ಉತ್ತರ ಪ್ರದೇಶದ ಲಖಿಂಪುರ್ನಲ್ಲಿ ನಿನ್ನೆ ನಡೆದ ಹಿಂಸಾಚಾರ ಘಟನಾ ಸ್ಥಳಕ್ಕೆ
ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ಭೇಟಿ ನೀಡಲು ಮುಂದಾಗಿದ್ದ ವೇಳೆಯಲ್ಲಿ ಪೊಲೀಸರು ಅವರನ್ನು ವಶಕ್ಕೆ ಪಡೆದುಕೊಂಡ ಬೆನ್ನಲ್ಲೇ ಈಗ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಅವರನ್ನು ಗೃಹ ಬಂಧನದಲ್ಲಿ ಇಡಲಾಗಿದೆ.
ಯಾದವ್ ಮನೆ ಮುಂದೆ ಪೊಲೀಸ್ ಭದ್ರತೆ ನಿಯೋಜನೆ ಮಾಡಲಾಗಿದೆ. ಘಟನಾಸ್ಥಳಕ್ಕೆ ತೆರಳದಂತೆ ಪೊಲೀಸರು ನಿರ್ಬಂಧ ಹೇರಿದ್ದಾರೆ. ಮನೆ ಬಳಿಯಿರುವ ರಸ್ತೆಯಲ್ಲಿ ವಾಹನಗಳ ಸಂಚಾರವನ್ನೂ ಬಂದ್ ಮಾಡಲಾಗಿದೆ.
ಇನ್ನು ಅಖಿಲೇಶ್ ಯಾದವ್ಗೆ ಗೃಹ ಬಂಧನ ಬೆನ್ನಲ್ಲೇ ನೂರಾರು ಬೆಂಬಲಿಗರು ಅಖಿಲೇಶ್ ಯಾದವ್ ಮನೆ ಮುಂದೆ ಸೇರಿದ್ದಾರೆ.
ಇನ್ನೊಂದೆಡೆ ಸಮಾಜವಾದಿ ಪಕ್ಷದ ಕಾರ್ಯಕರ್ತರು ಪೊಲೀಸ್ ವಾಹನಕ್ಕೆ ಬೆಂಕಿ ಇಟ್ಟಿದ್ದಾರೆಂದು ಹೇಳಲಾಗಿದೆ.
ಅಲ್ಲದೇ ಅಖಿಲೇಶ್ ನಿವಾಸದ ಬಳಿಯಲ್ಲಿಯೇ ಪೊಲೀಸ್ ವಾಹನ ಧಗಧಗನೇ ಉರಿದು ಹೋಗಿದೆ. ಸದ್ಯ ಪರಿಸ್ಥಿತಿ ಉದ್ವಿಗ್ನಗೊಂಡಿದೆ.
ಇಂಟರ್ನೆಟ್ ಸೇವೆ ಬಂದ್ :
ತಮ್ಮನ್ನು ಗೃಹ ಬಂಧನ ಇರಿಸಿರುವ ಕ್ರಮ ಖಂಡಿಸಿ ಯಾದವ್, ಬೆಂಬಲಿಗರ ಜೊತೆ ಸೇರಿ ಲಖನೌನಲ್ಲಿರುವ ಮನೆಯ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಪ್ರತಿಭಟನೆಗೆ ರಾಮ್ ಗೋಪಾಲ್ ಯಾದವ್ ಸಾಥ್ ನೀಡಿದ್ದಾರೆ. ಘಟನಾ ಸ್ಥಳ ಲಖಿಂಪುರ್ನಲ್ಲಿ 144 ಸೆಕ್ಷನ್ ವಿಧಿಸಲಾಗಿದೆ.
ಜೊತೆಗೆ ಮುಂಜಾಗೃತ ಕ್ರಮವಾಗಿ ಇಂಟರ್ನೆಟ್ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.