ದಿಕ್ಕು ತಪ್ಪುತ್ತಿರುವ ಸಮಾಜಕ್ಕೆ ಪುಸ್ತಕಗಳೇ ದಾರಿ ದೀಪ – ಸಿ ಡಿ ಕಿರಣ್

Team Newsnap
2 Min Read
Books are the light for a society that is going astray - CD Kiran ದಿಕ್ಕು ತಪ್ಪುತ್ತಿರುವ ಸಮಾಜಕ್ಕೆ ಪುಸ್ತಕಗಳೇ ದಾರಿ ದೀಪ - ಸಿ ಡಿ ಕಿರಣ್

ದಿಕ್ಕು ತಪ್ಪುತ್ತಿರುವ ಸಮಾಜಕ್ಕೆ ಪುಸ್ತಕಗಳಲ್ಲಿನ ವಿಚಾರಗಳನ್ನು, ಸಂದೇಶಗಳನ್ನು ತಲುಪಿಸುವ ಮೂಲಕ ಜ್ಞಾನ ಬಿತ್ತುವ ಕೆಲಸ ಮಾಡಬೇಕು ಎಂದು ವಿಶ್ವಮಾನವ ಹಕ್ಕುಗಳ ಸೇವಾ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷ ಸಿ.ಡಿ. ಕಿರಣ್ ಕರೆ ನೀಡಿದರು.

ನಗರದ ವಿವಿ ರಸ್ತೆಯ 2 ನೇ ಕ್ರಾಸ್ ನಲ್ಲಿರುವ ರೈತಬಂಧು ಮಂಡ್ಯ ಫೌಂಡೇಷನ್ ಕಚೇರಿಯಲ್ಲಿ ಪರಿಚಯ ಪ್ರಕಾಶನದ ನೇತೃತ್ವದಲ್ಲಿ ಇಂಡಿಯನ್ ಕಲ್ಚರಲ್ ಕಲೆಕ್ಟಿವ್, ಜಿಲ್ಲಾ ಯುವ ಬರಹಗಾರರ ಬಳಗ ಹಾಗೂ ಭೂಮಿಬೆಳಗು ಸಾಂಸ್ಕೃತಿಕ ಸಂಘದ ಸಹಯೋಗದೊಂದಿಗೆ ಹಮ್ಮಿಕೊಂಡಿರುವ ‘ಪರಿಚಯ ಪುಸ್ತಕ ಹಬ್ಬ’ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.6ನೇ ತರಗತಿ ವಿದ್ಯಾರ್ಥಿ ಹೃದಯಾಘಾತದಿಂದ ಸಾವು

ನಾವು ತಲೆ ಬಗ್ಗಿಸಿ ಪುಸ್ತಕ ಓದಲು ತೊಡಗಿದರೆ, ಅದು ನಮ್ಮನ್ನು ತಲೆ ಎತ್ತಿ ಬದುಕುವ ಹಾಗೆ ಮಾಡುತ್ತದೆ. ಈ ನಿಟ್ಟಿನಲ್ಲಿ ಯುವ ಜನರನ್ನು ಆರ್ಕಷಿಸಲು ಪುಸ್ತಕ ಹಬ್ಬಗಳು, ಮೇಳಗಳು, ಸಾಂಸ್ಕೃತಿಕ ಚಟುವಟಿಕೆಗಳು ಹೆಚ್ಚು ಹೆಚ್ಚು ನಡೆಯುವ ಅಗತ್ಯವಿದೆ ಎಂದರು.

ಜಿಲ್ಲಾ ಯುವ ಬರಹಗಾರರ ಬಳಗದ ಅಧ್ಯಕ್ಷ ಹಾಗೂ ಸಾಹಿತಿ ಟಿ. ಸತೀಶ್ ಜವರೇಗೌಡ ಮಾತನಾಡಿ, ಲೇಖಕನ ಅನುಭವದ ಜಗತ್ತನ್ನು ತೆರೆದಿಡುವ ಪುಸ್ತಕಗಳು ವಿಚಾರದ ಬೆಳಕನ್ನು ಬೀರುವ ದೀವಿಗೆಗಳು. ಇಂತಹ ಪುಸ್ತಕಗಳ ಓದುವ ಹವ್ಯಾಸದಿಂದ ಬಿಡುವಿನ, ಏಕಾಂತದ ಸಮಯದ ಸದ್ಬಳಕೆಗೆ ಸಹಕಾರಿಯಾಗುತ್ತದೆ ಎಂದರು.

