ಯುವತಿಯ ವೇಷ ಹಾಕಿ ಎಂಜನಿಯರ್ ಗೆ ಬ್ಲ್ಯಾಕ್ ಮೇಲ್ : ಮರ್ಯಾದೆಗೆ ಅಂಜಿ ಆತ್ಮಹತ್ಯೆ

Team Newsnap
1 Min Read

ಯುವತಿಯ ವೇಷ ಹಾಕಿ ಬ್ಲ್ಯಾಕ್ ಮೇಲ್ ಮಾಡಿದ ಕಾರಣಕ್ಕಾಗಿ ಮರ್ಯಾದೆಗೆ ಅಂಜಿ ಎಂಜಿನಿಯರ್‌ರೊಬ್ಬರು  ಜ.18ರಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನ ಮಲ್ಲೇಶ್ವರಂ ರೈಲು ನಿಲ್ದಾಣದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ಮಲ್ಲೇಶ್ವರಂ ರೈಲ್ವೇ ಹಳಿ ಮೇಲೆ ತಲೆ ಕೊಟ್ಟು ಎಂಜಿನಿಯರ್ ರೋಹಿತ್ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಹುಡುಗಿ ವೇಷದಲ್ಲಿ ವಂಚಕರು ರೋಹಿತ್‍ಗೆ ಪರಿಚಯವಾಗಿದ್ದರು. ಬಳಿಕ ವಂಚಕರು ಆತನನ್ನು ಬುಟ್ಟಿಗೆ ಹಾಕಿಕೊಂಡು ನಗ್ನ ಫೋಟೊ ತೆಗೆಸಿ ಇದನ್ನು ವೀಡಿಯೋ ಮಾಡಿಕೊಂಡು ಹಣಕ್ಕಾಗಿ ಅವರಿಗೆ ಬ್ಲಾಕ್ ಮೇಲ್ ಮಾಡುತ್ತಿದ್ದರು.

ರೋಹಿತ್ ಈ ವಂಚಕರ ಜಾಲಕ್ಕೆ ಸಿಲುಕಿ 3 ಬಾರಿ ಹಣ ನೀಡಿದ್ದರು. ಆದರೂ ಸಹ ಆರೋಪಿಗಳು ಮತ್ತಷ್ಟು ಹಣಕ್ಕಾಗಿ ಅವರನ್ನು ಬ್ಲಾಕ್ ಮೇಲ್ ಮಾಡುತ್ತಿದ್ದರು.

ಈ ವೇಳೆ ಅವರು ಆರೋಪಿಗಳಿಗೆ ನೇರವಾಗಿ ಭೇಟಿಯಾಗಿ ನಾನು ನಿಮ್ಮ ಜೊತೆ ಮಾತನಾಡಬೇಕು ಅಂತ ಅಂಗಲಾಚಿದ್ದರು. ಆದರೂ ಆರೋಪಿಗಳು ಅವರ ಮಾತನ್ನು ಧಿಕ್ಕರಸಿ ಹಣ ಕೊಡದಿದ್ದರೆ ವೀಡಿಯೋ ಹೊರಗಡೆ ಬಿಡೋದಾಗಿ ಬೆದರಿಕೆ ಹಾಕಿದ್ದರು.

ಕೊನೆಗೆ ರೋಹಿತ್ 2 ಪುಟಗಳ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೃತರು ರೈಲ್ವೇ ಪೊಲೀಸ್ ಎಎಸ್‍ಐ ಗುರುಮೂರ್ತಿಯವರ ಪುತ್ರನಾಗಿದ್ದಾರೆ. ಈ ಹಿಂದೆ ಅವರ ತಂದೆ ಕೋವಿಡ್‍ನಿಂದ ನಿಧನರಾಗಿದ್ದಾರೆ, ಇದೀಗ ಮಗನು ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೋಹಿತ್ ಎಂಜಿನಿಯರಿಂಗ್ ಮುಗಿಸಿ ಕೆಲಸಕ್ಕೆ ಸೇರಲು ಹುಡುಕಾಟ ನಡೆಸುತ್ತಿದ್ದರು.

Share This Article
Leave a comment