ಬೆಂಗಳೂರು
ಜಾಗತಿಕ ಮಟ್ಟದಲ್ಲಿ ಭಾರತ ಮತ್ತು ಅಮೆರಿಕ ನಡುವಿನ ವಾಣಿಜ್ಯ ಸಂಬಂಧವನ್ನು ಗಟ್ಟಿಗೊಳಿಸುವಲ್ಲಿ ಕರ್ನಾಟಕ ಪ್ರಮುಖ ಪಾತ್ರ ವಹಿಸಲಿದೆ. ಹೀಗಾಗಿ ರಾಜ್ಯದಲ್ಲಿ ಹೂಡಿಕೆಗೆ ಆದ್ಯತೆ ನೀಡುವಂತೆ ಅಮೆರಿಕಾದ ಕಂಪನಿ ಗಳಿಗೆ
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಂಗಳವಾರ ಮನವಿ ಮಾಡಿದ್ದಾರೆ.
ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಯುಎಸ್-ಇಂಡಿಯಾ ಬಿಸಿನೆಸ್ ಕೌನ್ಸಿಲ್ ಆಯೋಜಿಸಿದ್ದ ವರ್ಚ್ಯುಯಲ್ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಸಿಎಂ ಯಡಿಯೂರಪ್ಪ ಅಮೆರಿಕ ಕಂಪನಿಗಳಿಂದ ನೇರ ಹೂಡಿಕೆಗೆ ಎಲ್ಲಾ ರೀತಿಯ ಸಹಕಾರ ಒದಗಿಸುವುದಾಗಿ ಭರವಸೆ ನೀಡಿದರು. ಹೂಡಿಕೆಗೆ ಕರ್ನಾಟಕ ಸೂಕ್ತ ಸ್ಥಳ ಹೇಗೆ ಮತ್ತು ಅದಕ್ಕಾಗಿ ಸರ್ಕಾರ ಕೈಗೊಂಡಿರುವ ಕಾರ್ಯಕ್ರಮಗಳ ಬಗ್ಗೆ ಅಮೆರಿಕದ ಉದ್ದಿಮೆದಾರರಿಗೆ ಮನವರಿಕೆ ಮಾಡಿಕೊಟ್ಟರು.
“ಕೊರೊನಾ ಆಘಾತದ ಜತೆಗೆ, ಅಮೆರಿಕ ಮತ್ತು ಚೀನಾ ನಡುವಿನ ಆರ್ಥಿಕ ಸಂಬಂಧದ ಮೇಲೆ ಕರಿ ನೆರಳು ಆವರಿಸಿರುವ ಈ ಸಂದರ್ಭದಲ್ಲಿ ಭಾರತ ಮತ್ತು ಅಮೆರಿಕ ನಡುವಿನ ವಾಣಿಜ್ಯ ಸಂಬಂಧವನ್ನು ಮತ್ತಷ್ಟು ಬಲಪಡಿಸುವ ಅವಕಾಶ ಹೆಚ್ಚಿದೆ. ಈ ಕಾರಣದಿಂದಾಗಿ ಅಮೆರಿಕದ ಕಂಪನಿಗಳಿಗೆ ಭಾರತ ನೆಚ್ಚಿನ ತಾಣವಾಗಲಿದೆ. ಅದರಲ್ಲೂ ಕೈಗಾರಿಕಾ ಸ್ನೇಹಿ ವಾತಾವರಣ ಇರುವ ಕರ್ನಾಟಕದ ಬಗ್ಗೆ ಹೆಚ್ಚಿನ ವಿಶ್ವಾಸವಿದೆ. ಲಾಕ್ಡೌನ್ ನಂತರ ಆರ್ಥಿಕ ಪುನಶ್ಚೇತನಕ್ಕೆ ರಾಜ್ಯ ಹಲವು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ವಾಣಿಜ್ಯ ಚಟುವಟಿಕೆಗಳಿಗೆ ಪೂರಕ ವಾತಾರವಾರಣ ಕಲ್ಪಿಸಲಾಗಿದೆ ಎಂದು ಹೇಳಿದರು.