ಬುದ್ಧಿ ಮತ್ತು ಭಾವದ ವಿಕಾಸಕ್ಕೆ ಪುಸ್ತಕಗಳ ಒಡನಾಟದ ಅಗತ್ಯವಿದೆ. ವೈಚಾರಿಕತೆಯ ಮನೋಭಾವ ಬೆಳೆಸುವ ಓದಿನ ದಾರಿಗೆ ಜನತೆ ಮರಳಲು ಸೂಕ್ತ ಕಾಲವಿದು. ಮೊದಲು ಟಿವಿ, ಸಿನಿಮಾ ನಮ್ಮ ಬದುಕನ್ನು ಆಕ್ರಮಿಸಿಕೊಂಡಿದ್ದವು. ಈಗ ಸಾಮಾಜಿಕ ಜಾಲತಾಣಗಳು ಆಕ್ರಮಿಸಿಕೊಂಡಿವೆ. ಇದರಿಂದಾಗಿ ಓದುವ ಹವ್ಯಾಸ ಕ್ಷೀಣಿಸಿದೆ ಎಂದು ವಿಷಾದಿಸಿದರು.

ಕನ್ನಡದಲ್ಲಿ ಲೇಖಕರು ಬರೆದ ಅತ್ಯುತ್ತಮ ಪುಸ್ತಕಗಳನ್ನು ಆಸಕ್ತ ಓದಗರಿಗೆ ವ್ಯವಸ್ಥಿತವಾಗಿ ತಲುಪಿಸುವ ಮಾರಾಟದ ಜಾಲವಿಲ್ಲ. ಈ ಕೊರತೆ ತುಂಬುವ ಸಲುವಾಗಿ ಮೂರು ದಿನಗಳ ಕಾಲ ಪರಿಚಯ ಪ್ರಕಾಶನ ಪುಸ್ತಕ ಹಬ್ಬ ಆಯೋಜಿಸಿದೆ. ಜಿಲ್ಲೆಯ ಸಾಹಿತ್ಯಾಸಕ್ತರು, ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಪರಿಸರ ಸಂಸ್ಥೆಯ ಅಧ್ಯಕ್ಷ ಮಂಗಲ . ಯೋಗೇಶ್, ಕರವೇ ವೀರ ಕನ್ನಡಿಗರ ಘರ್ಜನೆ ಜಿಲ್ಲಾಧ್ಯಕ್ಷ ಎಂ.ಸಿ. ನವೀನ್, ಪರಿಚಯ ಪುಸ್ತಕ ಪ್ರಕಾಶನದ ಸಂಸ್ಥಾಪಕ ಎಂ.ಎನ್. ಶಿವಕುಮಾರ್ ಆರಾಧ್ಯ, ಗಾಯಕ ಹಾಗೂ ರಂಗ ನಟ ಎಸ್.ಪಿ. ನಾರಾಯಣಸ್ವಾಮಿ ಉಪಸ್ಥಿತರಿದ್ದರು.

ಈ ವಿಶಿಷ್ಡ ಪುಸ್ತಕ ಹಬ್ಬದ ಪ್ರದರ್ಶನ ಮತ್ತು ಮಾರಾಟ ಇಂದಿನಿಂದ ಜ. 9 ರವರೆಗೆ ಮೂರು ದಿನಗಳ ಕಾಲ ಬೆಳಗ್ಗೆ 9 ಗಂಟೆಯಿಂದ ರಾತ್ರಿ 9 ಗಂಟೆಯ ವರೆಗೆ ನಡೆಯಲಿದೆ. ಸಾಹಿತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ತಮ್ಮ ನೆಚ್ಚಿನ ಪುಸ್ತಕಗಳನ್ನು ಖರೀದಿ ಮಾಡುವ ಮೂಲಕ ‘ಪುಸ್ತಕ ಹಬ್ಬ’ವನ್ನು ಯಶಸ್ವಿಯಾಗಿ ಮಾಡಬೇಕೆಂದು ಅವರು ಕೋರಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 9916894417 ಸಂಪರ್ಕಿಸಬಹುದು.

Share This Article
Leave a comment