ಮುಂದಿನ ಲೋಕಸಭೆ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿಯನ್ನು ಮಂಡ್ಯದ ಲೋಕಸಭೆ ಕ್ಷೇತ್ರದಿಂದಲೇ ಕಣಕ್ಕಿಳಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಘೋಷಿಸಿದರು.
ಚನ್ನಪಟ್ಟಣದ ಚೆಕ್ಕೆರೆಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿ ಕುಮಾರಸ್ವಾಮಿ ಈ ವಿಷಯ ಪ್ರಕಟಸಿದರು.
ತಮ್ಮ ಮತ್ತು ನಿಖಿಲ್ ವಿರುದ್ಧ ಕೆಲವರು ನೀಡುತ್ತಿರುವ ಹೇಳಿಕೆಗಳ ಬಗ್ಗೆ ಪ್ರತಿಕ್ರಿಯೆ ನೀಡಿ ಮಂಡ್ಯ ಜಿಲ್ಲೆಯ ಜನರು ಮುಂದಿನ ಚುನಾವಣೆಯಲ್ಲಿ ಉತ್ತರ ಕೊಡುತ್ತಾರೆ. ಕಳೆದ ಚುನಾವಣೆಯಲ್ಲಿ ನಮ್ಮ ವಿರುದ್ಧ ಕುತಂತ್ರದ ರಾಜಕಾರಣ ನಡೆಯಿತು. ಕಾಂಗ್ರೆಸ್, ಬಿಜೆಪಿ, ರೈತಸಂಘ ಒಂದಾಗಿದ್ದರು ಎಂದು ಕಿಡಿಕಾರಿದರು.
ಇತ್ತೀಚೆಗಷ್ಟೆ ಮಂಡ್ಯದ ಮದ್ದೂರಿನಲ್ಲಿ ನಿಖಿಲ್ ಕುಮಾರಸ್ವಾಮಿ ಅವರು, ಬೇರೆಯವರನ್ನು ದೂರುವ ಬದಲು ಸಂಸದರು ಆತ್ಮಾವಲೋಕನ ಮಾಡಿಕೊಳ್ಳಲಿ. ಸಂಸದರಾಗಿ ಜಿಲ್ಲೆಗೆ ಸುಮಲತಾ ಅವರ ಕೊಡುಗೆ ಏನು ಎಂದು ಪ್ರಶ್ನೆ ಮಾಡಿಕೊಳ್ಳಲಿ ಎಂದಿದ್ದರು.
ಅಭಿವೃದ್ಧಿ ಆಗಿಲ್ಲ ಅಂದರೆ, ಶಾಸಕರನ್ನು ಜನರು ಪ್ರಶ್ನೆ ಮಾಡುತ್ತಾರೆ. ಆದರೆ ಇವರನ್ನು ಪ್ರಶ್ನೆ ಮಾಡುವವರು ಯಾರು? ಪ್ರತಿ ಬಾರಿ ಕಾಲು ಕೆರೆದುಕೊಂಡು ಜಗಳ ಹುಟ್ಟುಹಾಕಿ. ಯಾರೋ ಏನೋ ಅಂದ್ಬಿಟ್ರು, ಯಾರೋ ಏನೋ ಅಂದ್ಬಿಟ್ರು ಅಂತ ಅನುಕಂಪ ಗಿಟ್ಟಿಸಲು ಆಗಲ್ಲ. 2024ರವರೆಗೂ ಅವರ ಅಧಿಕಾರ ಇದೆ. ಜನಗಳ ಜೊತೆ ನಿಂತು ಕೆಲಸ ಮಾಡಲಿ ಎಂದು ಸಂಸದೆ ಸುಮಲತಾ ವಿರುದ್ಧ ಆಕ್ರೋಶ ಹೊರಹಾಕಿದರು.