ನಾನು ಹಾಗೂ ಸಚಿವ ಗೋಪಾಲಯ್ಯ ಒಂದೇ ಪಕ್ಷದಲ್ಲಿ ಇದ್ದೆವು. ನಮಗೆ ಕೊಟ್ಟ ಕಾಟ ಭಗವಂತನಿಗೆ ಮಾತ್ರ ಗೊತ್ತು. ಆ ಪಕ್ಷ ತೊರೆದು ನಾನು, ಅವರು ಬಿಜೆಪಿ ಸೇರಿ ಸುಖವಾಗಿದ್ದೇವೆ ಎಂದು ಜೆಡಿಎಸ್ ವಿರುದ್ಧ ಸಚಿವ ನಾರಾಯಣ್ ಗೌಡ ಗುಡುಗಿದ್ದಾರೆ.
ಮದ್ದೂರು ಉತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ನಾರಾಯಣಗೌಡ ಅವರು, ಜನರ ಸೇವೆ ಮಾಡುವ ಶಕ್ತಿಯನ್ನು ಪಕ್ಷ ನೀಡಿದೆ. ಬಿಜೆಪಿ ಸೇರಿದ ಬಳಿಕ ನಮ್ಮನ್ನು ಸಚಿವರನ್ನಾಗಿ ಬಿಜೆಪಿ ಮಾಡಿದೆ. ಈ ಮೂಲಕ ರಾಜ್ಯವನ್ನು ಸುತ್ತಾಡಿ ಜನರ ಸೇವೆ ಮಾಡಲು ಅವಕಾಶ ನೀಡಿದೆ. ಅದೇ ರೀತಿ ಕೆ.ಆರ್.ಪೇಟೆ ಕ್ಷೇತ್ರದ ಅಭಿವೃದ್ಧಿಗೆ 2 ಸಾವಿರ ಕೋಟಿ ಅನುದಾನವನ್ನು ಕೊಟ್ಟಿದೆ ಎಂದರು.
ಮುಂದಿನ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಬಿಜೆಪಿ ನಾಲ್ಕೈದು ಸ್ಥಾನವನ್ನ ಗೆಲ್ಲುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಸಚಿವರಾದ ನಾರಾಯಣಗೌಡ, ಗೋಪಾಲಯ್ಯ, ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಭಾಗಿಯಾಗಿದ್ದರು.
ಈ ಕಾರ್ಯಕ್ರಮದಲ್ಲಿ ವಿವಿಧ ಪಕ್ಷದ ಮುಖಂಡರು, ಕಾರ್ಯಕರ್ತರು ಬಿಜೆಪಿ ಸೇರ್ಪಡೆಯಾದರು. ಸಾಮೂಹಿಕ ವಿವಾಹ, ಆರೋಗ್ಯ ಶಿಬಿರ ಕಾರ್ಯಕ್ರಮ ಕೂಡ ಇತ್ತು. ಕಾರ್ಯಕ್ರಮದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನ ಭಾಗಿಯಾಗಿದ್ದರು.