ಭಾರತ ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ( Dr B.R.Ambedkar )

Team Newsnap
4 Min Read

ಏಪ್ರಿಲ್ 14 ರಂದು ಭಾರತದ ಸಂವಿಧಾನ ಶಿಲ್ಪಿ, ಭಾರತ ಕಂಡ ಶ್ರೇಷ್ಠ ನಾಯಕರಲ್ಲಿ ಒಬ್ಬರಾದ ಡಾ.ಬಿ.ಆರ್. ಅಂಬೇಡ್ಕರ್ ಅವರ ಜನ್ಮದಿನ. ಸಮಾನತೆ, ಪ್ರಗತಿಯ ಕನಸು ಕಂಡ ಮೇರು ನಾಯಕ ನಮ್ಮ ಹೆಮ್ಮೆಯ ಸಂವಿಧಾನ ಶಿಲ್ಪಿ.

ಅಂಬೇಡ್ಕರ್ ಅವರ ಆದರ್ಶ ಎಲ್ಲರ ಜೀವನಕ್ಕೆ ದಾರಿ. ಬಾಬಾ ಸಾಹೇಬರ ಚಿಂತೆನೆಗಳು ಇಂದಿಗೂ ಯುವಜನೆತೆಗೆ ಸ್ಫೂರ್ತಿ ನೀಡುತ್ತಲೇ ಇದೆ.

ಡಾ ಅಂಬೇಡ್ಕರ್ ಅವರ ಬಾಲ್ಯದ ದಿನಗಳು ಬಲು ಕಷ್ಟದಿಂದಲೇ ಕೂಡಿತ್ತು. ಅಸ್ಪೃಶ್ಯತೆ, ಅಸಮಾನತೆಯ ನೋವಿನ ನಡುವೆ ಬೆಳೆದಿದ್ದ ಅಂಬೇಡ್ಕರ್ ಅವರು ಬಳಿಕ ಇಡೀ ವಿಶ್ವವೇ ಗೌರವಿಸುವಂತಹ ನಾಯಕರಾಗಿ ರೂಪುಗೊಂಡಿದ್ದರು. ಅದೆಷ್ಟೋ ಜನರಿಗೆ ಸ್ಫೂರ್ತಿಯಾಗಿದ್ದರು.

ಅಂಬೇಡ್ಕರ್ ಜೀವನ

ಡಾ. ಭೀಮರಾವ್ ಅಂಬೇಡ್ಕರ್ ಅವರು ಮಧ್ಯಪ್ರದೇಶದ ಮೋವ್‌ನಲ್ಲಿ 1891 ರ ಏಪ್ರಿಲ್ 14 ರಂದು ಜನಿಸಿದರು. ಡಾ.ಭೀಮರಾವ್ ಅಂಬೇಡ್ಕರ್ ಅವರ ತಂದೆಯ ಹೆಸರು ರಾಮಜಿ ಮಾಲೋಜಿ ಸಕ್ಪಾಲ್ ಮತ್ತು ತಾಯಿಯ ಹೆಸರು ಭೀಮಾಬಾಯಿ. ತಂದೆ-ತಾಯಿಯ ಹದಿನಾಲ್ಕನೆಯ ಮಗುವಾಗಿ ಜನಿಸಿದ ಡಾ.ಭೀಮರಾವ್ ಅಂಬೇಡ್ಕರ್ ಮೇಧಾವಿ.

ambedkar

ಅಂಬೇಡ್ಕರ್ ಅವರು 1908ರಲ್ಲಿ ಎಲ್ಫಿನ್ ಸ್ಟೋನ್ ಹೈಸ್ಕೂಲ್‌ನಿಂದ ಮೆಟ್ರಿಕ್ಯೂಲೇಶನ್ ಪಾಸ್ ಮಾಡಿದರು. ಉನ್ನತ ಶಿಕ್ಷಣವನ್ನು ನ್ಯೂಯಾರ್ಕ್ ಕೊಲಂಬಿಯಾ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರವನ್ನು ಅಧ್ಯಯನ ಮಾಡಿದರು. 1920 ರಲ್ಲಿ ಬಿ. ಆರ್. ಅಂಬೇಡ್ಕರ್ ಅವರು ‘ಮೂಕನಾಯಕ’ ಎಂಬ ಪತ್ರಿಕೆಯನ್ನು ಆರಂಭಿಸಿದರು.

