ಕರ್ನಾಟಕದಲ್ಲಿ ಹೂಡಿಕೆ- ಅಮೆರಿಕ ಉತ್ಸುಕ

Team Newsnap
2 Min Read
  • ಉಪ ಮುಖ್ಯಮಂತ್ರಿ ಡಾ. ಸಿ. ಎನ್ . ಅಶ್ವತ್ಥ ನಾರಾಯಣ ಜೊತೆ ಅಮೆರಿಕ ಕಾನ್ಸುಲ್ ಮಾತುಕತೆ

ಮಾಹಿತಿ ತಂತ್ರಜ್ಞಾನ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥ ನಾರಾಯಣ ಅವರನ್ನು ಸೋಮವಾರ ಭೇಟಿ ಮಾಡಿದ ಚೆನ್ನೈನಲ್ಲಿರುವ ಅಮೆರಿಕದ ಕಾನ್ಸುಲ್ ಜನರಲ್ ಜುಡಿತ್ ರಾವಿನ್ ಕರ್ನಾಟಕ ರಾಜ್ಯದಲ್ಲಿ ಹೂಡಿಕೆಗೆ ಇರುವ ಅವಕಾಶಗಳು, ಮಾಹಿತಿ ತಂತ್ರಜ್ಞಾನ ಕಾರ್ಯನೀತಿ ಹಾಗೂ ಮತ್ತಿತರ ಅಂಶಗಳ ಬಗ್ಗೆ ಮಾಹಿತಿ ಪಡೆದರು.

america c

ಮಾಹಿತಿ ತಂತ್ರಜ್ಞಾನ ಉದ್ಯಮ ಉತ್ತೇಜಿಸಲು ಜಾರಿಗೊಳಿಸಲಾಗಿರುವ ಪ್ರೋತ್ಸಾಹಕ ಕ್ರಮಗಳು, ಭೂಸುಧಾರಣಾ ಕಾನೂನು ಸೇರಿದಂತೆ ಹಲವು ವಿಷಯಗಳ ಕುರಿತು ಈ ಸಂದರ್ಭದಲ್ಲಿ ಪವರ್ ಪಾಯಿಂಟ್ ವಿಷಯ ಪ್ರಸ್ತುತಿ ಮಾಡಲಾಯಿತು.

ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ/ ಜೈವಿಕ ತಂತ್ರಜ್ಞಾನ ಇ.ಎಸ್.ಡಿ.ಎಂ. ಪರ್ಯಾವರಣಗಳ ಬಗ್ಗೆ ಎಲೆಕ್ಟ್ರಾನಿಕ್ಸ್ ಮತ್ತು ಐಟಿ/ಬಿಟಿ ಇಲಾಖೆ ನಿರ್ದೇಶಕಿ ಮೀನಾ ನಾಗರಾಜ್ ಪ್ರಸ್ತುತ ಪಡಿಸಿದರು.

america koicl

ರಾಜ್ಯದಲ್ಲಿರುವ ಪರಿಪೋಷಕಗಳು, ಆಕ್ಸಲರೇಟರ್ ಗಳು, ನವೋದ್ಯಮಗಳಲ್ಲಿ ಹೂಡಿಕೆ, ಕೌಶಲ್ಯ ಸುಧಾರಣೆ ಹಾಗೂ ಪರಸ್ಪರ ಸಹಭಾಗಿತ್ವಕ್ಕೆ ಇರುವ ಅವಕಾಶಗಳ ಕುರಿತು ರಾಜ್ಯ ನವೋದ್ಯಮಗಳ ದೂರದರ್ಶಿತ್ವ ಸಮಿತಿ ಅಧ್ಯಕ್ಷ ಪ್ರಶಾಂತ್ ಪ್ರಕಾಶ್ ಅವರು ಪವರ್ ಪಾಯಿಂಟ್ ವಿಷಯ ಪ್ರಸ್ತುತಿಯಲ್ಲಿ ಗಮನ ಸೆಳೆದರು.

ಈ ಸಂದರ್ಭದಲ್ಲಿ ಮಾತನಾಡಿದ ಅಶ್ವತ್ಥ ನಾರಾಯಣ ಅವರು, ರಾಜ್ಯದಲ್ಲಿ ಇರುವ ಅಮೆರಿಕದ ಕಂಪನಿಗಳು ಉತ್ತಮವಾಗಿ ಕಾರ್ಯಾಚರಣೆ ನಡೆಸುತ್ತಿವೆ; ಇನ್ನೂ ಹೆಚ್ಚಿನ ಕಂಪನಿಗಳು ಇಲ್ಲಿಗೆ ಬಂದು ಕಾರ್ಯಾಚರಣೆಯಲ್ಲಿ ತೊಡಗಲು ಅವಕಾಶಗಳಿದ್ದು ರಾಜ್ಯ ಸರ್ಕಾರವು ಸಹಭಾಗಿತ್ವ ಸೇರಿದಂತೆ ಯಾವುದೇ ರೀತಿಯಲ್ಲಿ ಕೈಜೋಡಿಸಲು ಸಿದ್ಧವಿದೆ ಎಂದು ತಿಳಿಸಿದರು.

ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪ್ರದೀಪ್ ಅವರು ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿನ ಕಲಿಕಾ ನಿರ್ವಹಣಾ ವ್ಯವಸ್ಥೆ (ಎಲ್ಎಂಎಸ್), ವಿಶ್ವವಿದ್ಯಾಲಯ ಏಕೀಕೃತ ನಿರ್ವಹಣಾ ವ್ಯವಸ್ಥೆ, ಡಿಪ್ಲೊಮಾ ಪಠ್ಯಕ್ರಮದಲ್ಲಿ ಮಾಡಿರುವ ಆಮೂಲಾಗ್ರ ಬದಲಾವಣೆಗಳ ಬಗ್ಗೆ ಗಮನ ಸೆಳೆದರು.

ಸರ್ಕಾರ ಮಾಡಿಕೊಂಡಿರುವ ಯೋಜನೆಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ಜುಡಿತ್ ರಾವಿನ್ ಅವರು, ಮೆಸಾಚ್ಯುಯೇಟ್ಸ್ ತಾಂತ್ರಿಕ ವಿಶ್ವವಿದ್ಯಾಲಯ (ಎಂಐಟಿ)ದ ನೇತೃತ್ವದಲ್ಲಿ ಸಹಭಾಗಿತ್ವ ಸೇರಿದಂತೆ ಹಲವು ರೀತಿಗಳಲ್ಲಿ ಇಲ್ಲಿನ ಯೋಜನೆಗಳಲ್ಲಿ ಭಾಗವಹಿಸುವ ಇಂಗಿತ ವ್ಯಕ್ತಪಡಿಸಿದರು.

ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ/ ಜೈವಿಕ ತಂತ್ರಜ್ಞಾನ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ರಮಣ ರೆಡ್ಡಿ, ಅಮೆರಿಕ ಕಾನ್ಸುಲ್ ಜನರಲ್ ಕಚೇರಿಯ ರಾಜಕೀಯ/ ಆರ್ಥಿಕ ವಿಷಯ ತಜ್ಞ ಎಚ್.ಭರತ್ ಕುಮಾರ್ ಇದ್ದರು.

Share This Article
Leave a comment