ಪ್ರೇಯಸಿ ಜೊತೆ ಸೇರಿ ಪತ್ನಿಯ ಜೀವ ತೆಗೆದ ಪತಿರಾಯ!

Team Newsnap
1 Min Read

ಹಾಸನ ಜಿಲ್ಲೆಯ ಚೀರನಹಳ್ಳಿ ಬಳಿ ಮಹಿಳೆ ಶವ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆಕೆಯ ಪತಿ ಹಾಗೂ ಪ್ರೇಯಸಿಯನ್ನು ಬಂಧಿಸಿದ್ದಾರೆ. ನಾಗರಾಜ್ ಹಾಗೂ ಆತನ ಪ್ರೇಯಸಿ ಶೈಲಾ ಬಂಧಿತ ಆರೋಪಿಗಳು.

ನವೆಂಬರ್​ 11ರಂದು ಚೀರನಹಳ್ಳಿ ಕೆರೆಯಲ್ಲಿ ಅಪರಿಚಿತ ಮಹಿಳೆಯ ಶವವೊಂದು ಪತ್ತೆಯಾಗಿತ್ತು. ಪೊಲೀಸರು ತನಿಖೆ ನಡೆಸಿದ ವೇಳೆ ಮೃತ ಮಹಿಳೆ ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲುಕಿನ ಬೆಲಗೂರು ಗ್ರಾಮದ ನಿವಾಸಿ ಸುಶ್ಮಿತಾ ಎಂದು ತಿಳಿದುಬಂದಿತ್ತು. ಈ ಸುಳಿವನ್ನೇ ಬೆನ್ನತ್ತಿದ್ದ ಪೊಲೀಸರಿಗೆ ಇದೀಗ ಕೊಲೆಯ ಹಿಂದಿನ ಕಾರಣ ತಿಳಿದುಬಂದಿದೆ.

6 ವರ್ಷದ ಹಿಂದೆ ಸುಶ್ಮಿತಾ ಹಾಗೂ ನಾಗರಾಜ್ ಒಬ್ಬರನ್ನೊಬ್ಬರು ಪರಸ್ಪರ ಪ್ರೀತಿಸಿ  ವಿವಾಹವಾಗಿದ್ದರು. ಆದರೆ ನಾಗರಾಜ್, ಇತ್ತೀಚೆಗೆ ಶೈಲಾ ಎಂಬ ಮಹಿಳೆಯ ಜೊತೆ ಅನೈತಿಕ ಸಂಬಂಧ ಹೊಂದಿದ್ದ ಎಂಬ ಮಾಹಿತಿ ಸಿಕ್ಕಿದೆ. ಪತಿಯ ಅನೈತಿಕ ಸಂಬಂಧದಿಂದ ಬೇಸತ್ತ ಸುಶ್ಮಿತಾ ಆತನಿಂದ ದೂರವಾಗಿದ್ದಳು. ಇದಲ್ಲದೆ, ಗಂಡನಿಂದ ಜೀವನಾಂಶ ಪಡೆಯಲು ಕೇಸ್ ಸಹ ಹಾಕಿದ್ದಳು.

ಇದರಿಂದ ಹಾವಿನಂತೆ ಬುಸುಗುಟ್ಟಿದ ನಾಗರಾಜ್​ ನಿನ್ನ ಜೊತೆ ಕೇಸ್​ ಬಗ್ಗೆ ಮಾತನಾಡಬೇಕೆಂದು ನೆಪವೊಡ್ಡಿ
ಅಕ್ಟೋಬರ್​ 29ರಂದು ಪತ್ನಿಯನ್ನು ಬೆಲಗೂರಿಗೆ ಕರೆಸಿಕೊಂಡಿದ್ದ. ಅಲ್ಲಿ ತನ್ನ ಪ್ರೇಯಸಿ ಶೈಲಾ ಜೊತೆ ಸೇರಿ ನಾಗರಾಜ್ ಸುಶ್ಮಿತಾಳನ್ನು ಕೊಂದಿದ್ದ.

ನಂತರ, ಸಾಕ್ಷ್ಯ ನಾಶಮಾಡುವ ಉದ್ದೇಶದಿಂದ ಇಬ್ಬರು ಸೇರಿ ಸುಶ್ಮಿತಾಳ ಶವವನ್ನು ಕೆರೆಗೆ ಎಸೆದಿದ್ದರು. ಈ ನಡುವೆ, ಸುಶ್ಮಿತಾ ನಾಪತ್ತೆಯಾಗಿದ್ದಾಳೆ ಎಂದು ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಶ್ರೀರಾಂಪುರ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ನವೆಂಬರ್​ 11ರಂದು ಕೆರೆಯಲ್ಲಿ ಆಕೆಯ ಶವ ಕೆರೆಯಲ್ಲಿ ತೇಲುತ್ತಿದ್ದರಿಂದ ಪ್ರಕರಣ ಬೆಳಕಿಗೆ ಬಂದಿದೆ.

ಇನ್ನು, ನಾಪತ್ತೆ ಕೇಸ್​ ತನಿಖೆ ಕೈಗೆತ್ತಿಕೊಂಡ ಖಾಕಿ ಪಡೆಗೆ ಸೀದಾ ಅನುಮಾನ ಬಂದಿದ್ದು ಸುಶ್ಮಿತಾ ಪತಿ ಮತ್ತು ಆತನ ಪ್ರೇಯಸಿ ಮೇಲೆ. ಇದೀಗ, ಕೊಲೆಯಲ್ಲಿ ಇಬ್ಬರ ಕೈವಾಡವಿರುವುದು ಕಂಡುಬಂದಿದ್ದು ಆರೋಪಿ ಪತಿ ನಾಗರಾಜ್, ಆತನ ಸಹೊದರ ಮೋಹನ್ ಹಾಗೂ ನಾಗರಾಜ್ ಗೆಳತಿ ಶೈಲಾರನ್ನು ಪೊಲೀಸರು ಬಂಧಿಸಿದ್ದಾರೆ.

Share This Article
Leave a comment