ಕೇಂದ್ರದ ಮಾಜಿ ಸಚಿವ ಬಾಬಾಗೌಡ ಪಾಟೀಲ (78) ಕೊರೊನಾಗೆ ಬಲಿಯಾಗಿದ್ದಾರೆ.
ಬಾಬಾಗೌಡ ಬೆಳಗಾವಿ ತಾಲೂಕಿನ ಚಿಕ್ಕಹಿರೇಬಾಗೇವಾಡಿ ಗ್ರಾಮದ ನಿವಾಸಿ. ವಾರದ ಹಿಂದೆ ಬಾಬಾಗೌಡ ಪಾಟೀಲ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು.
ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಿಸದೇ ಶುಕ್ರವಾರ ಬೆಳಗ್ಗೆ ಪಾಟೀಲರು ನಿಧನರಾದರು.
1989 ರಲ್ಲಿ ಬೆಳಗಾವಿ ಗ್ರಾಮೀಣ, ಕಿತ್ತೂರು ಕ್ಷೇತ್ರದಿಂದ ಸ್ಪರ್ಧಿಸಿ ಎರಡೂ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದರು. ರೈತ ಸಂಘದ ಅಭ್ಯರ್ಥಿ ಆಗಿ ವಿಧಾನಸಭೆ ಪ್ರವೇಶಿಸಿದ್ದ ಬಾಬಾಗೌಡ, 1998ರಲ್ಲಿ ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಗಿ ಗೆಲುವು ಕಂಡಿದ್ದರು.
ಅಲ್ಲದೇ ವಾಜಪೇಯಿ ಸರ್ಕಾರದಲ್ಲಿ ಕೇಂದ್ರ ಗ್ರಾಮೀಣ ಅಭಿವೃದ್ಧಿ ಇಲಾಖೆಯ ಸಚಿವರಾಗಿ ದೇಶದಲ್ಲಿ ಗ್ರಾಮಸಡಕ್ ಯೋಜನೆ ಜಾರಿಗೊಳಿಸಿದ್ದರು.