಿನಾಶಕ್ಕೂ ಸಾಮಾಜಿಕ ಸಂಘರ್ಷ, ಆಘಾತಗಳಿಗೂ ಬಳಸಬಹುದು. ಸಾಕ್ಷರ ಹಿಂದುಮುಂದಾದರೆ ರಾಕ್ಷಸ ಆಗಬಹುದು. ಆದರೆ ನೈತಿಕ ಮೌಲ್ಯಗಳನ್ನು ವಿದ್ಯೆಯ ಮೂಲಕ ಪಡೆದವನು ಸಮಾಜಘಾತಕಿ ಆಗಲಾರ. ಹೃದಯದಿಂದ ವಿದ್ಯಾವಂತನಾದವನು ಎಂದಿಗೂ ವಿದ್ಯಾವಂತನೇ. ಸರಸ ಯಾವಕಡೆಯಿಂದ ಓದಿದರೂ ಸರಸವೇ. ರಸ ಎಂದರೆ ವಿದ್ಯೆಯ ಸಾರ. ಅದೇ ಸರಸ್ವತೀ ತತ್ವ. ಇದನ್ನು ಚಿಂತಿಸಿದ ಸುಭಾಷಿತವೊಂದಿದೆ:


ಸಾಕ್ಷರಾ ವಿಪರೀತಾಶ್ಚೇತ್ ರಾಕ್ಷಸಾ ಏವ ಕೇವಲಮ್
ಸರಸಃ ವಿಪರೀತಶ್ಚೇತ್ ಸರಸತ್ವಂ ನ ಮುಂಚತಿ

ಮಾಹಿತಿ ಮತ್ತು ಮೌಲ್ಯಗಳು ಶಿಕ್ಷಣದ ಅವಳಿ ಮಕ್ಕಳು. ಇಂಥ ಶಿಕ್ಷಣಕ್ಕೂ ಸುಮಿತ್ರೆಗೂ ಎಲ್ಲಿಯ ಹೋಲಿಕೆ! ಇಂಥ ಶಿಕ್ಷಣವೆ ಮನುಷ್ಯನಿಗೆ ಒಳ್ಳೆಯ ಮಿತ್ರ (ಸುಮಿತ್ರ) ತಾನೆ! ಕವಿ ವಿದ್ಯೆ ಮತ್ತು ಸುಮಿತ್ರೆಯನ್ನು ಹತ್ತಿರ ತಂದು ಅಥವಾ ಉಪಮಾನ ಉಪಮೇಯಗಳಾಗಿಸಿ ಇದನ್ನೇ ಧ್ವನಿಸಿದ್ದಾನೆ. ಕೊನೆಗೂ ಮೌಲ್ಯಾನುಸರಣೆಯಲ್ಲೇ ಶಿಕ್ಷಣಕ್ಕೆ ಸಾರ್ಥಕತೆ. ಅದರಿಂದ ವ್ಯಕ್ತಿತ್ವವಿಕಾಸ. ಈ ತಾದಾತ್ಮದಿಂದಾಗಿ ಕಾಳಿದಾಸನು ಶಿಕ್ಷಣವನ್ನು ವಿನಯವೆಂದೇ ಕರೆದ:


ಪ್ರಜಾನಾಂ ವಿನಯಾಧಾನಾತ್ ರಕ್ಷಣಾದ್ ಭರಣಾದಪಿ
ಸ ಪಿತಾ ಪಿತರಸ್ತಾಸಾಂ ಕೇವಲಂ ಜನ್ಮಹೇತವಃ.

