ರಾಜ್ಯದಲ್ಲಿ ದಿನಕ್ಕೊಂದು ಕುತೂಹಲದ ಪುಟವನ್ನು ತೆರೆದಿಡುತ್ತಿರುವ ಡ್ರಗ್ಸ್ ಪ್ರಕರಣದಲ್ಲಿ ಈಗ ಪೋಲೀಸರು ಕಾಂಗ್ರೆಸ್ನ ಮಾಜಿ ಸಚಿವ ರುದ್ರಪ್ಪ ಲಮಾಣಿ ಪುತ್ರ ದರ್ಶನ್ ಲಮಾಣಿ ಅವರನ್ನು ಡ್ರಗ್ ಪೆಡ್ಲರ್ಗಳಿಗೆ ಆಶ್ರಯ ನೀಡಿದ ಆರೋಪದ ಮೇಲೆ ಬಂಧಿಸಿದ್ದಾರೆ.
ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಮುಂಚೆ ಪೋಲೀಸರು ಸುಜಯ್ ಎಂಬುವವರನ್ನು ಬಂಧಿಸಿದ್ದರು. ವಿಚಾರಣೆಯಲ್ಲಿ ಸುಜಯ್ ನೀಡಿದ ಮಾಹಿತಿಯ ಮೇರೆಗೆ ಸದಾಶಿವ ನಗರದ ರಿಸೆಟ್ ಜಿಮ್ ಕಛೇರಿಯ ಮೇಲೆ ಪೋಲೀಸರು ದಾಳಿ ನಡೆಸಿದಾಗ ದರ್ಶನ್ ಲಮಾಣಿ ಸೇರಿದಂತೆ, ಒನ್ ಆ್ಯಪ್ ವಿಟಮಿನ್ ಕಂಪನಿಯ ಸಿಇಓ ಹೇಮಂತ್ ಹಾಗೂ 7 ಜನರನ್ನು ಪೋಲೀಸರು ಬಂಧಿಸಿದ್ದಾರೆ.
ಡ್ರಗ್ ಪೆಡ್ಲರ್ಗಳಿಗೆ ದರ್ಶನ್ ಹಾಗೂ ಸಂಗಡಿಗರು ಗೋವಾದಲ್ಲಿ ಆಶ್ರಯ ನೀಡಿದ ಆರೋಪವಲ್ಲದೇ, ಡಾರ್ಕ್ ನೆಟ್ ಮೂಲಕ ಡ್ರಗ್ಸ್ನ ದಂಧೆ ನಡೆಸಿದ ಆರೋಪವೂ ಅವರ ಮೇಲಿದೆ.
ಆರೋಪಿ ದರ್ಶನ್ ತಂದೆ ಈ ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಜವಳಿ ಖಾತೆಯ ಸಚಿವರಾಗಿದ್ದರು. ಬಂಧಿತರೆಲ್ಲರೂ ಸದಾಶಿವ ನಗರದ ನಿವಾಸಿಗಳಾಗಿದ್ದಾರೆ. ದಾಳಿಯಲ್ಲಿ 500 ಗ್ರಾಂ ಹೈಡ್ರೋ ಗಾಂಜಾವನ್ನು ಪೋಲೀಸರು ವಶ ಮಾಡಿಸಿಕೊಂಡಿದ್ದಾರೆ.