ಕಾಣದಂತೆ ಮಾಯವಾದನೋ …..! ನಮ್ಮ ಶಿವ…..

Team Newsnap
5 Min Read
  • ಮರೆಯದ ಮಾಣಿಕ್ಯ ಪುನೀತ್ ನಮ್ಮನ್ನಗಲಿ ಇಂದಿಗೆ ಎರಡು ವರ್ಷ

ಆತನ ಬಾಲ್ಯ, ಯೌವನದ ಬೆಳವಣಿಗೆ, ಔದಾರ್ಯ, ಮಾನವೀತೆಯ ಹೆಗ್ಗುರುತುಗಳು ಎಲ್ಲರಿಗೂ ಗೊತ್ತು ! ಆತ ಇಡೀ ಕರ್ನಾಟಕದ ಸೊತ್ತು ! ಇಷ್ಟು ಬೇಗ ನಮ್ಮೆಲ್ಲರನ್ನೂ ಅಗಲಿ ಇಹಲೋಕ ತ್ಯಜಿಸಲು ಆತನಿಗೆ ಅವಸರವೇನಿತ್ತು ?
ಹೌದು ! ಪುನೀತ ! ವ್ಯಕ್ತಿತ್ವದಲ್ಲಿ ಬಹಳ ವಿನೀತ ! ಆತನ ರಕ್ತದ ಕಣಕಣದಲ್ಲೂ ಇದ್ದದ್ದು ಕಲೆ ಮತ್ತು ವಿನಮ್ರತೆ ಎರಡೇ ! ಆ ದಿನ ! ಆ ಕ್ಷಣ !

ಅಕ್ಟೋಬರ್ ೨೯, ೨೦೨೧. ಕನ್ನಡ ಚಿತ್ರರಂಗ ಮಾತ್ರವಲ್ಲ, ಇಡೀ ಭಾರತೀಯ ಚಿತ್ರರಂಗಕ್ಕೇ ಕರಾಳ ದಿನ !
ಆ ದಿನ ಬೆಳಿಗ್ಗೆ ಎದ್ದೊಡನೆಯೇ, ಪುನೀತ್ ರಾಜಕುಮಾರ್ ಜಿಮ್ ನಲ್ಲಿ ವ್ಯಾಯಾಮ ಮಾಡುತ್ತಾರೆ. ಮರುದಿನ ಬಿಡುಗಡೆಯಗಲಿದ್ದ ತನ್ನ ಹಿರಿಯ ಸಹೋದರ ಡಾ ಶಿವರಾಜಕುಮಾರ್ ಅವರ ಭಜರಂಗಿ-೨ ಚಿತ್ರದ ಪೂರ್ವ ವೀಕ್ಷಣಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕಿದ್ದ ಅವರಿಗೆ ಸ್ವಲ್ಪ ಎದೆ ನೋವು ಕಾಣಿಸಿಕೊಳ್ಳುತ್ತದೆ. ಕೆಲ ನಿಮಿಷಗಳಲ್ಲಿ ನೋವು ಇಡೀ ಎದೆ ಭಾಗ ವ್ಯಾಪಿಸಿ ಬೆವರಿಳಿಯುತ್ತದೆ. ಕೂಡಲೇ ಪುನೀತ್ ಅವರು ತಮ್ಮ ಕುಟುಂಬ ವೈದ್ಯ ಡಾ ಬಿ ರಮಣರಾವ್ ಅವರತ್ತ ತೆರಳುತ್ತಾರೆ. ಅಲ್ಲಿ ಪ್ರಥಮ ಚಿಕಿತ್ಸೆ ಪಡೆದು, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ ತೆರಳುತ್ತಾರೆ. ಆ ವೇಳೆಗೆ ಹೃದಯವಂತ ಪುನೀತ್ ರಾಜಕುಮಾರ್ ಅವರಿಗೆ ತೀವ್ರ ಹೃದಯ ಸ್ಥಂಬನವಾಗುತ್ತದೆ. ಪುನೀತ್ ಅವರನ್ನು ಉಳಿಸಲು ವೈದ್ಯರು ಎಲ್ಲಿಲ್ಲದ ಪ್ರಯತ್ನ ನಡೆಸುತ್ತಾರೆ. ಆದರೆ, ಆ ವೇಳೆಗಾಗಲೇ ಪುನೀತ್ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು. ಈ ಕಹಿ ಸುದ್ದಿಯನ್ನು ಅರಗಿಸಿಕೊಳ್ಳಲು ಸಾಧ್ಯವೇ ಆಗಲಿಲ್ಲ.

