ಚಲನಚಿತ್ರ ಸಮಾಜದ ಮೇಲೆ ಪ್ರಭಾವ ಬೀರುವ ಪರಿಣಾಮಕಾರಿ ಮಾಧ್ಯಮ ಎಂದು ಆಪ್ತ ಸಮಾಲೋಚಕ ನಡಹಳ್ಳಿ ವಸಂತ್ ಅಭಿಪ್ರಾಯಪಟ್ಟರು.
ಶಿವಮೊಗ್ಗ ಹೊರ ವಲಯದ ಸುಬ್ಬಯ್ಯ ವೈದ್ಯಕೀಯ ಮಹಾ ವಿದ್ಯಾಲಯದಲ್ಲಿ ಸುಬ್ಬಯ್ಯ ಲಿಟರರಿ ಕ್ಲಬ್ ಮತ್ತು ಮನೋವೈದ್ಯಶಾಸ್ತ್ರ ವಿಭಾಗದ ಸಹಯೋಗದಲ್ಲಿ ಏರ್ಪಡಿಸಿದ್ದ ಚಲನಚಿತ್ರ ವಿಮರ್ಶೆ ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಪ್ರತಿಯೊಬ್ಬರಲ್ಲೂ ಒಂದಲ್ಲ ಒಂದು ರೀತಿಯ ಒತ್ತಡಗಳು ಇರುವುದು ಇಂದು ಸಾಮಾನ್ಯ ಸಂಗತಿ. ಇದನ್ನು ಹೇಳಿಕೊಳ್ಳಲು ಕೀಳರಿಮೆ ಇರುತ್ತದೆ. ಇಂಥ ಕೀಳರಿಮೆ ತೊಡೆದುಹಾಕಿ ಸಮಸ್ಯೆ ಪರಿಹರಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಶಿಕಾರಿಪುರ ಸರ್ಕಾರಿ ಆಸ್ಪತ್ರೆಯ ಮನೋವೈದ್ಯ ಡಾ. ಎಚ್.ಸಿ. ಸಂಜಯ್ ಮಾತನಾಡಿ, ಭಾವನಾತ್ಮಕ ಏರಿಳಿತಗಳು ದೇಹದ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ದೈಹಿಕ ಆರೋಗ್ಯದಷ್ಟೇ ಮಾನಸಿಕ ಆರೋಗ್ಯಕ್ಕೂ ಒತ್ತು ನೀಡಬೇಕೆಂದರು.
ಮನಶಾಸ್ತ್ರಜ್ಞ ವಿಭಾಗದ ಮುಖ್ಯಸ್ಥ ಡಾ. ಹರೀಶ್ ದೇಲಾಂತ ಬೆಟ್ಟು, ಡೀನ್ ಡಾ. ಎಸ್.ಎಂ. ಕಟ್ಟಿ, ಉಪ ಪ್ರಾಂಶುಪಾಲ ಡಾ. ಬಿ.ಎಂ.ಸಿದ್ದಲಿಂಗಪ್ಪ, ಶೈಕ್ಷಣಿಕ ನಿರ್ದೇಶಕ ಡಾ. ಆರ್. ಕೆ. ಪೈ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.
ಸ್ಪರ್ಧಾ ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ, ಬಹುಮಾನ ವಿತರಿಸಲಾಯಿತು. ವೈದ್ಯಕೀಯ ಮಹಾವಿದ್ಯಾಲಯದ ಕಾರ್ಯನಿರ್ವಾಹಕ ನಿರ್ದೇಶಕಿ ಡಾ. ವಿನಯಾ ಶ್ರೀನಿವಾಸ್ ಸ್ವಾಗತಿಸಿದರು. ಮನೋರೋಗ ತಜ್ಞೆ ಡಾ. ಕೆ.ಎಸ್. ಶುಭ್ರತಾ ನಿರೂಪಿಸಿದರು. ಯು.ಜಿ. ನಿರಂಜನಮೂರ್ತಿ ವಂದಿಸಿದರು.