ಮಂಡ್ಯದಲ್ಲಿ ಮುಂಬರಲಿರುವ ಗ್ರಾಮ ಪಂಚಾಯತ್ ಚುಣಾವಣೆಗಳು ರಂಗು ಪಡೆದುಕೊಳ್ಳುತ್ತಿವೆ.
ಈ ರಂಗಿನ ಜೊತೆಗೆ ವಿವಿಧ ರಾಜಕೀಯ ಪಕ್ಷಗಳ ನಾಯಕರು ಸಹ ತಮ್ಮ ಮುಖಕ್ಕೆ ಬಣ್ಣ ಹಚ್ಚಲು ಪ್ರಾರಂಭಿಸಿದ್ದಾರೆ.
ಗ್ರಾಮ ಪಂಚಾಯತ್ ಚುಣಾವಣೆಯ ಪ್ರಚಾರದ ನಿಮಿತ್ತ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಬಹು ಕಸರತ್ತನ್ನು ಮಾಡುತ್ತಿವೆ. ಇದೇ ವೇಳೆ ಕೆ.ಆರ್. ಪೇಟೆ ಕ್ಷೇತ್ರದ ಚೌಡೇನಹಳ್ಳಿಯ ನಂಜೇಗೌಡ ಎಂಬ ರೈತ ಆತ್ಮಹತ್ಯೆಯು ರಾಜಕೀಯ ಪಕ್ಷಗಳಿಗೆ ಅನುಕಂಪದ ದಾಳವಾಗಿದೆ.
ಸೂತಕದ ಮನೆಯನ್ನು ತಮ್ಮ ರಾಜಕೀಯ ದಾಳ ಮಾಡಿಕೊಂಡಿರುವ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಒಂದೊಂದಾಗಿ ಮೃತನಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿವೆ.
ಬಿಜೆಪಿಯ ಸಚಿವ ನಾರಾಯಣ ಗೌಡ ನಂಜೇಗೌಡ ಅವರ ಮನೆಗೆ ಭೇಟಿ ನೀಡಿ, 25,000 ರೂಗಳ ವೈಯಕ್ತಿಕ ಪರಿಹಾರದ ಚೆಕ್ ವಿತರಿಸಿದರು.
ಬಳಿಕ ಮಾಧ್ಯಮದವರೊಡನೆ ನಿಖಿಲ್ ಅವರ ಬಗ್ಗೆ ಮಾತನಾಡಿದ ಅವರು ‘ನಿಖಿಲ್ ಅವರಿಂದ ನಾನು ಪಾಠ ಕಲಿಯಬೇಕಿಲ್ಲ’ ಎಂದರು.
ನಂತರ ನಿಖಿಲ್ ಕುಮಾರಸ್ವಾಮಿ ಮೃತ ರೈತರ ಮನೆಗೆ ಭೇಟಿ ನೀಡಿ ಅವರೂ ಸಹ ಕುಟುಂಬಕ್ಕೆ ವೈಯಕ್ತಿಕ ಪರಿಹಾರ ನೀಡಿ ‘ನಾನು ಬರುತ್ತಿರುವದರಿಂದಾದರೂ ನಾರಾಯಣ ಗೌಡರು ಇಲ್ಲಿ ಬಂದು ಪರಿಹಾರ ನೀಡಿದ್ದು ಖುಷಿ ತಂದಿದೆ. ಅವರು ಏನೇ ವ್ಯಂಗವಾಗಿ ಮಾತನಾಡಿದ್ದರೂ ಪರವಾಗಿಲ್ಲ. ರೈತರ ಆತ್ಮಹತ್ಯೆ ನಿಲ್ಲಿಸಲು ಸರ್ಕಾರ ಸೂಕ್ತವಾದ ಕ್ರಮಗಳನ್ನು ಕೈಗೊಳ್ಳಬೇಕು. ನಮ್ಮ ತಂದೆ ಅಧಿಕಾರದಲ್ಲಿದ್ದರೆ ಅದು ಸಾಧ್ಯವಾಗುತ್ತಿತ್ತು’ ಎಂದು ಸುದ್ದಿಗಾರರೊಡನೆ ಹೇಳಿದರು.
ನಾರಾಯಣ ಗೌಡ ಹಾಗೂ ನಿಖಿಲ್ ಕುಮಾರಸ್ವಾಮಿ ಅವರ ಸಹಾಯಕ್ಕೆ ಕೃತಜ್ಞತೆ ಸಲ್ಕಿಸಿದ ಮೃತನಕುಟುಂಬದವರು ‘ಸರ್ಕಾರದವರು ರೈತರಿಗೆ ಸೂಕ್ತವಾದ ನ್ಯಾಯ ಒದಗಿಸಬೇಕು’ ಎಂದು ಆಗ್ರಹಿಸಿದರು.