ಸ್ನೇಹವೆನಲು ಹಾಸ್ಯವೇ?(ಬ್ಯಾಂಕರ್ಸ್ ಡೈರಿ)

Team Newsnap
4 Min Read

ಅಂದು ತುಂತುರು ಮಳೆ. ಕೋವಿಡ್ ತೀವ್ರತೆ ಮುಗಿದ ಸಮಯ. ಬಹುತೇಕರು ಮಾಸ್ಕನ್ನು ಬ್ಯಾಗಿನಲ್ಲೋ, ಪರ್ಸಿನಲ್ಲೋ, ಜೇಬಿನಲ್ಲೋ ಇಟ್ಟುಕೊಂಡು ಓಡಾಡುತ್ತಿದ್ದ ಕಾಲ. ಬ್ಯಾಂಕಿನಲ್ಲಿ ನಾನು ಕುಳಿತಲ್ಲಿಂದ ಗಾಜಿನ ಕಿಟಕಿಯಿಂದ ತುಂತುರು ಮಳೆಯಾಗುವುದು ಕಾಣುವುದಿಲ್ಲ. ಜೋರಾಗಿ ಬಂದರೆ ಮಾತ್ರ ಕಾಣುತ್ತದೆ. ಅಂಥ ಹೊತ್ತಿನಲ್ಲಿ ಶಿವರಾಜು ಅವರು (ಹೆಸರು ಬದಲಿಸಲಾಗಿದೆ) ಎಫ್.ಡಿ ರಿನ್ಯೂ ಮಾಡಿಸೋಕೆ ಬ್ಯಾಂಕಿಗೆ ಬಂದರು. ಅವರ ತುಸು ನೆನೆದ ಶರ್ಟಿನಿಂದ ತುಂತುರು ಬೀಳುತ್ತಿರುವುದು ತಿಳಿಯಿತು. ಅವರು ನಮ್ಮ ಪಕ್ಕದ ಕಾಲೇಜಿನ ನಿವೃತ್ತ ಪ್ರಾಧ್ಯಾಪಕರು. ಅವರ ಕೆಲಸ ಮುಗಿಯುವ ಹೊತ್ತಿಗೆ ನಮ್ಮ ಮತ್ತೊಬ್ಬ ಗ್ರಾಹಕರಾದ ಲಿಂಗೇಗೌಡರು (ಹೆಸರು ಬದಲಿಸಲಾಗಿದೆ) ಬಂದು ಪೆನ್ಷನ್ನಿನ ವಿವರ ಕೇಳಿದರು. ಶಿವರಾಜು ಅವರು ‘ಮೇಡಮ್ ನನ್ನ ಕೆಲಸ ಆಯಿತಲ್ಲಾ ಹೊರಡಬಹುದಾ?’ ಎಂದು ಕೇಳಿ ತಿರುಗಿದರು. ಲಿಂಗೇಗೌಡರನ್ನು ಕಂಡೊಡನೇ ಶಿವರಾಜು ಆವರ ಕಣ್ಣು ಫಳಕ್ಕೆಂದಿತು. ‘ಲೋ ಲಿಂಗೂ ಯಾವಾಗ್ ಬಂದ್ಯೋ? ನೋಡ್ಲೇ ಇಲ್ಲ ನಿನ್ನಾ. . ಬಾರೋ ಕೂತ್ಕೋ’ ಎಂದು ತಮ್ಮ ಪಕ್ಕದ ಕುರ್ಚಿಯನ್ನು ತೋರಿಸಿದರು. ಅದೇ ಹೊತ್ತಿಗೆ ಭಾಗ್ಯರಾಜು (ಹೆಸರು ಬದಲಿಸಲಾಗಿದೆ) ಕೂಡ ಬಂದರು. ಭಾಗ್ಯರಾಜು ಅವರು ಕೂಡ ಆ ಇಬ್ಬರ ಸಹೋದ್ಯೋಗಿಯಾಗಿದ್ದವರೇ. ಅವರಿಬ್ಬರೂ ಭಾಗ್ಯರಾಜುವನ್ನು ಹೆಚ್ಚುಕಡಿಮೆ ಕುಳಿತಲ್ಲಿಂದಲೇ ಆಲಂಗಿಸಿಬಿಟ್ಟರು.


