ಹೆಚ್ಚಿನ ಬಡ್ಡಿ ದರ ನೀಡುವುದಾಗಿ ನಂಬಿಸಿ ಸಾರ್ವಜನಿಕರಿಗೆ ವಂಚನೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಕಣ್ವ ಗ್ರೂಪ್ಗೆ ಸೇರಿದ ಕರ್ನಾಟಕ ಮತ್ತು ಆಂಧ್ರಪ್ರದೇಶದಲ್ಲಿನ ಸುಮಾರು 84.40 ಕೋಟಿ ರೂಪಾಯಿ ಮೌಲ್ಯದ ಸ್ಥಿರಾಸ್ತಿಯನ್ನು ಜಾರಿ ನಿರ್ದೇಶನಾಲಯ (ಇ.ಡಿ) ಮುಟ್ಟುಗೋಲು ಹಾಕಿಕೊಂಡಿದೆ.
ಕಣ್ವ ಸಮೂಹ ಸಂಸ್ಥೆಗಳ ನಿರ್ದೇಶಕ ಹಾಗೂ ಕುಟುಂಬ ಸದಸ್ಯರಿಗೆ ಸೇರಿದ ಮಹಾರಾಷ್ಟ್ರ ಮತ್ತು ಆಂಧ್ರ ಪ್ರದೇಶನ ಕೃಷಿ-ಕೃಷಿಯೇತರ ಭೂಮಿ, ಕಟ್ಟಡಗಳು ಹಾಗೂ ರಾಜ್ಯದ ಬೆಂಗಳೂರು, ನೆಲಮಂಗಲ, ಚಿಕ್ಕಬಳ್ಳಾಪುರ, ಶ್ರೀರಂಗಪಟ್ಟಣ ಸೇರಿ ಹಲವೆಡಿ ಇರುವ ಆಸ್ತಿಯನ್ನು ಪಿಎಂಎಲ್ಎ ಆ್ಯಕ್ಟ್ 2002ರ ಅಡಿಯಲ್ಲಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.
ಇದಕ್ಕೂ ಮೊದಲು 255.17 ಕೋಟಿ ಮೌಲ್ಯದ ಚರ, ಸ್ಥಿರ ಆಸ್ತಿಯನ್ನು ಇಡಿ ವಶಪಡಿಸಿಕೊಂಡಿತ್ತು.
ಈವರೆಗೂ ಕಣ್ವ ಸಮೂಹ ಸಂಸ್ಥೆಗಳ ಒಟ್ಟು 339.57 ಕೋಟಿ ಮೌಲ್ಯದ ಆಸ್ತಿ ಅಟ್ಯಾಚ್ ಆಗಿದೆ.
ಪ್ರಕರಣ ವಿವರ
ಬೆಂಗಳೂರು ಹಾಗೂ ಇತರೆ ಜಿಲ್ಲೆಗಳಲ್ಲಿ ಕಣ್ವ ಸೌಹಾರ್ದ ಕೋ-ಆಪರೇಟಿವ್ ಕ್ರೆಡಿಟ್ ಲಿಮಿಟೆಡ್ ಬ್ಯಾಂಕ್ ಹೆಸರಲ್ಲಿ ಹೆಚ್ಚಿನ ಬಡ್ಡಿ ಆಸೆ ತೋರಿಸಿ ಸಾರ್ವಜನಿಕರಿಂದ ಹಣ ಸಂಗ್ರಹಿಸಿದ ಆರೋಪ ಕೇಳಿಬಂದಿತ್ತು.
ಶೇ 12-15ರಷ್ಟು ಬಡ್ಡಿ ಹಾಗೂ ಸಾಲ ಸೌಲಭ್ಯ ಕಲ್ಪಿಸುವುದಾಗಿ ಸುಮಾರು 13 ಸಾವಿರ ಜನರಿಂದ 650 ಕೋಟಿ ರೂಪಾಯಿ ಹಣ ಸಂಗ್ರಣ ಮಾಡಲಾಗಿತ್ತು. ಹಣ ಸಂಗ್ರಹಣೆಗೆ ಏಜೆಂಟ್ರನ್ನು ನೇಮಕ ಮಾಡಿ ಅಧಿಕ ಬಡ್ಡಿಯ ಆಸೆ ತೋರಿಸಿ ಹಣ ಸಂಗ್ರಹಿಸಲಾಗಿತ್ತು.
ಸಹಕಾರ ಬ್ಯಾಂಕ್ಗಳು ಕಾನೂನು ಕಾಯ್ದೆಗಳ ಉಲ್ಲಂಘನೆ ಹಿನ್ನೆಲೆ ಕಣ್ವ ಸಮೂಹ ಸಂಸ್ಥೆಗಳ ನಿರ್ದೇಶಕ ಎನ್.ನಂಜುಂಡಯ್ಯ ವಿರುದ್ಧ ಬೆಂಗಳೂರು ಸಹಕಾರಿ ಸಂಘಗಳ ನೋಂದಣಾಧಿಕಾರಿ, ಜಾರಿ ನಿರ್ದೇಶನಾಲಯ(ಇ.ಡಿ)ಗೆ ದೂರು ನೀಡಿದ್ದರು.
ಈ ಹಿನ್ನೆಲ್ಲೆ ಕಣ್ವ ಸಮೂಹ ಸಂಸ್ಥೆಗಳ ವಿರುದ್ಧ ದಾಖಲಾಗಿದ್ದ ಎಫ್ಐಆರ್ ಆಧಾರದ ಮೇಲೆ 2020 ಅಗಸ್ಟ್ 25ರಂದು ಇ.ಡಿ ಅಧಿಕಾರಿಗಳು ದಾಳಿ ನಡೆಸಿದ್ದರು. ದಾಳಿ ವೇಳೆ ಮಹತ್ವದ ದಾಖಲೆಯನ್ನು ವಶಕ್ಕೆ ಪಡೆದು ಕೊಂಡಿದ್ದರು.