ಮೂವರಿಗೆ ಮಾತ್ರ ಮಂತ್ರಿ ಭಾಗ್ಯ – ಉಳಿದ ವಲಸಿಗರಿಗೆ‌ ಕೊಕ್ :ಆರ್ ಎಸ್ ಎಸ್ ಕಠಿಣ ನಿರ್ಧಾರ

Newsnap Team
1 Min Read

ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಮೈತ್ರಿ ಸರ್ಕಾರ ಪತನಗೊಳಿಸಿ ಬಿಜೆಪಿ ಸೇರಿದ್ದ 17 ಮಂದಿ ಬಾಂಬೆ ಸಹೋದರರು ಆರ್‌ಎಸ್‌ಎಸ್‌ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಮೂವರನ್ನು ಹೊರತು ಪಡಿಸಿ ಉಳಿದವರಿಗೆ ಮಂತ್ರಿ ಸ್ಥಾನದಿಂದ ಕೊಕ್ ನೀಡುವ ನಿರ್ಧಾರವನ್ನು ಆರ್‌ಎಸ್ ಎಸ್ ಬೈಠಕ್ ನಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.

ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷವನ್ನು ತೊರೆದು ಬಿಜೆಪಿ ಸೇರಿದ್ದ ಶಾಸಕರ ಕಾರ್ಯವೈಖರಿ ಆರ್‌ಎಸ್‌ಎಸ್‌ ನಾಯಕರಿಗೆ ಸಮಾಧಾನ ತಂದಿಲ್ಲ ಎಂಬುದು ಒಟ್ಟಾರೆ ಅಭಿಪ್ರಾಯ.

ಬಾಂಬೆ ಬ್ರದರ್ಸ್‌ ಪಕ್ಷ ಸೇರುವ ಮೊದಲು ಹೇಳಿದ ಮಾತನ್ನು ತಪ್ಪಿದ್ದಾರೆ. ಅಧಿಕಾರವನ್ನು ಪಡೆದು ಎರಡು ವರ್ಷಗಳೇ ಕಳೆಯುತ್ತಾ ಬಂದರೂ ಕೂಡ ಡಾ.ಸುಧಾಕರ್‌, ಎಸ್.ಟಿ.ಸೋಮಶೇಖರ್‌, ಬೈರತಿ ಬಸವರಾಜ್‌ ಅವರನ್ನು ಹೊರತು ಪಡಿಸಿ ಉಳಿದ ಯಾವುದೇ ವಲಸೆ ಶಾಸಕರು ಕೂಡ ಆರ್‌ಎಸ್‌ಎಸ್‌ ನಾಯಕರನ್ನು ಭೇಟಿಯಾಗಿಲ್ಲ. ಅಲ್ಲದೇ ಅವರ ಕಾರ್ಯವೈಖರಿಯಿಂದ ಪಕ್ಷಕ್ಕೆ ಲಾಭವಾಗಿಲ್ಲ. ಹೀಗಾಗಿ ಈ ಮೂವರನ್ನು ಹೊರತು ಪಡಿಸಿ ಉಳಿದ ಶಾಸಕರಿಗೆ ಸಚಿವ ಸಂಪುಟದಲ್ಲಿ ಸ್ಥಾನವನ್ನು ನೀಡಬೇಡಿ. ಬದಲಾಗಿ ನಿಗಮ ಮಂಡಳಿ ಸ್ಥಾನವನ್ನು ನೀಡಬೇಕು ಎಂದು ನಿರ್ಧಾರ ಕೈಗೊಳ್ಳಲಾಗಿದೆ.

ಸಚಿವ ಸಂಪುಟದಲ್ಲಿ ಬಿಜೆಪಿಯ ಹಿರಿಯ ಶಾಸಕರಾದ ಆರ್.ಅಶೋಕ್‌, ಕಾರಜೋಳ, ಅಶ್ವಥ್‌ ನಾರಾಯಣ, ಅರವಿಂದ ಬೆಲ್ಲದ್‌ ಅವರಿಗೆ ಸಚಿವ ಸ್ಥಾನವನ್ನು ನೀಡಬೇಕು. ಉಳಿದವರನ್ನು ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವಂತೆ ಸೂಚಿಸಬೇಕೆಂಬ ನಿರ್ಧಾರ ಕೈಗೊಳ್ಳಲಾಗಿದೆ.

ಆರ್‌ಎಸ್‌ಎಸ್‌ ಮುನಿಸು ಹಲವು ಹಾಲಿ ಸಚಿವರಿಗೆ ಮುಂದಿನ ಸಂಪುಟದಲ್ಲಿ ಕೋಕ್‌ ಸಿಗೋದು ಖಚಿತ.

Share This Article
Leave a comment