ತಮ್ಮ ತವರುಕ್ಷೇತ್ರ ಹೊಸಪೇಟೆಯ ವೇಣುಗೋಪಾಲಸ್ವಾಮಿ ದೇಗುಲದಲ್ಲಿ ಸಚಿವ ಆನಂದ್ ಸಿಂಗ್ ಬುಧವಾರ ಬೆಳಗಿನಿಂದ ವಿಶೇಷಪೂಜೆಯಲ್ಲಿ ಪಾಲ್ಗೊಂಡಿದ್ದಾರೆ.
ಈ ಪೂಜೆಗೊಂದು ಮಹತ್ವವಿದೆ. ಈ ಹಿಂದೆ ಕಾಂಗ್ರೆಸ್ ಪಕ್ಷದಲ್ಲಿದ್ದ ಸಮಯದಲ್ಲೂ ಆನಂದ್ ಸಿಂಗ್ ಇದೇ ರೀತಿ ವಿಶೇಷಪೂಜೆ ನಡೆಸಿದ ನಂತರವೇ ರಾಜೀನಾಮೆ ನೀಡಿದ್ದರು. ಹೀಗಾಗಿ ಇಂದಿನ ಈ ಧಾರ್ಮಿಕ ಕಾರ್ಯಕ್ರಮ ರಾಜಕೀಯ ವಲಯದಲ್ಲಿ ಗಮನ ಸೆಳೆದಿದೆ. ತಮ್ಮ ಕುಟುಂಬದವರೊಂದಿಗೆ ಹೋಮ-ಹವನದಲ್ಲಿ ಆನಂದ್ ಸಿಂಗ್ ಭಾಗಿಯಾಗಿದ್ದಾರೆ.
ಇತ್ತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆನಂದ್ಸಿಂಗ್ ವಿಚಾರವಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ.
ಆನಂದ್ ಸಿಂಗ್ ತಮ್ಮ ಮೂರು ದಶಕದ ಗೆಳೆಯ. ಮಾತುಕತೆಗೆ ಬರಲು ಇಂದು ಆಹ್ವಾನ ನೀಡಿದ್ದೇನೆ. ನಾಳೆ ನಾನು ಬೆಂಗಳೂರಿನಲ್ಲಿ ಇರದ ಕಾರಣ ಇಂದು ಬರದಿದ್ದರೆ ನಾಡಿದ್ದು ಬರುವಂತೆ ಹೇಳಿದ್ದೇನೆ. ಅವರು ರಾಜೀನಾಮೆ ನೀಡಿಲ್ಲ ಎಂದು ಸಿಎಂ ಬೆಂಗಳೂರಿನಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಮಾಜಿಮುಖ್ಯಮಂತ್ರಿ ಬಿಎಸ್ವೈ ಅವರು ಈಗ ಅಖಾಡಕ್ಕೆ ಇಳಿದಿದ್ದು, ಆನಂದ್ ಸಿಂಗ್ ಪ್ರಕರಣ ಸುಖಾಂತ್ಯಗೊಳಿಸಲು ಯತ್ನಿಸಿದ್ದಾರೆ. ಈಗ ಸುರಪುರಕ್ಕೆ ಹೋಗಿರುವ ವಿಶೇಷ ಹೆಲಿಕಾಪ್ಟರ್ನಲ್ಲಿ ಶಾಸಕ ರಾಜೂಗೌಡ ಹೊಸಪೇಟೆಗೆ ತೆರಳಿ ಆನಂದ್ ಸಿಂಗ್ ಅವರನ್ನು ಇಂದು ಸಂಜೆ ವೇಳೆಗೆ ಬೆಂಗಳೂರಿಗೆ ಕರೆ ತರುತ್ತಾರೆ ಎಂದು ಮೂಲಗಳು ಹೇಳಿವೆ.
ವಿಶೇಷ ಪೂಜೆ ನಡೆಸುತ್ತಿರುವ ಸಚಿವ ಆನಂದ್ ಸಿಂಗ್ ಅವರು ದೇವರ ಮುಂದೆ ಇಂದು ಚೀಟಿ ಇಟ್ಟಿದ್ದಾರೆ. ಆದರಲ್ಲಿ ಏನು ಬರದಿದೆ ಎಂಬುದು ಮಾತ್ರ ಇನ್ನೂ ನಿಗೂಢವಾಗಿಯೇ ಇದೆ.