ಸ್ವತಂತ್ರ ಭಾರತದ ಮೊದಲ ಕಾನೂನು ಸಚಿವರಾಗಿ ನೇಮಕಗೊಂಡಿದ್ದರು. ಅಂಬೇಂಡ್ಕರ್ ಅವರು ಸಂವಿಧಾನ ರಚನೆಯ ಕರಡು ಸಮಿತಿಯ ಅಧ್ಯಕ್ಷರಾಗಿದ್ದರು. ಭಾರತದ ಬೃಹತ್ ಸಂವಿಧಾನಕ್ಕೆ ಅಪಾರ ಕೊಡುಗೆ, ಶ್ರಮ ಹಾಕಿದ್ದ ಇವರನ್ನು ಭಾರತೀಯ ಸಂವಿಧಾನ ಶಿಲ್ಪಿ ಎಂದೇ ಕರೆಯಲಾಗುತ್ತದೆ.

ಆಧುನಿಕ ಭಾರತವನ್ನು ರೂಪಿಸುವಲ್ಲಿ ಭೀಮರಾವ್ ರಾಮ್‌ಜಿ ಅಂಬೇಡ್ಕರ್ ಅವರು ಮಹತ್ತರ ಪಾತ್ರ ವಹಿಸಿದ್ದಾರೆ. ಬಿ.ಆರ್.ಅಂಬೇಡ್ಕರ್ ಅವರು ತಮ್ಮ ಜೀವನದುದ್ದಕ್ಕೂ ಜಾತಿ ವ್ಯವಸ್ಥೆಯ ವಿರುದ್ಧ ಹೋರಾಡಿದರು.

1956ರಲ್ಲಿ ಬೌದ್ಧ ಧರ್ಮಕ್ಕೆ ಮತಾಂತರ

  • ಮಹಾರಾಷ್ಟ್ರದ ಮಹಾರ್ ಜಾತಿಗೆ ಸೇರಿದ ಹಿಂದೂ ಕುಟುಂಬದಲ್ಲಿ ಜನಿಸಿದ ಬಾಬಾ ಸಾಹೇಬರು 1956ರಲ್ಲಿ ಬೌದ್ಧ ಧರ್ಮಕ್ಕೆ ಮತಾಂತರಗೊಂಡರು.
  • ಮೂಲತಃ, ಇವರ ಉಪನಾಮ ಅಂಬಾವಾಡೇಕರ್, ಆದರೆ ಶಾಲೆಯ ದಾಖಲೆಗಳಲ್ಲಿ ಶಿಕ್ಷಕರು “ಅಂಬೇಡ್ಕರ್” ಎಂಬ ಉಪನಾಮವನ್ನು ನೀಡಿದರು.

9 ಭಾಷೆಗಳಲ್ಲಿ ಪಾರಂಗತ

  • ಅಂಬೇಡ್ಕರ್ ಒಬ್ಬ ಮೇಧಾವಿ, ಅಪಾರ ಪಾಂಡಿತ್ಯ ಹೊಂದಿದ್ದರು. ಇವರು 9 ಭಾಷೆಗಳಲ್ಲಿ ಪಾರಂಗತರಾಗಿದ್ದರು. ವಿದೇಶದಲ್ಲಿ ಅರ್ಥಶಾಸ್ತ್ರ ಡಾಕ್ಟರೇಟ್ ಪಡೆದ ಅಂಬೇಡ್ಕರ್‌ ವಿದೇಶಿ ವಿಶ್ವವಿದ್ಯಾಲಯದಿಂದ ಈ ವಿಷಯದಲ್ಲಿ ಪಿಎಚ್‌ಡಿ ಪಡೆದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಯನ್ನೂ ಸಹ ಪಡೆದಿದ್ದರು.
  • ಲಂಡನ್ ಮ್ಯೂಸಿಯಂನಲ್ಲಿ ಕಾರ್ಲ್ ಮಾರ್ಕ್ಸ್ ಜೊತೆಗೆ ಭಾರತದ ಹೆಮ್ಮೆಯ ಪುತ್ರ ಡಾ. ಅಂಬೇಡ್ಕರ್ ಅವರ ಪ್ರತಿಮೆಯನ್ನು ಸಹ ಸ್ಥಾಪಿಸಲಾಗಿದೆ.
  • ಲಂಡನ್‌ನ ಐಷಾರಾಮಿ ಪ್ರಿಮ್ರೋಸ್ ಹಿಲ್ ಪ್ರದೇಶದಲ್ಲಿ ನೆಲೆಗೊಂಡಿರುವ ಅಂಬೇಡ್ಕರ್ ಹೌಸ್ ಅನ್ನು ಮಹಾರಾಷ್ಟ್ರ ಸರ್ಕಾರವು ಖರೀದಿಸಿ ಮ್ಯೂಸಿಯಂ ಆಗಿ ಪರಿವರ್ತಿಸಿದೆ.
  • 1921-22ರ ಅವಧಿಯಲ್ಲಿ ಡಾ ಅಂಬೇಡ್ಕರ್ ಅವರು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ಉನ್ನತ ಶಿಕ್ಷಣವನ್ನು ಪಡೆಯುವಾಗ ಇಲ್ಲಿಯೇ ವಾಸಿಸುತ್ತಿದ್ದರು. ಇದೇ ಕಾರಣಕ್ಕೆ ಈ ಮನೆಗೆ ಮಹಾರಾಷ್ಟ್ರ ಸರ್ಕಾರ ಪುನರ್ಜೀವ ನೀಡಿದೆ.

