ಸಿದ್ದು ಗೆಲುವಿಗೆ ಬಿಜೆಪಿ ಸಿದ್ದ ಸೂತ್ರ – ಎಚ್.ಡಿ.ಕುಮಾರಸ್ವಾಮಿ

Team Newsnap
1 Min Read

ಮೈಸೂರು: ಜಿಲ್ಲೆಯ ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್- ಬಿಜೆಪಿ ಮೈತ್ರಿ ಮಾಡಿಕೊಂಡಿವೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದರು.


ಪಿರಿಯಾಪಟ್ಟಣ ತಾಲ್ಲೂಕಿನ ಕಂಪಲಾಪುರದಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಅಭ್ಯರ್ಥಿ ಸಿದ್ದರಾಮಯ್ಯ ಅವರನ್ನು ಗೆಲ್ಲಿಸಲು ಬಿಜೆಪಿ ಅನುಕೂಲ ಮಾಡಿಕೊಡುತ್ತಿದೆ.

ಬಿಜೆಪಿಯು ಅಲ್ಲಿ ಸಮರ್ಥ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತಿಲ್ಲ ಎಂದು ದೂರಿದರು.
ಜೆಡಿಎಸ್ ಯಾರೊಂದಿಗೂ ಒಳಒಪ್ಪಂದ ಮಾಡಿಕೊಂಡಿಲ್ಲ. 123 ಸ್ಥಾನ ಗೆಲ್ಲಲು ಹೋರಾಟ ಮಾಡುತ್ತಿದ್ದೇವೆ. ವೈ.ಎಸ್.ವಿ. ದತ್ತ ನಮ್ಮ ಪಕ್ಷ ಬಿಟ್ಟು ಹೋಗಿದ್ದಾರೆ.

ಅವರಿಗೆ ಏಕೆ ಕಾಂಗ್ರೆಸ್ ಟಿಕೆಟ್ ತಪ್ಪಿತು ಎಂದು ಗೊತ್ತಿಲ್ಲ. ಆ ಬಗ್ಗೆ ನಾನು ಮಾತನಾಡುವುದಿಲ್ಲ ಎಂದರು. ಬಿಜೆಪಿಯು ಪ್ರಚಾರಕ್ಕೆ ಸುದೀಪ್ ಹಾಗೂ ಪವನ್ ಕಲ್ಯಾಣ್ ಕರೆತರುತ್ತಿರುವ ವಿಚಾರದ ಲೇವಡಿ ಮಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯಂತಹ ಸ್ಟಾರ್ ನಟರ ಕೈಯಲ್ಲೇ ಜನರನ್ನು ಸೆಳೆಯಲು ಆಗುತ್ತಿಲ್ಲ. ಹೀಗಿರುವಾಗ ಸ್ಟಾರ್ ನಟರು ಬಂದು ಏನು ಮಾಡುತ್ತಾರೆ ನೋಡೋಣ ಎಂದು ವ್ಯಂಗ್ಯವಾಡಿದರು.


ಹಾಸನ ಟಿಕೆಟ್ ಪಕ್ಷದ ಕಾರ್ಯಕರ್ತನಿಗೇ ಕೊಡುವುದು ಎಂದು ಹೇಳಿದ್ದೇನೆ. ಹಾಗೆಯೇ ನಿರ್ಣಯ ಕೈಗೊಳ್ಳಲಾಗುವುದು. ಕುಟುಂಬದಿಂದ ಯಾರೂ ಸ್ಪರ್ಧಿಸುವುದಿಲ್ಲ.

ಭವಾನಿ ರೇವಣ್ಣಗೆ ಟಿಕೆಟ್ ಕೊಟ್ಟರೆ ಅನಿತಾ ಕುಮಾರಸ್ವಾಮಿ ಸ್ಪರ್ಧಿಸುತ್ತಾರೆ ಎನ್ನಲಾಗುತ್ತಿದೆ ಎಂಬ ಪ್ರಶ್ನೆಗೆ, ಅನಿತಾ ಕುಮಾರಸ್ವಾಮಿ ಸ್ಪರ್ಧಿಸುವ ಪ್ರಶ್ನೆ ಇಲ್ಲ. ಎರಡು ಬಾರಿ ಪಕ್ಷದಲ್ಲಿ ಅಭ್ಯರ್ಥಿ ಇಲ್ಲದಿದ್ದರಿಂದ ಅನಿವಾರ್ಯವಾಗಿ ಸ್ಪರ್ಧಿಸಿದ್ದರು. ಮುಂದೆ ಯಾವುದೇ ಕಾರಣಕ್ಕೂ ಅವರು ಅಭ್ಯರ್ಥಿಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.ಇದನ್ನು ಓದಿ –ಜೆಡಿಎಸ್ ಪಟ್ಟಿ ನಾಳೆ ಅಂತಿಮ : ಹಾಸನ ಟಿಕೆಟ್ ಇನ್ನೂ ಗೊಂದಲ

Share This Article
Leave a comment