ಚಿತ್ರವೊಂದರಲ್ಲಿ ಚಿತ್ರರಸಿಕರಿಗೆ ಅದರಲ್ಲೂ “ಪವರ್ಸ್ಟಾರ್’ ಪುನೀತ್ ರಾಜ್ಕುಮಾರ್ ಅಭಿಮಾನಿಗಳಿಗೆ ಏನೇನು ಕೊಡಬೇಕು ಎಂಬುದನ್ನು ಚೆನ್ನಾಗಿ ಅರಿತಿರುವುದರಿಂದಲೇ ಕನ್ನಡ ಚಿತ್ರರಂಗದಲ್ಲಿ ಯಶಸ್ಸಿನ ಮೆಟ್ಟಿಲು ಏರುತ್ತಿರುವ ನಿರ್ದೇಶಕ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ ಸಂತೋಷ್ ಆನಂದ್ ರಾಮ್. ಇದಕ್ಕೆ ಉದಾಹರಣೆಯೆಂದರೆ “ರಾಜಕುಮಾರ’ ಮತ್ತು “ಯುವರತ್ನ’.
ಈ ಇಬ್ಬರ ಜೋಡಿ ಯಶಸ್ವಿಯಾಗಿರುವುದರಿಂದಲೇ ಇವರಿಂದ ಹೊಸ ಚಿತ್ರದ ನಿರೀಕ್ಷೆ ಇಟ್ಟುಕೊಂಡಿದ್ದಾರೆ ಅಭಿಮಾನಿಗಳು. ಈಗ ಇವರಿಗೆ ಖುಷಿ ಕೊಡುವ ಸುದ್ದಿಯೊಂದನ್ನು ಸ್ವತಃ ಸಂತೋಷ್ ಆನಂದ್ ರಾಮ್ ಅವರೇ ಪ್ರಕಟಿಸಿದ್ದಾರೆ. ಅದೆಂದರೆ, ಮುಂದಿನ ವರ್ಷ ನಮ್ಮ ಕಾಂಬಿನೇಷನ್ನಲ್ಲಿ ಹೊಸ ಚಿತ್ರ ಸೆಟ್ಟೇರಲಿದೆ ಎಂದು.
ತಮ್ಮ ಟ್ವಿಟರ್ ಖಾತೆಯಲ್ಲಿ ಪುನೀತ್ ಜೊತೆಗಿರುವ ಚಿತ್ರವನ್ನು ಹಂಚಿಕೊಂಡಿದ್ದಾರೆ. ಪುನೀತ್ ಮತ್ತು ನನ್ನ ಕಾಂಬಿನೇಷನ್ನ ಹೊಸ ಚಿತ್ರದ ಬಗ್ಗೆ ಅಭಿಮಾನಿಗಳು ಹಾಗೂ ಪ್ರೇಕ್ಷಕರು ಯಾವಾಗಲೂ ಕೇಳುತ್ತಿದ್ದರು ಎಂದೂ ಹೇಳಿಕೊಂಡಿದ್ದಾರೆ. ಈ ಚಿತ್ರವನ್ನೂ ಹೊಂಬಾಳೆ ಫಿಲಂಸ್ನವರೇ ನಿರ್ಮಿಸುತ್ತಿರುವುದು. ಈ ವಿಷಯವನ್ನೂ ಅವರೇ ತಿಳಿಸಿದ್ದಾರೆ.
ನಿಮ್ಮೆಲ್ಲರ ಪ್ರೀತಿಗೆ ಧನ್ಯವಾದಗಳು. “ನಿಮ್ಮ ಅಭಿಮಾನ ನಮಗೆ ಶ್ರೀ ರಕ್ಷೆ’ ಎಂದೂ ಬರೆದುಕೊಂಡಿದ್ದಾರೆ.