ಸಚಿವ ಮುರುಗೇಶ್ ನಿರಾಣಿಗೆ ಮುಖ್ಯಮಂತ್ರಿ ಸ್ಥಾನ ಕೈತಪ್ಪಲು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕಾರಣ ಎಂದು ಕೂಡಲ ಸಂಗಮ ಪಂಚಮಸಾಲಿ ಪೀಠದ ಶ್ರೀ ಜಯ ಮೃತ್ಯುಂಜಯ ಸ್ವಾಮೀಜಿ ನೇರವಾಗಿ ಆರೋಪಿಸಿದರು.
ನಮ್ಮವರು ಮುಖ್ಯಮಂತ್ರಿ ಆಗುತ್ತಾರೆ ಎಂಬ ಅಪೇಕ್ಷೆ ಇತ್ತು. ನಿರಾಣಿಗೆ ಮುಖ್ಯಮಂತ್ರಿ ಸ್ಥಾನ ಯಾರು ತಪ್ಪಿಸಿದ್ದಾರೆ ಎಂದು ಎಲ್ಲರಿಗೂ ಗೊತ್ತಿದೆ ಎಂದು ಸ್ವಾಮೀಜಿ ಕೊಪ್ಪಳ ದಲ್ಲಿಂದು ವರದಿಗಾರರಿಗೆ ತಿಳಿಸಿದರು.
ಮಂತ್ರಿಗಿಂತ ಮೀಸಲಾತಿ ಮುಖ್ಯ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಈಗಾಗಲೇ ಹೇಳಿದ್ದಾರೆ. ಅವರು ಬಾಹುಬಲಿ ಇದ್ದಂಗೆ. ಹೊರಗೂ ಒಳಗೂ ಗುಡುಗುತ್ತಾರೆ ಎಂದು ಸ್ವಾಮೀಜಿ ಮೆಚ್ಚುಗೆ ಮಾತುಗಳನ್ನಾಡಿದರು.
ಕೊಟ್ಟಿರುವ ಗಡುವಿನೊಳಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 2 ಎ ಮೀಸಲಾತಿ ಪ್ರಕಟಿಸಬೇಕು. ಇಲ್ಲದಿದ್ದರೆ ಅಕ್ಟೋಬರ್ 1 ರಿಂದ ಬೆಂಗಳೂರಿನಲ್ಲಿ ಸತ್ಯಾಗ್ರಹ ಮಾಡಲು ಪಂಚಮಸಾಲಿ ಸಮುದಾಯ ನಿರ್ಧರಿಸಿದೆ ಎಂದು ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ಪುನರುಚ್ಚರಿಸಿದರು. ದೇಗುಲಗಳ ತೆರವು ವಿಷಯ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದರು.