ಪ್ರವಾಸಿಗರನ್ನು ಕೈಬೀಸಿ ಕರೆಯವ ಕೆ ಆರ್ ಪೇಟೆ ದೇವಿರಮ್ಮಣ್ಣಿ ಕೆರೆ

Team Newsnap
2 Min Read
  • ಕೆ.ಆರ್.ನೀಲಕಂಠ, ಕೆ ಆರ್ ಪೇಟೆ

ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆ ಪಟ್ಟಣದ ನಾಗಮಂಗಲ ರಸ್ತೆಯಲ್ಲಿ 250 ಎಕರೆ ವಿಸ್ತೀರ್ಣದಲ್ಲಿ ವಿಶಾಲವಾದ ಸಾಗರದಂತೆ ಕಾಣುತ್ತಿರುವ ದೇವಿರಮ್ಮಣ್ಣಿ ಕೆರೆಯು ತುಂಬಿತುಳುಕುತ್ತಿದೆ. ಕೆರೆಯ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಎರಡು
ಕಣ್ಣುಗಳು ಸಾಲದಾಗಿದೆ. ಕೆರೆಯ ನೀರು ಕೋಡಿ ಬಿದ್ದು ಹರಿಯುತ್ತಿರುವುದರಿಂದ
ಸುಂದರವಾದ ಫಾಲ್ಸ್ ನಿರ್ಮಾಣವಾಗಿದ್ದು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.

ಮೈಸೂರು ಮಹಾರಾಜರ ಉಪಪತ್ನಿಯಾದ ಮಹಾರಾಣಿ ದೇವಿರಮ್ಮಣ್ಣಿ ಅವರು
ಲೋಕಕಲ್ಯಾಣಾರ್ಥವಾಗಿ ನಿರ್ಮಿಸಿರುವ ದೇವೀರಮ್ಮಣ್ಣಿ ಕೆರೆಯು ಇತ್ತೀಚೆಗೆ ಸುರಿದ
ಭಾರೀ ಮಳೆಯಿಂದಾಗಿ ಕೇವಲ ಒಂದೇ ವಾರದಲ್ಲಿ ಕೆರೆಯು ಸಂಪೂರ್ಣವಾಗಿ
ಭರ್ತಿಯಾಗಿದ್ದು ಕೋಡಿ ಬಿದ್ದು ಕೆರೆಯನೀರು ರಭಸವಾಗಿ ಹರಿಯುತ್ತಿರುವುದರಿಂದ
ಸುಂದರವಾದ ಫಾಲ್ಸ್ ನಿರ್ಮಾಣವಾಗಿದ್ದು ಕೆರೆಯ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಪರಿಸರ ಪ್ರೇಮಿಗಳು ಹಾಗೂ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.

kr pete2

ಕೆರೆ ಅಭಿವೃದ್ಧಿಗೆ 5 ಕೋಟಿ ರು ಯೋಜನೆ :

ಕೆ.ಆರ್. ಪೇಟೆ ಪಟ್ಟಣದ ಜನತೆಗೆ ಕುಡಿಯುವ ನೀರು ಸರಬರಾಜಿಗೆ ಈ ಹಿಂದೆ ಆಸರೆಯಾಗಿದ್ದ ದೇವಿರಮ್ಮಣ್ಣಿ ಕೆರೆಯು ತಾಲೂಕಿನಲ್ಲಿಯೇ ಅತ್ಯಂತ ವಿಶಾಲವಾದ ದೊಡ್ಡಕೆರೆಯಾಗಿದೆ. ಕೆರೆಯ ಸುತ್ತಲೂ ಜಾಗಿಂಗ್ ಟ್ರಾಕ್ ನಿರ್ಮಾಣ ಸೇರಿದಂತೆ
ಕೆರೆಯ ಒತ್ತುವರಿಯನ್ನು ತೆರವುಗೊಳಿಸಿ ಕೆರೆಯನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲು ಕ್ಷೇತ್ರದ ಶಾಸಕ ಹಾಗೂ ರಾಜ್ಯದ ಯುವಜನ ಸಬಲೀಕರಣ, ಕ್ರೀಡೆ,
ರೇಷ್ಮೆ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣಗೌಡರ ನೇತೃತ್ವದಲ್ಲಿ
ಕಾವೇರಿ ನೀರಾವರಿ ನಿಗಮದ ಹೇಮಾವತಿ ಜಲಾಶಯ ಯೋಜನೆಯ ಎಂಜಿನಿಯರುಗಳ
ಮಾರ್ಗದರ್ಶನದಲ್ಲಿ 5 ಕೋಟಿ ರು ವೆಚ್ಚದಲ್ಲಿ ಕ್ರಿಯಾ ಯೋಜನೆಯನ್ನು
ಸಿದ್ಧಪಡಿಸಲಾಗಿದೆ.

ಪಕ್ಷಿಗಳ ಸಂತಾನೋತ್ಪತ್ತಿಗೆ ಅವಕಾಶ :

ದೇಶ-ವಿದೇಶಗಳಿಂದ ಆಗಮಿಸುವ ಪಕ್ಷಿಗಳ ಸಂತಾನೋತ್ಪತ್ತಿಗೆ
ಅನುಕೂಲವಾಗುವಂತೆ ವಿಶಾಲವಾದ ಕೆರೆಯ ಮಧ್ಯದಲ್ಲಿ ಅಲ್ಲಲ್ಲಿ ಗುಡ್ಡಗಳನ್ನು ನಿರ್ಮಿಸಿ ಗಿಡ ಮರಗಳನ್ನು ಬೆಳೆಸಿ ಕೆರೆಗೆ ಕಾಯಕಲ್ಪ ನೀಡಲು ಸಿದ್ಧತೆಯನ್ನು ನಡೆಸಲಾಗಿದೆ.

ದೂರದ ಇಂಗ್ಲೆಂಡ್, ಜರ್ಮನಿ, ಅಮೇರಿಕಾ ಸಂಯುಕ್ತ ರಾಷ್ಟ್ರಗಳಿಂದ
ಸಂತಾನೋತ್ಪತ್ತಿಗೆ ಆಗಮಿಸುತ್ತಿರುವ ದೇಶ, ವಿದೇಶಗಳ ಪಕ್ಷಿಗಳಿಗೆ
ಅನುಕೂಲ ಮಾಡಿಕೊಡುವುದು ಸೇರಿದಂತೆ ಕೆ.ಆರ್.ಪೇಟೆ ಪಟ್ಟಣದ ನಿವಾಸಿಗಳು
ಮುಂಜಾನೆ ಹಾಗೂ ಸಂಜೆ ವಾಯುವಿಹಾರ ನಡೆಸಿ ಜಾಗಿಂಗ್ ಮಾಡಲು ಅನುಕೂಲವಾಗುವಂತೆ ಕೆರೆಯ ಸುತ್ತಲೂ ಜಾಗಿಂಗ್ ಟ್ರಾಕ್ ನಿರ್ಮಿಸುವುದು, ಕೆರೆಗೆ
ಯಾಂತ್ರೀಕೃತ ದೋಣಿಗಳನ್ನು ಬಿಟ್ಟು ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಶ್ರವಣಬೆಳಗೊಳದ ಜನಿವಾರ ಕೆರೆಯ ಮಾದರಿಯಲ್ಲಿ ಪ್ರವಾಸೋಧ್ಯಮ ಹಾಗೂ ಜಲಕ್ರೀಡೆಗಳಿಗೆ ಅನುಕೂಲ ಕಲ್ಪಿಸಿಕೊಡಲು ಕ್ರಿಯಾಯೋಜನೆಯನ್ನು ಸಿದ್ಧಪಡಿಸಲಾಗಿದೆ.

kr pete1

ಒತ್ತುವರಿ ತೆರವಿಗೆ ಅಗತ್ಯ ಕ್ರಮ :

ಈ ದಿಕ್ಕಿನಲ್ಲಿ ಕೆರೆಯ ಒತ್ತುವರಿಯನ್ನು ತೆರವುಗೊಳಿಸಿರುವ ತಾಲೂಕು ಆಡಳಿತವು ಮೈಸೂರು ಮಹಾರಾಣಿ ದೇವೀರಮ್ಮಣ್ಣಿ ಅವರಿಂದ ನಿರ್ಮಿತವಾಗಿರುವ ಕೆರೆಗೆ ಕಾಯಕಲ್ಪ ನೀಡಿ ಅಭಿವೃದ್ಧಿಪಡಿಸಲು ಬದ್ಧವಾಗಿದೆ.

