ವಿಧಾನಮಂಡಲದ ಅಧಿವೇಶನ ಮುಗಿದ ನಂತರ ಮಂಡ್ಯದಲ್ಲಿರುವ ಮೈಶುಗರ್ ಕಾರ್ಖಾನೆ ಪುನಶ್ಚೇತನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಸಭೆ ಕರೆದು ಸೂಕ್ತ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಸ್ಪಷ್ಟಪಡಿಸಿದರು.
ನಿಯಮ ೩೩೦ರಡಿ ವಿಧಾನಪರಿಷತ್ತಿನಲ್ಲಿ ಸದಸ್ಯರು ಮಂಗಳವಾರ ಪಾಂಡವಪುರ ಸಕ್ಕರೆ ಕಾರ್ಖಾನೆ ಕುರಿತ ವಿಷಯ ಪ್ರಸ್ತಾಪಿಸಿದರು. ಆಗ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಪರವಾಗಿ ಉತ್ತರ ನೀಡಿದ ಕೈಗಾರಿಕಾ ಸಚಿವರು, ಸಿಎಂ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಯಲ್ಲಿ ಆ ಭಾಗದ ಜನಪ್ರತಿನಿಧಿಗಳು ಮತ್ತು ರೈತರು ಇರುತ್ತಾರೆ. ಅಲ್ಲಿ ಅಗತ್ಯ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ತಾವು ರೈತರ ಅನುಕೂಲಕ್ಕಾಗಿ ಪಾಂಡವಪುರ ಸಕ್ಕರೆ ಕಾರ್ಖಾನೆಯನ್ನು ಭೋಗ್ಯಕ್ಕೆ ಪಡೆದು ಪುನರಾರಂಭ ಮಾಡಿದ್ದು. ಇದುವರೆಗೂ ನನಗೆ ಭೋಗ್ಯದ ದಾಖಲಾತಿಗಳು ಆಗಿಲ್ಲ. ನಂಬಿಕೆಯಿಂದ ಕಾರ್ಖಾನೆ ಮೇಲೆ ೫೦ಕೋಟಿರೂ. ವೆಚ್ಚ ಮಾಡಿದ್ದೇನೆ. ಇಲ್ಲೂ ನನಗೆ “ಕಹಿ’ ಅನುಭವವಾಗಿದೆ. ನಮ್ಮ ಮೇಲಿನ ಆಪಾದನೆಗಳು ನಿಂತಿಲ್ಲ ಎಂದು ನೋವು ತೋಡಿಕೊಂಡರು. ಈ ಕಾರ್ಖಾನೆ ಪ್ರಾರಂಭ ಮಾಡಿದಾಗ ಇದರಿಂದ ಬಂದ ಲಾಭವನ್ನು ಇಲ್ಲೇ ಬಳಸಿಕೊಳ್ಳಲು ನಿರ್ಧಾರ ಮಾಡಲಾಗಿತ್ತು ಎಂದು ಹೇಳಿದರು.