“ರಕ್ಷಣೆ ಮತ್ತು ವ್ಯೂಹಾತ್ಮಕ ವಿಷಯಗಳ ಒಪ್ಪಂದಗಳು ಮಾತ್ರವಲ್ಲದೇ ಭಾರತ ಮತ್ತು ಅಮೆರಿಕದ ಜನರ ನಡುವಿನ ಸಂಬಂಧವೂ ಪ್ರಬಲವಾಗಿದೆ. ಕಳೆದೆರಡು ದಶಕಗಳಲ್ಲಿ ಉಭಯ ರಾಷ್ಟ್ರಗಳ ನಡುವಿನ ವಹಿವಾಟು ಗಣನೀಯ ಮಟ್ಟದಲ್ಲಿ ಏರಿಕೆ ಕಂಡಿದೆ. 2000 ಇಸವಿಯಲ್ಲಿ 19 ಶತಕೋಟಿ ಡಾಲರ್ನಷ್ಟಿದ್ದ ವಹಿವಾಟು ಪ್ರಮಾಣ 2020ರ ವೇಳೆಗೆ 149 ಶತಕೋಟಿ ಡಾಲರ್ಗೆ ತಲುಪಿದೆ. ಉದ್ಯಮ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹಲವು ವಲಯಗಳಲ್ಲಿ ಪ್ರಬಲ ಸಾಮರ್ಥ್ಯ ಹೊಂದಿರುವ ರಾಜ್ಯ, ಜೈವಿಕ ತಂತ್ರಜ್ಞಾನ, ಆರೋಗ್ಯ ರಕ್ಷಣೆ, ಸೆಮಿಕಂಡಕ್ಟರ್, ಕೃಷಿ, ವಾಹನ ಮುಂತಾದ ನಾನಾ ಕ್ಷೇತ್ರಗಳನ್ನು ಉತ್ತೇಜಿಸಲು ‘ಉದ್ಯಮ ನಿರ್ದಿಷ್ಟ ನೀತಿ’ ಜಾರಿ ತರುವ ಮೂಲಕ ಉದ್ಯಮ ಸ್ನೇಹಿ ಆಡಳಿತ ವ್ಯವಸ್ಥೆ ರೂಪಿಸಿದೆ ಎಂದರು.
ಅಮೆರಿಕದ ಬಂಡವಾಳ, ಆವಿಷ್ಕಾರ ಮತ್ತು ನವೀನ ತಂತ್ರಜ್ಞಾನದ ಜತೆಗೆ ನಮ್ಮ ನುರಿತ ಮಾನವ ಸಂಪನ್ಮೂಲ ಹಾಗೂ ನಮಲ್ಲಿ ಲಭ್ಯವಿರುವ ಹೂಡಿಕೆ ಅವಕಾಶಗಳ ಸಂಯೋಜನೆಯಿಂದ ಕರ್ನಾಟಕ ಮತ್ತು ಅಮೆರಿಕ ನಡುವಿನ ದ್ವಿಪಕ್ಷೀಯ ಸಂಬಂಧವನ್ನು ಮತ್ತಷ್ಟು ಬಲಪಡಿಸಬಹುದು. ಈ ನಿಟ್ಟಿನಲ್ಲಿ ಎಲ್ಲ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ರಾಜ್ಯದ ಆರ್ಥಿಕ ಮತ್ತು ಕೈಗಾರಿಕಾ ಅಭಿವೃದ್ಧಿ ನಮ್ಮ ಸರ್ಕಾರ ಮೊದಲ ಆದ್ಯತೆ. ಅಮೆರಿಕ ಮತ್ತು ಭಾರತ ಪರಸ್ಪರ ಕೈ ಜೋಡಿಸುವ ಮೂಲಕ ಉತ್ತಮ ಸಹಭಾಗಿತ್ವ ಸಾಧಿಸಬಹುದು, ಎಂದು ಮುಖ್ಯಮಂತ್ರಿ ಭರವಸೆ ನೀಡಿದರು.
“ಐಟಿ, ಐಟಿಇಎಸ್ ಸೇವೆಗಳು, ಮೆಷಿನ್ ಟೂಲಿಂಗ್, ಉತ್ಪಾದನೆ, ಏರೋಸ್ಪೇಸ್, ಜೈವಿಕ ತಂತ್ರಜ್ಞಾನ ಹಾಗೂ ಎಂಜನಿಯರಿಂಗ್ ವಿನ್ಯಾಸ ಸೇರಿಂದತೆ ಕರ್ನಾಟಕದಲ್ಲಿ ಹೂಡಿಕೆಗೆ ಅವಕಾಶ ಇರುವ ಉದ್ಯಮಗಳ ಬಗ್ಗೆ ವಿವರಿಸಿದ ಮುಖ್ಯಮಂತ್ರಿ, “ಫಾರ್ಚೂನ್ 500 ಕಂಪನಿಗಳ ಪೈಕಿ 400 ಕಂಪನಿಗಳು ಜತೆಗೆ ಸುಮಾರು 400 ಸಂಶೋಧನಾ ಮತ್ತು ಅಭಿವೃದ್ಧಿ ಕೇಂದ್ರಗಳಿಗೆ ರಾಜ್ಯ ನೆಲೆಯಾಗಿದೆ. 2020 ಮಾರ್ಚ್ನಲ್ಲಿ ಕೊನೆಗೊಂಡ ಅವಧಿಯಲ್ಲಿ ರಾಜ್ಯ ವಿದೇಶಿ ನೇರ ಹೂಡಿಕೆಯಲ್ಲಿ ಎರಡನೇ ಸ್ಥಾನದಲ್ಲಿದ್ದು, ಉದ್ದಿಮೆದಾರರ ನೆಚ್ಚಿನ ತಾಣ ಎನಿಸಿಕೊಂಡಿದೆ, ಎಂದು ತಿಳಿಸಿದರು.
