ಹತ್ರಾಸ್ ಪ್ರಕರಣ- ಕೋಮುದ್ವೇಷ ಹರಡಲು ಯತ್ನಿಸಿದ್ದ ನಾಲ್ವರ ಬಂಧನ

Team Newsnap
2 Min Read

ಹತ್ರಾಸ್‌ನಲ್ಲಾದ ಅತ್ಯಾಚಾರದ ಪ್ರಕರಣವನ್ನು ಕೋಮುದ್ವೇಷಕ್ಕಾಗಿ ಬಳಸಿಕೊಳ್ಳಲು ಪ್ರಯತ್ನಿಸಿದ ಪಿಎಫ್‌ಐನ ನಾಲ್ವರು ಸದಸ್ಯರನ್ನು ಉತ್ತರ ಪ್ರದೇಶದ ಪೋಲೀಸರು ಬಂಧಿಸಿದ್ದಾರೆ.

ಮುಜಫರ್‌ನಗರದ ಸಿದ್ದಿಕಿ, ಮಲಪ್ಪುರಂನ ಸಿದ್ದಿಕ್, ಬಹ್ರೈಚ್ ಜಿಲ್ಲೆಯ ಮಸೂದ್ ಅಹ್ಮದ್ ಮತ್ತು ರಾಂಪುರ ಜಿಲ್ಲೆಯ ಆಲಂ ಬಂಧಿತ ಆರೋಪಿಗಳು.

ನಿನ್ನೆ ದೆಹಲಿಯಿಂದ ಉತ್ತರ ಪ್ರದೇಶಕ್ಕೆ ತೆರಳುತ್ತಿರುವಾಗ ಆರೋಪಿಗಳ ವಾಹನವನ್ನು ಅಡ್ಡಗಟ್ಟಿದ ಪೋಲೀಸರು ಇವರ ವಿಚಾರಣೆ ನಡೆಸಿದಾಗ ಇವರು ಪಾಪುಲರ್ ಫ್ರಂಟ್ ಆಫ್ ಇಂಡಿಯಾದ ಸದಸ್ಯರು‌ ಎಂದು ತಿಳಿದು ಬಂದಿದೆ. ಇವರು ಹತ್ರಾಸ್‌ನ ಅತ್ಯಾಚಾರದ ಪ್ರಕರಣವನ್ನಿಟ್ಟುಕೊಂಡು ಕೋಮುದ್ವೇಷದ ಮೂಲಕ ಉತ್ತರ ಪ್ರದೇಶದ ಶಾಂತಿಯನ್ನು ಕದಡಲು ಯೋಜನೆ ರೂಪಿಸಿದ್ದರು ಎಂದು ಆರೋಪಿಸಿ ಪೋಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

ಘಟನೆಯ ಬಗ್ಗೆ ಮಾತನಾಡಿದ ಕಾನೂನು ಮತ್ತು ಸುವ್ಯವಸ್ಥೆಯ ಎಡಿಜಿಪಿ ಪ್ರಶಾಂತ್ ಕುಮಾರ್ ಅವರು ‘ದೆಹಲಿಯಿಂದ ಹತ್ರಾಸ್‌ಗೆ ಪ್ರಯಾಣಿಸುತ್ತಿದ್ದ ಶಂಕಿತ ವ್ಯಕ್ತಿಗಳ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಆದ್ದರಿಂದ ಅವರ ವಾಹನಗಳನ್ನು ತಡೆದು ವಿಚಾರಣೆ ನಡೆಸಿದ್ದರು. ಈ ವೇಳೆಯಲ್ಲಿ ಅವರು‌ ಪಾಪುಲರ್ ಫ್ರಂಟ್ ಆಫ್ ಇಂಡಿಯಾದ ಸದಸ್ಯರು ಎಂದು ತಿಳಿದು ಬಂದಿದೆ. ಕ್ಯಾಂಪಸ್ ಆಫ್ ಫ್ರಂಟ್ ಜೊತೆಯೂ ಅವರ ನಂಟಿರುವುದು ತಿಳಿದು ಬಂದಿದೆ’ ಎಂದು ಹೇಳಿದರು.

ಪೋಲೀಸರು ಆರೋಪಿಗಳ ಬಳಿಯಿದ್ದ ಲ್ಯಾಪ್‌ಟಾಪ್, ಮೊಬೈಲ್, ಕೋಮುದ್ವೇಷ ಹೊತ್ತಿಸುವ ಹಾಗೂ ಶಾಂತಿ ಕದಡಬಲ್ಲಂತಹ ಸಾಹಿತ್ಯವನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿಗಳ ಮೇಲೆ ಪೋಲೀಸರು ಭಾರತೀಯ ದಂಡ ಸಂಹಿತೆ, 124 ಎ (ದೇಶ-ದೇಶದ್ರೋಹದ ಏಕತೆ ಮತ್ತು ಸಮಗ್ರತೆಗೆ ಧಕ್ಕೆ ತರುವ ಪ್ರಯತ್ನ) 120-ಬಿ (ಪಿತೂರಿ), 153-ಎ (ಧರ್ಮದ ಆಧಾರದ ಮೇಲೆ ದ್ವೇಷವನ್ನು ಹರಡುವುದು) ಸೆಕ್ಷನ್ 109 (ಅಪರಾಧದ ಪ್ರಚೋದನೆ) ಭಾಷೆ ಮತ್ತು ಜಾತಿ, 153-ಬಿ (ಹೇಳಿಕೆಗಳು ರಾಷ್ಟ್ರೀಯ ಸಮಗ್ರತೆಗೆ ಪ್ರತಿಕೂಲ ಪರಿಣಾಮ ಬೀರುತ್ತವೆ), 195 (ಸಾಕ್ಷ್ಯಗಳ ರಚನೆ), 465 (ನಕಲಿ), 468 (ದುರುದ್ದೇಶಪೂರಿತ ದಾಖಲೆಗಳ ಬಳಕೆ), 501 (ಮಾನಹಾನಿಕರ ಮುದ್ರಣ ಸೇರಿದಂತೆ ಒಟ್ಟು 20 ವಿಭಾಗಗಳು), 505 (ಭಯದ ವಾತಾವರಣವನ್ನುಂಟುಮಾಡುವ ಹೇಳಿಕೆ) ಮತ್ತು ಮಾಹಿತಿ ತಂತ್ರಜ್ಞಾನ ತಿದ್ದುಪಡಿ ಕಾಯ್ದೆ 2008 ರ ಸೆಕ್ಷನ್ 67ರ ಪ್ರಕಾರ ಆರೋಪಿಗಳ ಮೇಲೆ ಪ್ರಕರಣ ಹೇರಿ‌ ಎಫ್‌ಐಆರ್ ದಾಖಲಿಸಲಾಗಿದೆ.

TAGGED: , , ,
Share This Article
Leave a comment