ಆನಂದ್ ಸಿಂಗ್ ಮುನಿಸು ತಾರಕಕ್ಕೆ: ರಾಜೀನಾಮೆಗೆ ಮುಂದಾಗಿರುವ ವಿಜಯನಗರದ “ವೀರಪುತ್ರ’ ?

Team Newsnap
1 Min Read

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಚಿವ ಸಂಪುಟದ ಖಾತೆ ಪ್ರಕಟವಾಗುತ್ತಿದ್ದಂತೆ ತಮಗೆ ದೊರೆತ ಖಾತೆ ಬಗ್ಗೆ ಅತೃಪ್ತಿ ಹೊರಹಾಕಿದ್ದ ಸಚಿವ ಆನಂದ್‌ಸಿಂಗ್ ಆಕ್ರೋಶ ಈಗ ತಾರಕಕ್ಕೇರಿದೆ.

ಮುಖ್ಯಮಂತ್ರಿಯ ದೂರವಾಣಿ ಕರೆಗೂ ಸಚಿವ ಆನಂದ್ ಸಿಂಗ್ ನಿರ್ಲಕ್ಷ್ಯ ಮಾಡಿರುವ ಸಂಗತಿ ವಿಷಯ ಬಹಿರಂಗವಾಗಿದ್ದು, ಬೊಮ್ಮಾಯಿ ಸಂಪುಟದಲ್ಲಿ ಒಂದು ವಿಕೆಟ್ ಪತನವಾಗುವ ಎಲ್ಲ ಲಕ್ಷಣಗಳು ಗೋಚರಿಸುತ್ತಿದೆ ಎಂಬುದು ರಾಜಕೀಯ ಪಂಡಿತರ ಅಭಿಪ್ರಾಯ.

ತಮಗೆ ದೊರೆತ ಪರಿಸರ ಮತ್ತು ಪ್ರವಾಸೋದ್ಯಮ ಖಾತೆ ಬಗ್ಗೆ ಅತೃಪ್ತಿಹೊಂದಿರುವ ಆನಂದ್ ಸಿಂಗ್ ಅವರೊಂದಿಗೆ ಈಗಾಗಲೇ ಮುಖ್ಯಮಂತ್ರಿ ಒಂದು ಸುತ್ತಿನ ಮಾತುಕತೆ ನಡೆಸಿದ್ದು, ಇನ್ನೊಮ್ಮೆ ಚರ್ಚೆ ನಡೆಸುವ ಭರವಸೆಯನ್ನೂ ನೀಡಿದ್ದರು.
ಇದರಿಂದ ಸಮಾಧಾನಗೊಳ್ಳದ ಆನಂದ್ ಸಿಂಗ್ ಕಳೆದ ಭಾನುವಾರ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ರಾಜೀನಾಮೆ ಪತ್ರವಿರುವ ಕವರ್ ನೀಡಿದ್ದು, ತಾವು ನೀಡಿರುವ ಗಡುವಿನೊಳಗೆ ಖಾತೆ ಬದಲಾವಣೆ ಬೇಡಿಕೆ ಈಡೇರಿಸದಿದ್ದರೆ ರಾಜೀನಾಮೆ ಅಂಗೀಕರಿಸುವಂತೆ ಹೇಳಿದ್ದಾರೆನ್ನಲಾಗಿದೆ.

ಈ ಮಧ್ಯೆ ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿರುವ ತಮ್ಮ ಕಚೇರಿಯ ಮುಂದಿದ್ದ ‘ಶಾಸಕರ ಕಚೇರಿ’ ಎಂಬ ಫಲಕವನ್ನು ತೆರುವುಗೊಳಿಸಿರುವುದು ಹೊಸ ಬೆಳವಣಿಗೆಯಾಗಿದ್ದು, ಸಚಿವ ಸ್ಥಾನದ ಜತೆಗೆ ಶಾಸಕ ಸ್ಥಾನಕ್ಕೂ ಅವರು ರಾಜೀನಾಮೆ ನೀಡುವರೆಂಬ ಸುದ್ದಿ ವ್ಯಾಪಕವಾಗಿ ಹರಡಿದೆ.

ಇಂಧನ ಇಲ್ಲವೇ ಲೋಕೋಪಯೋಗಿ ಖಾತೆ ಬಗ್ಗೆ ಕಣ್ಣಿಟ್ಟಿದ್ದ ಆನಂದ್ ಸಿಂಗ್‌ಗೆ ಪರಿಸರ ಮತ್ತು ಪ್ರವಾಸೋದ್ಯಮ ಖಾತೆ ನೀಡಲಾಗಿತ್ತು. ಇದು ಪ್ರಕಟವಾಗುತ್ತಲೇ ‘ವಿಜಯನಗರದ ವೀರಪುತ್ರ’ತಮ್ಮ ಆಕ್ರೋಶವನ್ನು ಮಾಧ್ಯಮಗಳ ಮೂಲಕ ಹೊರಹಾಕಿದ್ದರು.

ತಾವು ಪಕ್ಷಕ್ಕೆ ಸಲ್ಲಿಸಿದ ಸೇವೆ ಪರಿಗಣಿಸಿಲ್ಲ ಎಂದು ರೋಷದಿಂದ ಹೇಳಿದ್ದರು. ಪ್ರಬಲ ಖಾತೆ ನಿಭಾಯಿಸುವ ಯೋಗ್ಯತೆ ತಮಗೆ ಇಲ್ಲವೆಂದರೆ ಅದನ್ನಾದರೂ ಹೇಳಬೇಕೆಂದು ಆಗ್ರಹಿಸಿದ್ದರು.

Share This Article
Leave a comment