ಭಾರತೀಯ ರಿಸರ್ವ್ ಬ್ಯಾಂಕ್ ರಚನೆಯಲ್ಲಿ ಡಾ. ಬಿಆರ್ ಅಂಬೇಡ್ಕರ್ ಪ್ರಮುಖ ಪಾತ್ರ ವಹಿಸಿದ್ದರು. ಹಿಲ್ಟನ್ ಯಂಗ್ ಆಯೋಗದ ಶಿಫಾರಸುಗಳ ಮೇರೆಗೆ 1935 ರಲ್ಲಿ ಆರ್‌ಬಿಐ ಅನ್ನು ಸ್ಥಾಪಿಸಲಾಯಿತು. ಖರ್ಬೂಜ (Muskmelon) ಹಣ್ಣಿನ ಪ್ರಯೋಜನಗಳು

ಈ ಶಿಫಾರಸುಗಳಲ್ಲಿ ಹೆಚ್ಚಿನವುಗಳನ್ನು ಡಾ. ಅಂಬೇಡ್ಕರ್ ಅವರು ತಮ್ಮ ಪುಸ್ತಕ, ದಿ ಪ್ರಾಬ್ಲಮ್ ಆಫ್ ದಿ ರುಪಾಯಿ ಅದರ ಮೂಲ ಮತ್ತು ಅದರ ಪರಿಹಾರವನ್ನು ಆಧರಿಸಿ ಸ್ಥಾಪಿಸಲಾಗಿದೆ.

ಬಾಬಾಸಾಹೇಬ್ ಅಂಬೇಡ್ಕರ್ ಅವರ ಮಹತ್ತರ ಕಾರ್ಯಗಳಿಂದಾಗಿ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ, ಅವುಗಳು ಈ ಕೆಳಗಿನಂತಿವೆ :

  • ಡಾ. ಭೀಮರಾವ್ ಅಂಬೇಡ್ಕರ್ ಅವರ ಸ್ಮಾರಕವನ್ನು ದೆಹಲಿಯ 26 ಅಲಿಪುರ ರಸ್ತೆಯಲ್ಲಿರುವ ಅವರ ಮನೆಯಲ್ಲಿ ಸ್ಥಾಪಿಸಲಾಗಿದೆ.
  • ಅಂಬೇಡ್ಕರ್ ಜಯಂತಿ ಸಾರ್ವಜನಿಕ ರಜೆ.
  • 1990 ರಲ್ಲಿ, ಅವರಿಗೆ ಮರಣೋತ್ತರವಾಗಿ ಭಾರತದ ಅತ್ಯುನ್ನತ ನಾಗರಿಕ ಗೌರವವಾದ ಭಾರತ ರತ್ನವನ್ನು ನೀಡಲಾಯಿತು.
  • ಆಂಧ್ರಪ್ರದೇಶದ ಹೈದರಾಬಾದ್‌ನ ಡಾ. ಅಂಬೇಡ್ಕರ್ ಮುಕ್ತ ವಿಶ್ವವಿದ್ಯಾಲಯ, ಬಿ.ಆರ್. ಅಂಬೇಡ್ಕರ್ ಬಿಹಾರ ವಿಶ್ವವಿದ್ಯಾಲಯ- ಮುಜಫರ್‌ಪುರ ಮುಂತಾದ ಹಲವಾರು ಸಾರ್ವಜನಿಕ ಸಂಸ್ಥೆಗಳಿಗೆ ಅವರ ಗೌರವಾರ್ಥವಾಗಿ ಅವರ ಹೆಸರನ್ನು ಇಡಲಾಗಿದೆ.
  • ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ನಾಗ್ಪುರದಲ್ಲಿದೆ, ಇದನ್ನು ಹಿಂದೆ ಸೋನೆಗಾಂವ್ ವಿಮಾನ ನಿಲ್ದಾಣ ಎಂದು ಕರೆಯಲಾಗುತ್ತಿತ್ತು.
  • ಭಾರತೀಯ ಸಂಸತ್ ಭವನದಲ್ಲಿ ಅಂಬೇಡ್ಕರ್ ಅವರ ದೊಡ್ಡ ಅಧಿಕೃತ ಭಾವಚಿತ್ರವನ್ನು ಪ್ರದರ್ಶಿಸಲಾಗಿದೆ.