ಕೆ.ಆರ್.ಪೇಟೆಯ ಇತಿಹಾಸಕ್ಕೆ ಕಿರೀಟಪ್ರಾಯವಾಗಿರುವ ದೇವೀರಮ್ಮಣ್ಣಿ ಕೆರೆಯನ್ನು
ಸಮಗ್ರವಾಗಿ ಅಭಿವೃದ್ಧಿಪಡಿಸಿ ಪ್ರವಾಸೋಧ್ಯಮ ಸೇರಿದಂತೆ ಜಲ ಸಾಹಸ ಕ್ರೀಡೆಗಳಿಗೆ
ಒತ್ತು ನೀಡಲು ಮುಂದಾಗಿರುವ ಸಚಿವ ನಾರಾಯಣಗೌಡ ಹೇಮಾವತಿ ಜಲಾಶಯ
ಯೋಜನೆಯ ಅಧಿಕಾರಿಗಳೊಂದಿಗೆ ಹತ್ತಾರು ಬಾರಿ ಸಭೆ ನಡೆಸಿ ಕ್ರಿಯಾಯೋಜನೆ ರೂಪಿಸಿ
ಮೊದಲ ಕಂತಿನ ಹಣವಾಗಿ ೫ ಕೋಟಿ ರೂಪಾಯಿ ವಿಶೇಷ ಅನುದಾನವನ್ನು ಬಿಡುಗಡೆ
ಮಾಡಿಸಿದ್ದಾರೆ.

ದೇವಿರಮ್ಮಣ್ಣಿ ಕೆರೆಯ ನೀರಿನಲ್ಲಿ ಸೂರ್ಯೋದಯ ಹಾಗೂ ಸೂರ್ಯಾಸ್ತವನ್ನು ಕಣ್ತುಂಬಿಕೊಳ್ಳಲು ಎರಡು ಕಣ್ಣುಗಳು ಸಾಲದಾಗಿವೆ. ಕೆ.ಆರ್.
ಪೇಟೆ ಪಟ್ಟಣಕ್ಕೆ ಹೊಂದಿಕೊಂಡಂತಿರುವ ದೇವಿರಮ್ಮಣ್ಣಿ ಕೆರೆಯು ಸಮಗ್ರವಾಗಿ
ಅಭಿವೃದ್ಧಿಯಾಗಬೇಕೆಂಬುದು ಪಟ್ಟಣದ ಜನರ ಕನಸು, ಈ ಕನಸನ್ನು ನನಸು
ಮಾಡುವ ನಿಟ್ಟಿನಲ್ಲಿ ಸಚಿವರು ಧೃಡವಾದ ಹೆಜ್ಜೆ ಹಾಕಿದ್ದಾರೆ.

ದೇವಿರಮ್ಮಣ್ಣಿ ಕೆರೆಯ ಕೋಡಿಯ ಬಳಿ ಫಾಲ್ಸ್ ವೀಕ್ಷಿಸಲು ಅನುಕೂಲವಾಗುವಂತೆ ಜನರು ಕುಳಿತುಕೊಳ್ಳಲು ಕಲ್ಲಿನ ಬೆಂಚುಗಳನ್ನು ಹಾಕಿಸುವುದು, ಸುಂದರವಾದ ಹೂದೋಟವನ್ನು ನಿರ್ಮಿಸುವುದು ಹಾಗೂ ಹೈಮಾಸ್ಟ್ ದೀಪವನ್ನು ಅಳವಡಿಸಿ ಕೆರೆಯ ಫಾಲ್ಸ್ ಜಲಪಾತದ ಸೌಂದರ್ಯವನ್ನು ಕತ್ತಲಿನಲ್ಲಿಯೂ ಸವಿಯಲು ಅನುಕೂಲ ಕಲ್ಪಿಸಿಕೊಡಬೇಕು ಎಂಬುದು ಪಟ್ಟಣದ ಜನತೆಯ ಆಶಯವಾಗಿದೆ.

Share This Article
Leave a comment