ಡಿಕೆಶಿಯಿಂದ ಬಿಜೆಪಿಯವರನ್ನು ಸೆಳೆಯುವ ಯತ್ನ: ಯಡಿಯೂರಪ್ಪ ಆರೋಪ

Team Newsnap
1 Min Read

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನಮ್ಮವರನ್ನು (ಬಿಜೆಪಿಯವರನ್ನು) ಸೆಳೆಯುವ ಯತ್ನ ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆರೋಪಿಸಿದರು.


ಆದರೆ ಅವರು (ಡಿಕೆಶಿ) ಅದರಲ್ಲಿ ಯಶಸ್ಸು ಕಾಣೋದಿಲ್ಲ ಎಂದು ಬಿಎಸ್‌ವೈ ದಾವಣಗೆರೆಯಲ್ಲಿ ಧೈರ್ಯದ ಮಾತುಗಳನ್ನಾಡಿದ್ದಾರೆ. ಕಾಂಗ್ರೆಸ್‌ನವರು ಬಿಜೆಪಿಯವರನ್ನು ಸಂಪರ್ಕಿಸುತ್ತಿರುವುದು ನಿಜ. ಆದರೆ ನಮ್ಮವರು ಪಕ್ಷ ಬಿಟ್ಟು ಹೋಗುವ ಪ್ರಶ್ನೆಯೇ ಇಲ್ಲ. ಬದಲಿಗೆ ಹಲವು ಕಾಂಗ್ರೆಸ್ ಸದಸ್ಯರು ಬಿಜೆಪಿಗೆ ಬರುತ್ತಿದ್ದಾರೆ ಎಂದು ಹೇಳಿದರು. ಕಾಂಗ್ರೆಸ್ ಪಕ್ಷವು ನನ್ನನ್ನು ಹಗುರವಾಗಿ ತೆಗೆದುಕೊಳ್ಳಬಾರದು ಎಂದು ಎಚ್ಚರಿಕೆಯನ್ನೂ ಮಾಜಿ ಮುಖ್ಯಮಂತ್ರಿಗಳು ನೀಡಿದರು.


ಚುನಾವಣೆಗೆ ಸಜ್ಜುಗೊಳ್ಳುವಾಗ ಪ್ರತಿಪಕ್ಷಗಳನ್ನು ಯಾರೂ ಹಗುರವಾಗಿ ತೆಗೆದುಕೊಳ್ಳಬಾರದು ಎಂದು, ಸಾಕಷ್ಟು ಚುನಾವಣೆಗಳನ್ನು ನೋಡಿರುವ ಹಿರಿಯ ಮುಖಂಡ ಯಡಿಯೂರಪ್ಪ ಇದೇ ವೇಳೆ ಪಕ್ಷದವರಿಗೆ ಕಿವಿಮಾತು ಹೇಳಿದರು.
ಪಕ್ಷದ ಸಂಘಟನೆಗೆ ಆದ್ಯತೆ ನೀಡಬೇಕಾಗಿದೆ. ಮುಂದಿನ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕಾಗಿದೆ. ನಮ್ಮೆಲ್ಲ ವಿಶೇಷ ಪ್ರಯತ್ನದಿಂದ ೧೩೦ ರಿಂದ ೧೪೦ ಸ್ಥಾನಗಳನ್ನು ಗೆಲ್ಲಬೇಕಾಗಿದೆ.

ಎಸ್‌ಸಿ, ಎಸ್‌ಟಿ, ಹಿಂದುಳಿದ ಸಮುದಾಯದ ಜನರನ್ನು ಹೆಚ್ಚೆಚ್ಚು ಸಂಖ್ಯೆಯಲ್ಲಿ ಸೇರಿಸಿಕೊಂಡಾಗ ಪಕ್ಷ ಬಲಗೊಳ್ಳುತ್ತದೆ. ಪ್ರತಿಬೂತ್‌ಗಳಲ್ಲಿ ಪಕ್ಷ ಸಂಘಟನೆಗೆ ಒತ್ತು ನೀಡಬೇಕಾಗಿದೆ. ಅಭಿವೃದ್ಧಿ ಕಾರ್ಯಕ್ರಮಗಳನ್ನು ಮನೆ ಮನೆಗೆ ತಲುಪಿಸಲು ಕಾರ್ಯಕರ್ತರು ಮುಂದಾಗಬೇಕು.


ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಉತ್ತಮ ಆಡಳಿತ ಕೊಟ್ಟಿದ್ರು ಅದನ್ನು ಜನರಿಗೆ ತಲುಪಿಸುವಲ್ಲಿ ಕಾರ್ಯಕರ್ತರು ಯಶಸ್ಸು ಕಾಣಲಿಲ್ಲ ಎಂದು ಯಡಿಯೂರಪ್ಪ ವಿವರಿಸಿದರು.

Share This Article
Leave a comment