ಜಗ ಮೆಚ್ಚಿದ ಮಗ !

ನಟಸಾರ್ವಭೌಮ ಡಾ ರಾಜಕುಮಾರ್ ಅವರ ಪುತ್ರ ತ್ರಯರಲ್ಲಿ ಅತ್ಯಂತ ಕಿರಿಯವರು ಪುನೀತ್ ರಾಜಕುಮಾರ್. ಕರ್ನಾಟಕದಲ್ಲಿ ರಾಜ್ ಕುಟುಂಬ ಎಂದರೆ ಕಲಾ ಕುಟುಂಬ. ಮನೆಯಲ್ಲಿ ಪ್ರತಿಯೊಬ್ಬರೂ ಕಲಾವಿದರೇ !

ಪುನೀತ್ ರಾಜಕುಮಾರ್ ಕೂಡಾ ಹುಟ್ಟು ಕಲಾವಿದ ! ತೊಟ್ಟಿಲಲ್ಲಿ ಇರುವಾಗಲೇ ಪ್ರೇಮದ ಕಾಣಿಕೆ ಚಿತ್ರದಲ್ಲಿ ಕಾಣಿಸಿಕೊಂಡ ಅದೃಷ್ಠವಂತ ಪುನೀತ್ ಅವರ ಮೊದಲ ಹೆಸರು ಲೋಹಿತ್.

image 5

ತನ್ನ ತಂದೆ ಡಾ ರಾಜಕುಮಾರ್ ಅವರ ಜೊತೆಯಲ್ಲಿ ೧೯೮೦ ರಲ್ಲಿ ವಸಂತ ಗೀತ, ೧೯೮೨ ರಲ್ಲಿ ಅಭಿನಯಿಸಿದ ಚಲಿಸುವ ಮೋಡಗಳು ಮತ್ತು ೧೯೮೩ ರಲ್ಲಿ ಭಕ್ತ ಪ್ರಹ್ಲಾದ ಚಿತ್ರಗಳಲ್ಲೂ ಪುನೀತ್ ಮನೋಜ್ಞ ಅಭಿನಯ ನೀಡಿ, ಜನಮನ ಗೆದ್ದು, ಜಗ ಮೆಚ್ಚಿದ ಮಗನಾಗಿ ಹೊರಹೊಮ್ಮಿದ್ದು ಇದೀಗ ಇತಿಹಾಸ. ಅಲ್ಲದೆ, ೧೯೮೧ ರಲ್ಲಿ ಭಾಗ್ಯವಂತ ಹಾಗೂ ೧೯೮ ಯಾರಿವನು ? ಚಿತ್ರಗಳಲ್ಲೂ ಗಮನಾರ್ಹ ಅಭಿನಯ ನೀಡಿದ್ದಾರೆ.

ಚಲಿಸುವ ಮೋಡಗಳು ಚಿತ್ರದಲ್ಲಿ ಪುನೀತ್ ಹಾಡಿದ ಕಾಣದಂತೆ ಮಾಯವಾದನೋ… ನಮ್ಮ ಶಿವ ಕೈಲಾಸ ಸೇರಿಕೊಂಡನೋ… ಹಾಗೂ ಭಕ್ತ ಪ್ರಹ್ಲಾದ ಚಿತ್ರದಲ್ಲಿ ಹಾಡಿದ ಗೋವಿಂದ.. ಗೋವಿಂದ ನಾರಾಯಣ… ಹರಿ ಗೋವಿಂದ.. ಗೋವಿಂದ ನಾರಾಯಣ… ಗೀತೆಗಳು ಪುನೀತ್ ಅವರ ಜನಪ್ರಿಯತೆಯನ್ನು ಹೆಚ್ಚಿಸಿದವು.
ನಂತರ, ೧೯೮೫ ರಲ್ಲಿ ಎನ್ ಲಕ್ಷ್ಮೀ ನಾರಾಯಣ ಅವರ ನಿರ್ದೇಶನದಲ್ಲಿ ಮೂಡಿಬಂದ ಬೆಟ್ಟದ ಹೂವು ಚಿತ್ರದಲ್ಲಿ ಬಾಲ ನಟನಾಗಿ ಅಭಿನಯಿಸಿದ ಪುನೀತ್‌ಗೆ ರಾಷ್ಟç ಪ್ರಶಸ್ತಿ ದೊರೆತದ್ದು ಆತನ ಪ್ರತಿಭೆಗೆ ಸಾಕ್ಷಿ ! ಆ ಚಿತ್ರದಲ್ಲಿ ಪುನೀತ್ ಹಾಡಿದ ಗೀತೆ ಬಿಸಿಲೇ ಇರಲೀ.. ಮಳೆಯೇ ಬರಲೀ… ಕಾಡಲ್ಲಿ ಮೇಡಲ್ಲಿ ಅಲೆವೇ… ಮಕ್ಕಳಲ್ಲಿ ಪುನೀತ್ ಬಗ್ಗೆ ಪುನೀತ ಭಾವವನ್ನೇ ಮೂಡಿಸಿತು.

