ಕೊರೊನಾ ಸೋಂಕು ಸೇರಿದಂತೆ ಹಲವು ಕಾರಣಗಳಿಂದ ಮೃತಪಟ್ಟ ಸಾರ್ವಜನಿಕ ಶಿಕ್ಷಣ ಇಲಾಖೆಯ ಶಿಕ್ಷಕರ ಅವಲಂಬಿತ 130 ಮಂದಿಗೆ ಅನುಕಂಪದ ನೌಕರಿಯ ಆದೇಶಗಳನ್ನು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ವಿತರಿಸಿದರು.
ಗುರುವಾರ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರ ಕಚೇರಿಯಲ್ಲಿ ಕೊರೊನಾದಿಂದ ಮೃತಪಟ್ಟ ಶಿಕ್ಷಕರ 130 ಮಂದಿಯ ಹತ್ತಿರದ ರಕ್ತ ಸಂಬಂಧಿಗಳಿಗೆ ಸಾಂಕೇತಿಕವಾಗಿ ಅನುಕಂಪದ ನೌಕರಿಯ ನೇಮಕಾತಿ ಪತ್ರಗಳನ್ನು ನೀಡಿದರು.
ಈ ವೇಳೆ ಮಾತನಾಡಿದ ಸಚಿವ ಸುರೇಶ್ ಕುಮಾರ್ , ತಮ್ಮ ಕುಟುಂಬದ ಹಿರಿಯರನ್ನು ಕಳೆದುಕೊಂಡು ನೋವಿನಲ್ಲಿರುವ ಕುಟುಂಬದ ಸದಸ್ಯರು ತಮಗೆ ನೀಡಿರುವ ಅನುಕಂಪದ ನೌಕರಿಯ ಆದೇಶಗಳನ್ನು ಪಡೆದುಕೊಂಡು ಸೇವೆಗೆ ಸೇರ್ಪಡೆಯಾಗಿ ತಮ್ಮ ಭವಿಷ್ಯವನ್ನು ಉಜ್ವಲಗೊಳಿಸಿಕೊಂಡು ಕುಟುಂಬವನ್ನು ಜವಾಬ್ದಾರಿಯಿಂದ ನಡೆಸುವಂತೆ ಕೋರಿದರು.