ಸಂವಿಧಾನ ಶಿಲ್ಪಿಯ ಅಮೂಲ್ಯ ಸಂದೇಶಗಳು

  • ಬದುಕು ಸುದೀರ್ಘವಾಗಿರುವುದಕ್ಕಿಂತ ಶ್ರೇಷ್ಠವಾಗಿರಬೇಕು
  • ಮಹಿಳೆಯರು ಸಾಧಿಸಿದ ಪ್ರಗತಿಯ ಆಧಾರದಲ್ಲಿ ನಾನು ಸಮುದಾಯವೊಂದರ ಅಭಿವೃದ್ಧಿಯನ್ನು ಅಳೆಯುತ್ತೇನೆ
  • ಸಂವಿಧಾನವನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ಅರಿವಿಗೆ ಬಂದರೆ ಅದನ್ನು ಸುಡುವ ಮೊದಲಿಗ ನಾನಾಗಿರುತ್ತೇನೆ
  • ಸ್ವಾಭಿಮಾನದಿಂದ ಈ ಜಗತ್ತಿನಲ್ಲಿ ಬದುಕಲು ಕಲಿಯಬೇಕು. ಈ ಜಗತ್ತಿಗೆ ಏನನ್ನಾದರೂ ಕೊಡುಗೆ ನೀಡುವ ಮಹಾತ್ವಾಕಾಂಕ್ಷೆಯನ್ನು ನೀವು ಹೊಂದಬೇಕು.
  • ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವವನ್ನು ಕಲಿಸುವ ಧರ್ಮ ನನಗೆ ಇಷ್ಟ
  • ತಾತ್ಸಾರದ ಭಾವನೆ ಜನರ ಮೇಲೆ ಪರಿಣಾಮ ಬೀರುವ ಕೆಟ್ಟ ರೀತಿಯ ಕಾಯಿಲೆ
  • ಒಬ್ಬ ಮಹಾನ್ ವ್ಯಕ್ತಿ ಒಬ್ಬ ಪ್ರಸಿದ್ಧ ವ್ಯಕ್ತಿಗಿಂತ ಭಿನ್ನನಾಗಿರುತ್ತಾನೆ. ಆತ ಸಮಾಜದ ಸೇವಕನಾಗಲು ಸಿದ್ಧನಾಗಿರುತ್ತಾನೆ
  • ರಾಜಕೀಯ ಎಂಬ ದೇಹಕ್ಕೆ ಕಾನೂನು ಮತ್ತು ಸುವ್ಯವಸ್ಥೆಗಳೇ ಔಷಧ. ಈ ರಾಜಕೀಯ ದೇಹಕ್ಕೆ ಖಾಯಿಲೆ ಬಂದರೆ ಖಂಡಿತವಾಗಿಯೂ ಔಷಧಿ ನೀಡಬೇಕಾಗುತ್ತದೆ.

ಜೀವನಪರ್ಯಂತ ಸಮಾಜದ ಅಭ್ಯುದಯಕ್ಕಾಗಿ ಚಿಂತಿಸಿದ ಬಾಬಾ ಸಾಹೇಬರು ಡಿಸೆಂಬರ್ 6, 1956ರಂದು ದೇಹತ್ಯಾಗ ಮಾಡಿದರು.

Share This Article
Leave a comment