ಯುವಕ,ಯುವತಿ ಅಷ್ಟೊತ್ತಿನಲ್ಲಿ ನಿರ್ಜನಪ್ರದೇಶಕ್ಕೆ ಹೋಗ್ಬಾರದಿತ್ತು: ಅರಗ

Team Newsnap
1 Min Read

ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಲ್ಲಿ ಮಂಗಳವಾರ ಸಂಜೆ ನಡೆದ ಸಾಮೂಹಿಕ ಅತ್ಯಾಚಾರಕ್ಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಗೃಹ ಸಚಿವ ಅರಗ ಜ್ಞಾನೇಂದ್ರ, ಯುವಕ, ಯುವತಿ ಸಂಜೆ 7.3೦ರ ಸಮಯದಲ್ಲಿ ನಿರ್ಜನ ಪ್ರದೇಶಕ್ಕೆ ಹೋಗಬಾರದಿತ್ತು ಎಂದು ಹೇಳಿದ್ದಾರೆ.


ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು,ಯುವಕ,ಯುವತಿ ಅಷ್ಟೊತ್ತಿನಲ್ಲಿ ನಿರ್ಜನಪ್ರದೇಶಕ್ಕೆ ಹೋಗ್ಬಾರದಿತ್ತು, ಆದರೆ ಹೋಗಬೇಡಿ ಅಂತ ತಡೆಯಲೂ ಆಗೋದಿಲ್ಲ ಎಂದಿದ್ದಾರೆ. ಈಗ ಯುವಕ, ಯುವತಿ ಶಾಕ್‌ನಲ್ಲಿದ್ದು, ಅವರಿಂದ ಪೂರ್ಣವಾಗಿ ಹೇಳಿಕೆ ಪಡೆಯಲು ಆಗಿಲ್ಲ. ಪೊಲೀಸ್ ಅಧಿಕಾರಿಗಳು ತನಿಖೆ ಮಾಡುತ್ತಿದ್ದಾರೆ. ಪ್ರಕರಣ ನಡೆದ 12 ತಾಸಿನೊಳಗೆ ಎಫ್‌ಐಆರ್ ದಾಖಲಾಗಿದೆ. ಸಂತ್ರಸ್ತೆಗೆ ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.


ಅತ್ಯಾಚಾರ ಪ್ರಕರಣಕ್ಕೆಸಂಬಂಧಿಸಿದಂತೆ ಗೃಹ ಸಚಿವರು ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿರುವುದಕ್ಕೆ ಪ್ರತಿಕ್ರಿಯಿಸಿ, ಅವರು(ಕಾಂಗ್ರೆಸ್‌ನವರು) ನನ್ನ ರೇಪ್ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಅಚ್ಚರಿ ಮೂಡುವ ಹೇಳಿಕೆ ನೀಡಿದ್ದಾರೆ. ಇಂಥ ಪ್ರಕರಣದಲ್ಲೂ ರಾಜಕೀಯ ಮಾಡಲು ಹೋಗಬಾರದು ಎಂದು ಅರಗ ಜ್ಞಾನೇಂದ್ರ ಖಾರವಾಗಿ ನುಡಿದರು.


ಇಂದು ಸಂಜೆ ಮೈಸೂರಿಗೆ ಹೋಗುತ್ತೇನೆ. ನಾಳೆಯೂ ಅಲ್ಲೇ ಇದ್ದು ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸುತ್ತೇನೆ ಎಂದು ಹೇಳಿದರು.

Share This Article
Leave a comment