ಶುರುವಾಯಿತು ಗೆಳೆಯರ ಮಾತು. ಅವರ ಮಾತುಕತೆ ಕೇಳಿ ಕೋವಿಡ್ ಕಾರಣದಿಂದಾಗಿ  ಬಹುಶಃ ಎರಡು ವರ್ಷಗಳಿಂದ ಭೇಟಿಯಾಗಿಲ್ಲ ಎಂದು ತಿಳಿಯಿತು. ಅವರ ಮಾತಿನ ನಡುವೆ ಪರಸ್ಥಳದ ಮತ್ತೊಬ್ಬ ಸಹೋದ್ಯೋಗಿಯೂ ಬಂದುಹೋದರು. ‘ಅದೇ ಆ ರೆಡ್ಡಿ ಇದ್ನಲ್ಲಾ ಅವ್ನು ಮೊನ್ನೆ ಸಿಕ್ಕಿದ್ದ. ಅವನಿಗೂ ರಿಟೈರ್ ಆಯ್ತಂತೆ. ಪೆನ್ಷನ್ ಪೇಪರುಗಳಿಗೆ ಸಹಿ ಹಾಕಿಸೋಕೆ ಅಂತ ಕಾಲೇಜಿಗೆ ಬಂದಿದ್ನಂತೆ. ನಿಮ್ಮನ್ನೆಲ್ಲಾ ಕೇಳಿದ’ ಎಂದರು ಭಾಗ್ಯರಾಜು. ‘ಅವ್ನು ನಮ್ ಜೂನಿಯರ್ ಅಲ್ವಾ? ನಾವು ರಿಟೈರ್ ಆಗಿ ಆಗಲೇ ಹತ್ತು ವರ್ಷ ಆಗಿದೆ. ಅವ್ನು ಈಗ ಅಷ್ಟೇ. ಎಲ್ಲರಿಗೂ ಕಾಲ ಬಂದೇ ಬರುತ್ತೆ’ ಎಂದರು ಲಿಂಗೇಗೌಡರು. ಶಿವರಾಜು ಅವರಂತೂ ಆ ರೆಡ್ಡಿಯ ಆರಂಭದ ದಿನಗಳನ್ನು ನೆನದು ‘ಅವನಿಗೆ ಏಕವಚನ ಬಹುವಚನ ಗೊತ್ತಾಗುತ್ತಾ ಇರಲಿಲ್ಲ. ಸುಮ್ನೆ ರಿಸ್ಕ್ ಯಾಕೆ ಅಂತ ಎಲ್ಲ ಲಿಂಗದವರಿಗೂ ಬರ್ತಾರೆ ಹೋಗ್ತಾರೆ ಅಂತಿದ್ರು. ಒಂದಿನ ಅವ್ನು ಕಾಲೇಜಿನ ಬಸ್ಸು ಬರ್ತಾ ಇರುವಾಗ ನೋಡಿ ಬಸ್ ಬರ್ತಾರೆ ಅಂದ. ಸುತ್ತ ಇದ್ದ ಜನ ಮತ್ತು ಹುಡುಗರು ನಕ್ಕರು.. ಆದರೆ ರೆಡ್ಡಿ ಮಾತ್ರ ‘ನಾ ಮಾತಾಡಿದ್ದೇ ಸರಿ. ಬಸ್‍ಗೆ ಬರ್ತಾರೆ ಹೋಗ್ತಾರೆ ಅಂದ್ರೆ ಬಸ್ಸು ಬೇಜಾರು ಮಾಡಿಕೊಳ್ಳಲ್ಲ. ಆದ್ರೆ ಮನುಷ್ಯರು ಬರ್ತಾನೆ ಹೋಗ್ತಾನೆ ಅಂದ್ರೆ ಬೇಜಾರು ಮಾಡ್ಕೋತಾರೆ. ಅದ್ರೆ ಎಲ್ರಿಗೂ ಬಹುವಚನ ಬಳಸ್ತೀನಿ’ ಅಂದಿದ್ದ’ ಎಂದು ನೆನಪಿಸಿಕೊಂಡರು. ಎಲ್ಲರೂ ರೆಡ್ಡಿಯ ಮಾತನ್ನು ನೆನೆನೆನೆದು ನಗುತ್ತಿದ್ದರು. ದತ್ತಣ್ಣ, ಅವಿನಾಶ್, ಪತ್ರಕರ್ತ ಎಚ್ ಆರ್ ಶ್ರೀಶಾ ಸೇರಿ 67 ಮಂದಿಗೆ ರಾಜ್ಯೋತ್ಸವ ಪ್ರಶಸ್ತಿ ,ನವೆಂಬರ್ 1ರಂದು ಸಾಧಕರಿಗೆ ಸನ್ಮಾನ