ಪುನೀತ್ ರಾಜಕುಮಾರ್ ಅವರು ೨೦೦೨ ರಲ್ಲಿ ನಾಯಕ ನಟನಾಗಿ ಅಭಿನಯಿಸಿದ ಪುರಿ ಜಗನ್ನಾಥ್ ಅವರ ಅಪ್ಪು ಚಿತ್ರ ಯುವ ಜನತೆಯಲ್ಲಿ ಪುನೀತ್ ಅವರಿಗೆ ಹೊಸ ಅಸ್ಮಿತೆಯನ್ನೇ ತಂದು ಕೊಟ್ಟಿತು.

ಅಪ್ಪು ನಂತರ ೨೦೦೩ ರಲ್ಲಿ ಬಂದ ಅಭಿ, ೨೦೦೪ ರಲ್ಲಿ ವೀರ ಕನ್ನಡಿಗ, ಅದೇ ವರ್ಷದಲ್ಲಿ ತೆರೆ ಕಂಡ ಮೌರ್ಯ, ೨೦೦೫ ರಲ್ಲಿ ಆಕಾಶ್, ೨೦೦೬ ರಲ್ಲಿ ಅಜಯ್, ೨೦೦೭ ರಲ್ಲಿ ಅರಸು, ಅದೇ ವರ್ಷದಲ್ಲಲಿ ಮಿಲನ, ೨೦೦೮ ರಲ್ಲಿ ವಂಶಿ, ೨೦೦೯ ರಲ್ಲಿ ರಾಮ್, ೨೦೧೦ ರಲ್ಲಿ ಜಾಕಿ, ೨೦೧೧ ರಲ್ಲಿ ಹುಡುಗರು, ೨೦೧೫ ರಲ್ಲಿ ಮೈತ್ರಿ, ೨೦೧೬ ರಲ್ಲಿ ದೊಡ್ಡಮನೆ ಹುಡುಗ, ೨೦೧೭ ರಲ್ಲಿ ರಾಜಕುಮಾರ, ಅದೇ ವರ್ಷದಲಿ ಅಂಜನಿ ಪುತ್ರ, ೨೦೨೧ ರಲ್ಲಿ ಯುವರತ್ನ ಹೀಗೆ ಸಾಲು ಸಾಲು ಯಶಸ್ವೀ ಚಿತ್ರಗಳಲ್ಲಿ ಪುನೀತ್ ರಾಜಕುಮಾರ್ ಅವರು ನಾಯಕ ನಟನಾಗಿ ಎಲ್ಲರ ಗಮನ ಸೆಳೆದರು

ಅಪ್ಪನಂತೆಯೇ ಅಪ್ಪು !

image 6

ತಂದೆ ಡಾ ರಾಜಕುಮಾರ್ ಅವರಂತೆ ಪುನೀತ್ ಕೂಡಾ ತನ್ನ ಅಭಿಮಾನಿಗಳನ್ನು ದೇವರೆಂದೇ ಕರೆದವರು. ದೇವರೆಂದೇ ಭಾವಿಸಿದವರು. ಕಷ್ಟದಲ್ಲಿ ಇರುವವರಿಗೆ ಮಾನವೀತೆಯ , ಪ್ರೀತಿ ಔದಾರ್ಯ, ಮತ್ತೊಂದು ಕೈಗೆ ಕಾಣದಂತೆ ಸಹಾಯ ಮಾಡಿ ಡಾ ರಾಜಕುಮಾರ್ ಅವರನ್ನೂ ಒಂದು ಕೈ ಮೀರಿಸಿದ್ದರು ಪುನೀತ್

