March 15, 2026

Newsnap Kannada

The World at your finger tips!

sa ra mahesh

ಆ. 25 ಕ್ಕೆ ಮೈಸೂರು ನಗರ ಪಾಲಿಕೆಯ ಮೇಯರ್ ಚುನಾವಣೆ: ಜೆಡಿಎಸ್​, ಕಾಂಗ್ರೆಸ್ ದೋಸ್ತಿಗೆ ಬ್ರೇಕ್ ?

Spread the love

ಮೈಸೂರಿನಲ್ಲಿ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಪಕ್ಷಗಳು ಮತ್ತೊಂದು ಜಟಾಪಟಿಗೆ ಸಜ್ಜಾಗಿವೆ

ಆಗಸ್ಟ್ 25ಕ್ಕೆ ಮೈಸೂರು ಮೇಯರ್ ಚುನಾವಣೆ ನಡೆಯಲಿದೆ. ಕಾಂಗ್ರೆಸ್, ಜೆಡಿಎಸ್ ಮೈತ್ರಿ ಮುರಿದು ಬೀಳುವ ಸಾಧ್ಯತೆ ದಟ್ಟವಾಗಿದೆ. ಆದರೆ ಬಿಜೆಪಿ ಜೆಡಿಎಸ್ ನಡುವೆ ಹೊಂದಾಣಿಕೆ ಪ್ರಯತ್ನ ಅಥವಾ ಜೆಡಿಎಸ್ ತಟಸ್ಥ ವಾಗಿ ಉಳಿಯುವ ಸಾಧ್ಯತೆಯಿದೆ. ‌

ಮೈಸೂರು ಮಹಾನಗರ ಪಾಲಿಕೆ ಯಲ್ಲಿ ನಿರ್ಣಾಯಕ ಸ್ಥಾನದಲ್ಲಿರುವ ಜೆಡಿಎಸ್ ವಿಶ್ವಾಸಗಿಟ್ಟಿಸಿಕೊಳ್ಳಲು ಬಿಜೆಪಿ ನಾನಾ ಕಸರತ್ತು ನಡೆಸುತ್ತಿದೆ‌. ತಮ್ಮ ಅವಧಿಯಲ್ಲಿ ಹೇಗಾದರೂ ಸರಿ ಬಿಜೆಪಿ ಮೇಯರ್ ಗಾದಿ ಪಡೆಯಲೇಬೇಕು ಅಂತಾ ಪಣ ತೊಟ್ಟಿರುವ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಜೆಡಿಎಸ್ ಶಾಸಕ ಸಾ.ರಾ. ಮಹೇಶ್‌ರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ಈ ನಡುವೆ ಹಾಲಿ ಜೆಡಿಎಸ್, ಕಾಂಗ್ರೆಸ್ ಮೈತ್ರಿ ಮುರಿದು ಬೀಳುವ ಸುಳಿವನ್ನು ಜೆಡಿಎಸ್ ನಾಯಕರೇ ನೀಡಿದ್ದಾರೆ.

ಕಳೆದ ಬಾರಿ ಘೋಷಣೆಯಾಗಿದ್ದ ಮೇಯರ್ ಚುನಾವಣೆ ತಡೆ ನೀಡುವಂತೆ ಕೋರ್ಟ್ ಮೊರೆ ಹೋದಾಗಿನಿಂದ ಕಾಂಗ್ರೆಸ್ ಜೊತೆ ನಾವು ಇಲ್ಲ. ಮುಂದಿನ ಚುನಾವಣೆಯಲ್ಲಿ ನಾವು ತಟಸ್ಥವಾಗಿ ಉಳಿದರೂ ಆಶ್ಚರ್ಯವಿಲ್ಲ ಎಂದು ಶಾಸಕ ಸಾ.ರಾ.ಮಹೇಶ್ ಹೇಳಿದ್ದಾರೆ.

ಈ ಬೆಳವಣಿಗೆಗಳ‌ ನಡುವೆ ಕಾಂಗ್ರೆಸ್ ನಾಯಕರ ಮೌನ ತೀವ್ರ ಕುತೂಹಲ ಮೂಡಿಸಿದೆ. ಕಳೆದ ಚುನಾವಣೆಯಲ್ಲಿ ಸಿದ್ದರಾಮಯ್ಯ ಸೂಚನೆಯನ್ನ ದಿಕ್ಕರಿಸಿ ಜೆಡಿಎಸ್ ಜೊತೆ ಮೈತ್ರಿ ಮುಂದುವರೆಸಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್, ಶಾಸಕ ತನ್ವೀರ್‌ಸೇಠ್ ಈ ಬಾರಿ‌ ಯಾವ ಗೋಜಿಗೂ ಹೋಗಿಲ್ಲ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ನಡುವೆ ಬಣ ರಾಜಕೀಯ ಮುಂದುವರೆದಿದ್ದು ಕಳೆದ ಬಾರಿಯಂತೆ ಈ ಬಾರಿಯೂ ಕೊನೆ ಘಳಿಗೆಯಲ್ಲಿ ಹೈಡ್ರಾಮ ನಡೆದರೂ ಆಶ್ಚರ್ಯವಿಲ್ಲ.

error: Content is protected !!