ಇದಕ್ಕಿದ್ದ ಹಾಗೆ ಶಿವರಾಜು ಅವರು ಮುಖವನ್ನು ಸುಮ್ಮಸುಮ್ಮನೆ ಸಿಟ್ಟು ಬಂದವರಂತೆ ಮಾಡಿಕೊಂಡು ‘ರೆಡ್ಡಿ ಕಥೆ ಬಿಡ್ರೋ. ಯಾಕ್ರೋ ನಂಗೆ ಹುಷಾರಿಲ್ಲದೆ ಆಸ್ಪತ್ರೆಗೆ ಅಡ್ಮಿಟ್ ಆದಾಗ ಬಂದು ನೋಡಲಿಲ್ಲ.? ಆಪಾಟಿ ಘನಂದಾರಿ ಕೆಲ್ಸ ಏನಿತ್ರೋ ನಿಮ್ಗೆ?’ ಎಂದು ಆರೋಪ ಮಾಡಿದರು. ಅದಕ್ಕೆ ಲಿಂಗೇಗೌಡರು ‘ನಿಜಾ ಗೊತ್ತಾಗ್ಲಿಲ್ಲ ಕಣೋ ಶಿವೂ. ಗೊತ್ತಿದ್ದ್ರೆ ಬರ್ತಾ ಇರಲಿಲ್ವಾ? ಸುಮ್ನೆ ಯಾಕೋ ಆರೋಪ ಮಾಡ್ತೀಯಾ?’ ಎಂದು ಹುಸಿಮುನಿಸು ತೋರಿದರು. ಭಾಗ್ಯರಾಜು ಅವರು ‘ಕೋವಿಡ್ ಸಮಯ ಅಲ್ವೇನೋ ನಾನು ಬೆಂಗಳೂರಿಗೆ ಮಗನ ಮನೆಗೆ ಹೋಗಿ ಸಿಕ್ಕೊಂಡವ್ನು ಈಗ್ಗೆ ಒಂದು ತಿಂಗಳ ಹಿಂದೆ ಬಂದಿದ್ದೋ’ ಎಂದರು.
ಶಿವರಾಜು ಅವರು ‘ಹೌದೋ ಗೊತ್ತಾಗಲ್ಲ್ವೋ . ಹೀಗೇ ನಾ ಸತ್ತಾಗಲೂ ಗೊತ್ತಾಗುತ್ತೋ ಇಲ್ವೋ’ ಎಂದು ಜೋರಾಗಿ ನಕ್ಕರು.  ಉಳಿದಿಬ್ಬರು ಗೆಳೆಯರ ಮುಖದಲ್ಲಿ ಆತಂಕದ ಗೆರೆಯೂ ಕಾಣಲಿಲ್ಲ. ಅತ್ಯಂತ ಸಹಜದ ಮಾತದು ಎನ್ನುವಂತೆ  ಲಿಂಗೇಗೌಡರು ‘ಏ…. ಗೊತ್ತಾಗುತ್ತೆ ಬಿಡೋ. ನಾವೆಲ್ಲ ಇದೇ ಕಾಲೇಜಿನಲ್ಲಿ ಕೆಲಸ ಮಾಡಿದವರಲ್ವಾ. ನೀ ಸತ್ರೆ ಕಾಲೇಜಿನ ಮುಂದೆ ಅರ್ಧ ಗಂಟೆಯೊಳಗೆ ಫ್ಲೆಕ್ಸ್ ಹಾಕ್ತಾರೆ. ನಾನು ಇಲ್ಲೇ ವಾಕ್ ಮಾಡ್ತೀನಲ್ಲಾ ಗೊತ್ತಾಗುತ್ತೆ. ಅದನ್ನೇ ನೋಡಿ ನಿನ್ ಮನೆಗೆ ಬರ್ತೀನಿ’ ಎಂದು ನಕ್ಕರು.