ಎಲ್ಲಕ್ಕೂ ಉಚಿತ ರಾಯಭಾರಿ !

image 9 edited

ಕರ್ನಾಟಕ ಹಾಲು ಒಕ್ಕೂಟದ ನಂದಿನಿ ಬ್ರಾಂಡ್ ನ ಉತ್ಪನ್ನಗಳಿಗೆ ರಾಯಭಾರಿ. ಶಿಕ್ಷಣ ಇಲಾಖೆಯ ಸರ್ವ ಶಿಕ್ಷಾ ಅಭಿಯಾನದ ರಾಯಭಾರಿ, ಇಂಧನ ಇಲಾಖೆಯ ಎಲ್ ಇ ಡಿ ಬಲ್ಬ್ ರಾಯಭಾರಿ, ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿಯ ರಾಯಭಾರಿ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ರಾಯಭಾರಿ, ಉದ್ಯೋಗ ಮತ್ತು ತರಬೇತಿ ಇಲಾಖೆಯ ಕೌಶಲ್ಯಾಭಿವೃದ್ಧಿ ಯೋಜನೆಯಡಿ ಕೈಗಾರಿಕಾ ತರಬೇತಿ ಸಂಸ್ಥೆಗಳ ಪ್ರವೇಶಕ್ಕೆ ರಾಯಭಾರಿ, ಭಾರತೀಯ ಚುನಾವಣಾ ಆಯೋಗದ ರಾಯಭಾರಿ, ಚಾಮರಾಜನಗರ ಜಿಲ್ಲೆಯ ರಾಯಭಾರಿ. ಇವೆಲ್ಲಕ್ಕೂ ರಾಯಭಾರಿಯಾಗಿ ಪುನೀತ್ ರಾಜಕುಮಾರ್ ಅವರು ಉಚಿತವಾಗಿ ಸೇವೆ ಒದಗಿಸಿದ್ದರು.

ಪುನೀತ್ ರಾಜಕುಮಾರ್ ಅವರ ರೂಪದರ್ಶಿ ಸೇವೆಯನ್ನು ಬಳಸಿಕೊಂಡ ಕರ್ನಾಟಕ ಹಾಲು ಒಕ್ಕೂಟದವರು ಎಷ್ಟು ಸಂಭಾವನೆ ಕೊಡಬೇಕು ? ಎಂದು ಕೇಳಿದಾಗ “ ಛೇ ! ತಮ್ಮದು ರೈತರ ಸಂಸ್ಥೆ. ನನಗೆ ತಾವು ನೀಡಬಯಸುವ ಸಂಭಾವನೆಯನ್ನು ರೈತರ ಶ್ರೇಯೋಭಿವೃದ್ಧಿಗೇ ಬಳಸಿ ” ಎಂದು ವಿನಯಶೀಲತೆ ಮೆರೆದವರು ಪುನೀತ್.

ಸರ್ವ ಶಿಕ್ಷಾ ಅಭಿಯಾನದ ರಾಯಭಾರಿಯಾಗಿ ಸೇವೆ ಸಲ್ಲಿಸಲು ಸಮ್ಮತಿಸಿದ ಸಂದರ್ಭದಲ್ಲೂ “ ಎಲ್ಲಾ ಮಕ್ಕಳಿಗೂ ಶಿಕ್ಷಣ ಲಭಿಸಬೇಕೆಂಬುದೇ ನನ್ನ ಆಶಯ. ನನಗೆ ಯಾವುದೇ ಸಂಭಾವನೆ ಬೇಡ ” ಎಂದು ಸಂಭಾವನೆ ತಿರಸ್ಕರಿಸಿ, ತಮ್ಮ ಸಾಮಾಜಿಕ ಕಳಕಳಿ ತೋರಿದವರು ಪುನೀತ್.

