ಚೆನ್ನೈನ ಪೋಲೀಸ್ ನಿಯಂತ್ರಣ ಕೊಠಡಿಗೆ ತಮಿಳುನಾಡಿನ ನಟ ಧನುಷ್ ಹಾಗೂ ಡಿಎಂಕೆ ಮುಖಂಡ ಹಾಗೂ ನಟ ವಿಜಯಕಾಂತ್ ಮನೆಯಲ್ಲಿ ಬಾಂಬ್ಗಳನ್ನು ಇಡಲಾಗಿದೆ ಎಂದು ಹುಸಿ ಕರೆಗಳು ಬಂದಿರುವ ಪ್ರಕರಣ ಬೆಳಕಿಗೆ ಬಂದಿದೆ.
ಕರೆಗಳು ಬಂದ ನಂತರ ಕಾರ್ಯ ಪ್ರವೃತ್ತರಾದ ಪೋಲೀಸರು ಧನುಷ್ ಹಾಗೂ ವಿಜಯಕಾಂತ್ ಅವರ ಮನೆಗಳನ್ನು ಬಾಂಬ್ ಪತ್ತೆ ದಳದ ಅಧಿಕಾರಿಗಳ ಮೂಲಕ ಶೋಧಿಸಿದ್ದಾರೆ. ಶೋಧನೆಯ ವೇಳೆ ಯಾವುದೇ ಬಾಂಬ್ ಪತ್ತೆಯಾಗದ ಹಿನ್ನಲೆಯಲ್ಲಿ ಈ ಕರೆಗಳು ಹುಸಿ ಎಂದು ಖಚಿತವಾಗಿದೆ.
ಹುಸಿ ಕರೆಗಳನ್ನು ಮಾಡಿದ ದುಷ್ಕರ್ಮಿಗಳಿಗಾಗಿ ಪೋಲೀಸರು ಪತ್ತೆ ಕಾರ್ಯಾಚಾರಣೆ ಮಾಡುತ್ತಿದ್ದಾರೆ. ಪ್ರಾಥಮಿಕ ತನಿಖೆಯ ವೇಳೆ ಎರಡೂ ಕರೆಗಳನ್ನು ಒಬ್ಬನೇ ವ್ಯಕ್ತಿ ಮಾಡಿದ್ದಾನೆ ಎಂದು ತಿಳಿದು ಬಂದಿದೆ.
ಈ ಹಿಂದೆ ತಮಿಳುನಾಡಿನ ಮತ್ತೊಬ್ಬ ನಟ ಸೂರ್ಯ ಅವರ ಮನೆಯಲ್ಲೂ ಬಾಂಬ್ ಇಡಲಾಗಿದೆ ಎಂದು ಹುಸಿ ಕರೆ ಬಂದಿತ್ತು. ಹಾಗಾಗಿ ಈ ಪ್ರಕರಣವನ್ನು ಪೋಲೀಸರು ಗಂಭಿರವಾಗಿ ಪರಿಗಣಿಸಿದ್ದಾರೆ.