ರೈತರು ನಡೆಸುತ್ತಿರುವ ಪ್ರತಿಭಟನೆಗಳಿಂದ ಸರ್ಕಾರ ಕಡೆಗೂ ಎಚ್ಚೆತ್ತಿದೆ. ರೈತರ ಸಮಸ್ಯೆಗಳನ್ನು ಪರಿಹರಿಸಲು ರಾಜ್ಯ ಸರ್ಕಾರ ಮುಂದಾಗಿದೆ.
ರೈತ ಪ್ರತಿಭಟನೆಗೆ ಬೆದರಿದ ಸರ್ಕಾರ ಕೊನೆಗೂ ಸಂಧಾನಕ್ಕೆ ರೆಡಿಯಾಗಿದೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅನುಮೋದಿಸಿರುವ ಕೃಷಿ ಕಾಯ್ದೆ ಮತ್ತು ಮಸೂದೆಗಳು ರೈತ ವಿರೋಧಿಯಾಗಿ ದೆ. ಇವುಗಳನ್ನು ರದ್ದು ಮಾಡುವಂತೆ ರೈತ ಪರ ಸಂಘಟನೆಗಳು ಸೇರಿಕೊಂಡು ಯಡಿಯೂರಪ್ಪನವರಿಗೆ ಮನವಿ ಮಾಡಿದ್ದವು. ಆದರೆ ಇದ್ಯಾವುದಕ್ಕೂ ಸಿಎಂ ಸರಿಯಾಗಿ ಸ್ಪಂದಿಸಿರಲಿಲ್ಲ. ಹಾಗಾಗಿ ಇಂದು ರೈತ ಸಂಘಟನೆಗಳು ಬೆಂಗಳೂರಿನಲ್ಲಿ, ಹೆದ್ದಾರಿಗಳು ಕೂಡುವ ರಸ್ತೆಗಳಲ್ಲಿ ಪ್ರತಿಭಟನೆ ಮಾಡಲು ಮುಂದಾಗಿದ್ದವು.
ರೈತರ ಸಮಸ್ಯೆಗಳ ಕುರಿತು ಶುಕ್ರವಾರ ವಿಧಾನಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪನವರು ‘ರೈತ ಸಂಘಟನೆಗಳ ಮುಖಂಡರನ್ನು ಚರ್ಚೆಗೆ ಬರುವಂತೆ ಆಹ್ವಾನ ನೀಡಿದ್ದೇವೆ. ಗೊಂದಲ ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಭೂಸುಧಾರಣೆ ಹಾಗೂ ಎಪಿಎಂಸಿ ಕಾಯ್ದೆಗಳಿಂದ ರೈತರಿಗೆ ಯಾವುದೇ ರೀತಿಯ ಅನ್ಯಾಯವಾಗುವದಿಲ್ಲ. ಅವರು ತಮ್ಮ ಬೆಳೆಗಳನ್ನು ಮಾರಾಟ ಮಾಡಲು ಸ್ವತಂತ್ರರಾಗಿರುತ್ತಾರೆ. ಯಾವುದೇ ಮಧ್ಯವರ್ತಿಗಳ ಹಾವಳಿ ಇರುವದಿಲ್ಲ. ನೀರಾವರಿ ಪ್ರದೇಶದಲ್ಲಿಟ್ಟ ಜಮೀನನ್ನು ಕೇವಲ ಕೃಷಿಗೆ ಮಾತ್ರ ಬಳಸಬೇಕು. ಕೆಲವು ವ್ಯಕ್ತಿಗಳು ತಮ್ಮ ಸ್ವಹಿತಾಸಕ್ತಿ ಸಾಧನೆಗಾಗಿ ರೈತರನ್ನು ದಾರಿ ತಪ್ಪಿಸುತ್ತಿದ್ದಾರೆ’ ಎಂದು ಹೇಳಿದರು.
ಪ್ರತಿಪಕ್ಷ ಕಾಂಗ್ರೆಸ್ ಬಿಜೆಪಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದ ಬಗ್ಗೆ ಮಾತನಾಡಿದ ಮುಖ್ಯಮಂತ್ರಿಯವರು ‘’ಇದು ಪ್ರತಿಪಕ್ಷಗಳು ಪ್ರತಿ ಆರು ತಿಂಗಳಿಗೊಮ್ಮೆ ಸರ್ಕಾರದ ವಿರುದ್ಧ ಪ್ರತಿಪಕ್ಷ ಅವಿಶ್ವಾಸ ನಿರ್ಣಯ ಮಂಡಿಸಲು ಕಾನೂನಿನಲ್ಲಿ ಅವಕಾಶವಿದೆ. ಇದರಲ್ಲಿ ಹೊಸದೇನು ಇಲ್ಲ’ ಎಂದು ಜಾಣ್ಮೆಯಿಂದ ಉತ್ತರ ನೀಡಿದರು.