ಮಹಾ ದಾನಿ !

image 7

ಪುನೀತ್ ರಾಜಕುಮಾರ್ ಅವರು ಅಸುನೀಗುವವರೆಗೂ ಆತನಲ್ಲಿನ ಒಂದು ವಿಶೇಷ ಗುಣ ಜಗತ್ತಿಗೆ ಪರಿಚಯವಾಗಿರಲಿಲ್ಲ. ಆತ ಮಹಾ ದಾನಿ. ಆತ ಎಡಗೈಯಲ್ಲಿ ಕೊಟ್ಟಿದ್ದು ಬಲಗೈಗೆ ತಿಳಿಯುತ್ತಿರಲಿಲ್ಲ.
ಎಷ್ಟೋ ಮಕ್ಕಳಿಗೆ ಅನ್ನ ಕೊಟ್ಟು, ಆಶ್ರಯ ಕಲ್ಪಿಸಿ, ಶಿಕ್ಷಣ ಕೊಡಿಸಿದ ವಿಚಾರವೂ ಸ್ವಂತ ಅವರ ಕುಟುಂಬಕ್ಕೇ ತಿಳಿದಿರಲಿಲ್ಲ .

ಅಪ್ಪು ಸ್ಮರಣೆ !

puneeth 1

ನಾಯಕ ನಟನಾಗಿ ಕನ್ನಡಿಗರ ಮನಸೂರೆಗೊಂಡ ಅಪ್ಪು ಚಿತ್ರದಿಂದ ಪುನೀತ್ ರಾಜಕುಮಾರ್ ಅವರು ಅಭಿಮಾನಿಗಳಿಂದ ಹಾಗೂ ಚಿತ್ರರಂಗದಲ್ಲಿ ಅಪ್ಪು ಎಂದೇ ಕರೆಯಲ್ಪಡುತ್ತಿದ್ದರು.
ಕರ್ನಾಟಕ ಚಲನಚಿತ್ರ ಅಕಾಡೆಮಿಯು ನವೆಂಬರ್ ೧ ರಂದು ಆಯೋಜಿಸಿದ ಪುನೀತ್ ಸ್ಮರಣಾಂಜಲಿ, ಬೆಂಗಳೂರಿನ ಅರಮನೆ ಮೈದಾನದಲ್ಲಿ ನವೆಂಬರ್ ೧೬ ರಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು ಏರ್ಪಡಿಸಿದ ಪುನೀತ ನಮನ ಹಾಗೂ ನವೆಂಬರ್ ೨೭ ರಂದು ಕರ್ನಾಟಕ ಕಿರುತೆರೆ ಕಲಾವಿದರ ಸಂಘ ಸಂಯೋಜಿಸಿದ ಅಪ್ಪು ಅಮರ ಕಾರ್ಯಕ್ರಮಗಳು ಪುನೀತ್ ರಾಜಕುಮಾರ್ ಅವರಿಗೆ ಕರುನಾಡು ಸಲ್ಲಿಸಿದ ಶ್ರದ್ಧಾಂಜಲಿ ಕಾರ್ಯಕ್ರಮಗಳಲ್ಲಿ ಉಲ್ಲೇಖಿಸಬಹುದಾದ ಪ್ರಮುಖ ಕಾರ್ಯಕ್ರಮಗಳು.

ಸಾವಿನಲ್ಲೂ ದಾಖಲೆ !

ಪುನೀತ್ ರಾಜಕುಮಾರ್ ಅವರು ಮೃತರಾಗಿದ್ದಾರೆ ಎಂಬ ವಿಷಯವನ್ನು ಅರಿತ ಕೂಡಲೇ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದವರ ಸಂಖ್ಯೆ ಇಪ್ಪತ್ತು ಲಕ್ಷ ಮೀರಿತ್ತು ಎಂಬುದು ಪುನೀತ್ ಅವರು ಸಾವಿನಲ್ಲೂ ಸ್ಥಾಪಿಸಿದ ದಾಖಲೆೆ ಎನ್ನಬಹುದು.ರಾಜ್ಯದಲ್ಲಿ 6 ಐಎಎಸ್ ಅಧಿಕಾರಿಗಳ ವರ್ಗಾವಣೆ

ಕರ್ನಾಟಕ ರತ್ನ !

image 8

ಪುನೀತ್ ರಾಜಕುಮಾರ್ ಅವರು ಕಲಾಲೋಕಕ್ಕೆ ಸಲ್ಲಿಸಿದ ಸೇವೆ ಮಾತ್ರವಲ್ಲ, ಸಮಾಜಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ, ಪುನೀತ್ ಅವರಿಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿಯನ್ನೂ ಕೂಡ ರಾಜ್ಯ ಸರ್ಕಾರ ನೀಡಿ ಗೌರವಿಸಿದೆ.

Share This Article
Leave a comment