“ನೀತಿ ಆಯೋಗ ಬಿಡುಗಡೆ ಮಾಡುವ ಹೊಸ ಆವಿಷ್ಕಾರಗಳ ಸೂಚಿ 2019ರ ಪಟ್ಟಿಯಲ್ಲಿ ನಮ್ಮ ರಾಜ್ಯ ಅಗ್ರ ಸ್ಥಾನ ಪಡೆದಿದೆ. ನುರಿತ ಮಾನವ ಸಂಪನ್ಮೂಲ ಲಭ್ಯತೆ, ಉನ್ನತ ಶಿಕ್ಷಣ ಸಂಸ್ಥೆಗಳು, ಪ್ರಮುಖ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗಳು, ಉತ್ತಮ ಆಡಳಿತ ಹಾಗೂ ಹೂಡಿಕೆಗೆ ಪೂರಕ ವಾತಾವರಣದಿಂದಾಗಿ ರಾಜ್ಯ ಅಗ್ರ ಸ್ಥಾನ ಪಡೆಯಲು ಸಾಧ್ಯವಾಗಿದೆ ಎಂದು ವಿವರಿಸಿದರು.
“ಹೂಡಿಕೆದಾರರನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರ, ಹೊಸ ಕೈಗಾರಿಕಾ ನೀತಿ 2020-2025 ಪರಿಚಯಿಸಿದೆ. ದೊಡ್ಡ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಗೆ ಹೊಸ ನೀತಿ ನೆರವಾಗಲಿದೆ. ಆರ್ಥಿಕತೆ ಮತ್ತು ಕೈಗಾರಿಕಾ ಅಭಿವೃದ್ಧಿಯನ್ನು ಉತ್ತೇಜಿಸುವುದು ನಮ್ಮ ಸರ್ಕಾರದ ಮೊದಲ ಆದ್ಯತೆ. ಹೂಡಿಕೆ ಸ್ನೇಹಿ ನೀತಿ ಹಾಗೂ ಪೂರಕ ಸೌಲಭ್ಯ, ಭತ್ಯೆ ಒದಗಿಸುವ ಹೂಡಿಕೆ ಮಾಡುವಂತೆ ಅಮೆರಿಕದ ಕಂಪನಿಗಳನ್ನು ಆಹ್ವಾನಿಸುತ್ತೇವೆ ಎಂದರು.
ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತ, ಕೈಗಾರಿಕಾಭಿವೃದ್ದಿ ಆಯುಕ್ತೆ ಗುಂಜನ್ ಕೃಷ್ಣ, ಅಮೆರಿಕದಲ್ಲಿನ ಭಾರತದ ರಾಯಭಾರಿ ತರಣ್ಜೀತ್ ಸಿಂಗ್ ಸಂಧು, ಆಪ್ಕೊ ಕಾರ್ಯಕಾರಿ ನಿರ್ದೇಶಕ ಟಿಮ್ ರೊಮರ್, ಲಾಕ್ಹೀಡ್ ಮಾರ್ಟಿನ್ ಸಿಇಓ ವಿಲಿಯಮ್ ಬ್ಲೇರ್, ಕಾರ್ಗಿಲ್ ಅಧ್ಯಕ್ಷ ಸಿಮನ್ ಜಾರ್ಜ್, 3ಎಂನ ವ್ಯವಸ್ಥಾಪಕ ನಿರ್ದೇಶಕ ರಮೇಶ್ ರಾಮದೊರೈ, ಎಸ್ಆರ್ಇಐ ಅಧ್ಯಕ್ಷ ಹೇಮಂತ್ ಕನೊರಿಯಾ, ಎಕ್ವಿಫ್ಯಾಕ್ಸ್ನ ವ್ಯವಸ್ಥಾಪಕ ನಿರ್ದೇಶಕ ಕೆ. ನಾಣಯ್ಯ, ಟ್ರೂ ನಾರ್ತ್ ಪಾರ್ಟನರ್ಸ್ನ ವಾಸುದೇವ್ ಎಸ್. ಗವಾಸ್ಕರ್, ಕ್ಸೈಲೆಮ್ ಎಜಿಎಂ ನಿತಿನ್ ಭಾಟೆ, ವಿಎಂವೇರ್ನ ವ್ಯವಸ್ಥಾಪಕ ನಿರ್ದೇಶಕ ರಾಮ್ಕುಮಾರ್ ನಾರಾಯಣ್, ಕ್ಯಾಟಲಿಸ್ಟ್ ಸಿಇಓ ರಾಹುಲ್ ಶಾ, ಐಬಿಎಂನ ವಿವೇಕ್ ವಸಿಷ್ಠ, ಮೈಕ್ರೋಸಾಫ್ಟ್ನ ನೀಲಿಮಾ ದ್ವಿವೇದಿ ಸಭೆಯಲ್ಲಿ ಭಾಗವಹಿಸಿದ್ದರು.