ಭಾಗ್ಯರಾಜು ಅವರು ‘ಲೋ ಶಿವೂ ವಾಟ್ಸಪ್ ಗ್ರೂಪಿನಲ್ಲಿ ಹೇಗೂ ಕೂಡಲೇ ಗೊತ್ತಾಗುತ್ತಲ್ಲಾ.  ನಾನಂತೂ ಹೆಣ ಹೊರೋಕೇ ಬರ್ತೀನೋ. ಸ್ನೇಹ ಅಂದ್ರೆ ಹುಡುಗಾಟಾನಾ? ಎಂದು ಜೋರುದನಿಯಲ್ಲಿ ನಕ್ಕರು. ಮನೆಯಲ್ಲಿ ಭಗತ್ ಸಿಂಗ್ ಪಾತ್ರದ ಅಭ್ಯಾಸ – ನೇಣಿಗೆ ಕೊರಳು, ಬಾಲಕ ಸಾವು – ಚಿತ್ರದುರ್ಗದಲ್ಲಿ ದುರಂತ

ಮೊದಲ ಬಾರಿಗೆ ನನಗೆ ವಯೋಸಹಜ ಸಾವನ್ನು ಇಷ್ಟು ಸಾಮಾನ್ಯವಾಗಿ ತೆಗೆದುಕೊಳ್ಳಬಹುದೆಂಬ ಅರಿವಾಯಿತು. ಮತ್ತು ಸ್ನೇಹದ ಗಾಢತೆಯ ಪರಿಚಯವಾಯಿತು. ಅಲ್ಲಿ  ಗೆಳೆಯರ ನಡುವೆ ನಗು, ಪ್ರೀತಿ, ಆತ್ಮೀಯತೆ  ಬಿಟ್ಟು ಬೇರೇನೂ ಕಾಣುತ್ತಿರಲಿಲ್ಲ.
ಇಂದು ಗೆಳೆಯರ ಬಳಗ ಅಗಲವಾಗಿ ಬೆಳೆಯುತ್ತಿದೆ. ಆಳಕ್ಕೆ ಇಳಿಯುತ್ತಲೇ ಇಲ್ಲ. ಎಲ್ಲರೂ ಹಾಯ್ ಬಾಯ್ ಸ್ನೇಹಿತರಾಗುತ್ತಿದ್ದಾರೆ. ಕಷ್ಟ ಸುಖಗಳಿಗೆ ನಿಜಕ್ಕೂ ಸ್ಪಂದಿಸುವ ಗುಣ ಕಾಣೆಯಾಗಿ ಮೊಬೈಲುಗಳಲ್ಲಿ ದುಃಖದ ಅಥವಾ ಖುಷಿಯ ಇಮೋಟಿಕಾನ್ ಮೂಲಕ ಸ್ಪಂದಿಸುವ ಮಂದಿಯೇ ಹೆಚ್ಚಾಗುತ್ತಿರುವುದು ಆತಂಕಕಾರಿ ಸಂಗತಿ. . ಸ್ನೇಹದ ಹೆಸರಿನಲ್ಲಿ ಬಳಗವನ್ನು ವಿಸ್ತರಿಸಿಕೊಳ್ಳುವ ಗೀಳು ಸ್ನೇಹವಲ್ಲ. ಸ್ನೇಹವೆಂದರೆ ಕಷ್ಟಸುಖಗಳಿಗೆ ಬೆನ್ನಾಗಿ ನಿಲ್ಲುವ ಆಪ್ತರು; ಮನದಾಳವನ್ನು ಮುಚ್ಚುಮರೆಯಿಲ್ಲದೆ ಹಂಚಿಕೊಳ್ಳಬಹುದಾದ ಬಂಧುಗಳು.  ಗಂಡು ಹೆಣ್ಣೆಂಬ ಭೇದವಿಲ್ಲದ ನಿಷ್ಕಲ್ಮಶ ಬಂಧುತ್ವ ಸ್ನೇಹ. ಸ್ನೇಹಿತರು ಕತ್ತಲ ದಾರಿಯ ಮಿಣುಕುದೀಪಗಳು, ಹೊಂಗೆ ಮರದ ನೆರಳು.

IMG 20180306 WA0008 1 edited
-ಡಾ.ಶುಭಶ್ರೀಪ್ರಸಾದ್, ಮಂಡ್ಯ
Share This Article
Leave a comment