ಕೊರೋನಾ ವೈರಸ್ ನ ಎರಡನೇ ಅಲೆಗೆ ಸ್ಯಾಂಡಲ್ವುಡ್ ಯುವ ನಟ ಹಾಗೂ ನಿರ್ಮಾಪಕ ಡಾ. ಡಿ.ಎಸ್. ಮಂಜುನಾಥ್ ಏಪ್ರಿಲ್ ಹಾಗೂ ಮಂಜುನಾಥ್ ನಿರ್ಮಾಣ ಮಾಡಿದ ಎರಡು ಚಿತ್ರಗಳ ನಿರ್ದೇಶಕ ಅಭಿರಾಮ್ ಕೋವಿಡ್ಗೆ ಇಂದು ಬಲಿಯಾಗಿದ್ದಾರೆ.
ಡಿ.ಎಸ್. ಮಂಜುನಾಥ್. ‘ಸಂಯುಕ್ತ-2’ ಸಿನಿಮಾದ ಮೂಲಕ ನಿರ್ಮಾಪಕರಾಗಿ ಮತ್ತು ನಟನಾಗಿ ಚಿತ್ರರಂಗಕ್ಕೆ ಕಾಲಿಟ್ಟಿದ್ದರು.
ನಂತರ ಕೆಮಿಸ್ಟ್ರಿ ಆಫ್ ಕರಿಯಪ್ಪ ಸಿನಿಮಾವನ್ನು ನಿರ್ಮಿಸಿ ಹೆಸರು ಮಾಡಿದರು. ಸದ್ಯ ‘೦% ಲವ್’ ಚಿತ್ರದಲ್ಲಿ ಹೀರೋ ಆಗಿ ಕೂಡ ನಟಿಸುತ್ತಿದ್ದರು.
‘ಸಂಯುಕ್ತ 2’ ಮತ್ತು ‘೦% ಲವ್’ ಎರಡೂ ಚಿತ್ರಗಳನ್ನು ನಿರ್ದೇಶನ ಮಾಡಿದ್ದು ಅಭಿರಾಮ್. ಈಗ ಅಭಿರಾಮ್ ಕೂಡಾ ಮಂಜುನಾಥ್ ಅವರನ್ನು ಹಿಂಬಾಲಿಸಿದ್ದಾರೆ.
ಅಭಿರಾಮ್ ಕಳೆದೊಂದು ವಾರದಿಂದ ಜ್ವರ, ಕೆಮ್ಮಿನಿಂದ ಬಳಲುತ್ತಿದ್ದರು. ಆದರೆ, ಪರೀಕ್ಷೆ ಮಾಡಿಸಿಕೊಳ್ಳದೆ ಮನೆಯಲ್ಲೇ ಇದ್ದರು.
ಇತ್ತೀಚೆಗೆ ಉಸಿರಾಟದ ತೊಂದರೆ ಅವರಲ್ಲಿ ಹೆಚ್ಚಾಗಿತ್ತು. ಈಗ ಅವರು ಹೃದಯಾಘಾತವಾಗಿ ಕೊನೆಯುಸಿರೆಳೆದಿದ್ದಾರೆ.
ಸಿನಿಮಾ ತೆರೆಗೆ ಬರುವ ಮುನ್ನವೇ ಚಿತ್ರದ ಹೀರೋ ಮತ್ತು ಡೈರೆಕ್ಟರ್ ಮೃತಪಟ್ಟಿದ್ದಾರೆ.
ಸೆಲೆಬ್ರಿಟಿಗಳಾದ ಬಾಲಿವುಡ್ ನಟ ರಾಹುಲ್ ವೋಹ್ರಾ, ತೆಲುಗು ನಟ ಟಿಎನ್ಆರ್, ತಮಿಳು ನಟ ಪಾಂಡು, ಕಾಲಿವುಡ್ ನಿರ್ದೇಶಕ ಕೆ.ವಿ. ಆನಂದ್, ಕನ್ನಡದ ಖ್ಯಾತ ನಿರ್ಮಾಪಕ ಕೋಟಿ ರಾಮು, ಯುವ ನಟ- ನಿರ್ಮಾಪಕ ಡಿ.ಎಸ್. ಮಂಜುನಾಥ್, ಕಾರ್ಯಕಾರಿ ನಿರ್ಮಾಪಕ ರಾಜಶೇಖರ್, ಪೋಸ್ಟರ್ ಡಿಸೈನರ್ ಮಸ್ತಾನ್, ಪುಟ್ಟಣ್ಣ ಕಣಗಾಲ್ ಪುತ್ರ ರಾಮು, ಕವಿರತ್ನ ಕಾಳಿದಾಸ ಸಿನಿಮಾ ನಿರ್ದೇಶಕ ರೇಣುಕಾ ಶರ್ಮಾ ಮುಂತಾದವರನ್ನು ಈ ಮಹಾಮಾರಿ ಬಲಿ ಪಡೆದುಕೊಂಡಿದೆ.