‘ಪ್ರಜೆಗಳಿಗೆ ವಿನಯವನ್ನೂ ರಕ್ಷಣೆಯನ್ನೂ ಪೋಷಣೆಯನ್ನೂ ರಾಜನೇ ಒದಗಿಸುತ್ತಿದ್ದುದರಿಂದ ಪ್ರಜೆಗಳಿಗೆ ಆತನೇ ತಂದೆ ಎನಿಸಿದ್ದ; ಪ್ರಜೆಗಳ ತಂದೆಯAದಿರು ಕೇವಲ ಹುಟ್ಟಿಗೆ ಕಾರಣ ಎನಿಸಿದ್ದರು.’ ರಕ್ಷಣೆ ಪೋಷಣೆಗಳ ಜೊತೆ ಪ್ರಜೆಗಳಿಗೆ ಶಿಕ್ಷಣವನ್ನೂ ರಾಜನೆ ವ್ಯವಸ್ಥೆ ಮಾಡಿದ್ದನು ಎನ್ನುವುದು ಇಲ್ಲಿಯ ಭಾವ. ಇಲ್ಲಿ ವಿನಯ ಪದ ಶಿಕ್ಷಣವನ್ನು ಸೂಚಿಸುತ್ತದೆ. ‘ವಿನಯಸ್ಯ ಶಿಕ್ಷಾಯಾಃ…’ ಎಂದು ಮಲ್ಲಿನಾಥ ಸೂರಿ ವ್ಯಾಖ್ಯಾನಿಸಿದ್ದಾನೆ. ಸಂಸ್ಕೃತದಲ್ಲಿ ಶಿಕ್ಷಾ ಎಂದರೆ ಶಿಕ್ಷಣ. ದೇಶವನ್ನು ಮುನ್ನಡೆಸುವಲ್ಲಿ ಶಿಕ್ಷಣದ ಪಾತ್ರ ಮಿಕ್ಕೆಲ್ಲಕ್ಕಿಂತ ಮುಖ್ಯವಾದುದು ಎನ್ನುವುದು ಗೊತ್ತೇ ಇದೆ. ಶಿಕ್ಷಣವು ಮಾನವ ಸಂಪನ್ಮೂಲವನ್ನು ಸೃಷ್ಟಿಸುವಂಥದು. ಅದಕ್ಕಾಗಿಯೇ ಅದು ಯಾವುದೇ ರಾಜ್ಯಾಡಳಿತದ, ಸರಕಾರದ ಪ್ರಥಮ ಕರ್ತವ್ಯ. ಶ್ಲೋಕದಲ್ಲಿ ವಿನಯ ಪದ ಮೊದಲಿಗೆ ಇರುವುದನ್ನು ಗಮನಿಸಬೇಕು. ಶಿಕ್ಷಣ-ರಕ್ಷಣ-ಭರಣ ಇದು ಆಡಳಿತದಲ್ಲಿ ಆದ್ಯತೆಯ ಕ್ರಮ. ಇಂದು ಶಿಕ್ಷಣವನ್ನು ಸರಕಾರ ನಿರ್ವಹಿಸಲಾಗದೆ ದುಡ್ಡು ದೋಚುವ ಖಾಸಗೀಕರಣಕ್ಕೆ ಒಳಪಡಿಸುತ್ತಿರುವುದು ಶೋಚನೀಯ, ಯೋಚನೀಯ.


ಆಧುನಿಕ ಕಾಲದ ಶಿಕ್ಷಣತಜ್ಞರು ‘ಒಟ್ಟು ನಡತೆಯ ಪರಿವರ್ತನೆಯೇ ಶಿಕ್ಷಣ’ (Education is behavioural change) ಎಂದು ವ್ಯಾಖ್ಯಾನಿಸಿದ್ದನ್ನು ಇಲ್ಲಿ ಗಮನಿಸಬಹುದು. ಇಂಥ ವಿನಯವೆ ವಿದ್ಯೆಯ ಫಲ ಎನ್ನುವುದು ನಮ್ಮ ಹಿರಿಯರ ತಿಳಿವಳಿಕೆ. (ವಿದ್ಯಾ ದದಾತಿ ವಿನಯಮ್). ವಿನಯ ಬರಿ ಬಾಗುವುದಲ್ಲ; ಒಳಗಿನ ವ್ಯಕ್ತಿತ್ವ ಮಾಗುವುದು. ಒಳಗೆ ಮಾಗದೆ ಹೊರಗೆ ಬಾಗುವುದು ವಂಚಕತನದ ಅತಿವಿನಯ.

Share This Article
Leave a comment