ಜಾತಿ ಬಹಳ ಮುಖ್ಯ ಎಂಬುದನ್ನು ಕಂದಾಯ ಸಚಿವ ಆರ್.ಅಶೋಕ್ ತಮ್ಮನ್ನೇ ಉದಾಹರಣೆಯನ್ನಾಗಿಸಿಕೊಂಡು ಸಮರ್ಥನೆ ಮಾಡಿಕೊಂಡಿದ್ದಾರೆ.
ಹಾಸನ ಜಿಲ್ಲಾ ಒಕ್ಕಲಿಗರ ಸಂಘದ ನೂತನ ಸಮುದಾಯ ಭವನದ ಶಿಲಾನ್ಯಾಸ ಸಮಾರಂಭದಲ್ಲಿ ಸಚಿವರು ಮಾತನಾಡಿದರು. ನಾನು ಅಶೋಕ ಎಂದು ಮಂತ್ರಿ ಮಾಡಿಲ್ಲ. ಈ ಸಮುದಾಯದಿಂದ ಬಂದಿದ್ದೇನೆ ಎಂದು ಸಚಿವನನ್ನಾಗಿ ಮಾಡಲಾಗಿದೆ ಎಂದರು.
ಈ ಸಮುದಾಯದಿಂದ ಬಂದದ್ದಕ್ಕೆ ನನಗೆ ಹೆಮ್ಮೆ ಇದೆ. ಈ ಸಮುದಾಯ ಬೆಳೆದರೆ ನಾವು ಬೆಳೆಯುತ್ತೇವೆ ಎಂದು ಹೇಳಿದರು. ಅಧಿಕಾರ ಎಂಬುದು ನೀರಿನ ಮೇಲಿನ ಗುಳ್ಳೆಯಂತೆ ಎಂದು ವೇದಾಂತಿಯಂತೆ ಮಾತನಾಡಿದ ಕಂದಾಯ ಸಚಿವರು, ಧರ್ಮಸಿಂಗ್ ಮುಖ್ಯಮಂತ್ರಿಯಾಗಿದ್ದಾಗ ಹಿಂದೆ 10 ಕಾರು, ಮುಂದೆ 10 ಕಾರಿತ್ತು. ಆದರೆ ಹೋಗುವಾಗ ಅವರು (ಧರ್ಮಸಿಂಗ್) ಒಬ್ಬರೇ ಹೋದರು. ಆದ್ದರಿಂದ ಅಧಿಕಾರ ಶಾಶ್ವತವಲ್ಲ. ಮಾಡಿರುವ ಕೆಲಸಗಳಷ್ಟೇ ಶಾಶ್ವತ. ಸಮಾಜಮುಖಿ ಕಾರ್ಯಗಳನ್ನು ಮಾಡಬೇಕೆಂದು ಅಭಿಪ್ರಾಯಪಟ್ಟರು.
ಆದಿಚುಂಚನಗಿರಿ ಮಠ ಹಲವು ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.