ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನೆರಳಲ್ಲ ಎಂದು ವಿಧಾನಪರಿಷತ್ ಸದಸ್ಯ ಎಚ್. ವಿಶ್ವನಾಥ್ ಸರ್ಟಿಫಿಕೇಟ್ ನೀಡಿದ್ದಾರೆ.
ಮೈಸೂರಿನಲ್ಲಿ ಅವರು ವರದಿಗಾರರೊಂದಿಗೆ ಮಾತನಾಡಿದರು. ಬೊಮ್ಮಾಯಿ ರಾಜ್ಯಕ್ಕೆ ಹೊಸ ಭರವಸೆ ಮೂಡಿಸಿದ್ದಾರೆ. ಜನರ ಸುತ್ತ ಅಭಿವೃದ್ಧಿ ಸುತ್ತಬೇಕೇ ಹೊರತು ಅಭಿವೃದ್ಧಿ ಸುತ್ತ ಜನ ಸುತ್ತಬಾರದು ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ ಎಂದು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
ಚಮತ್ಕಾರವಾಗಿ ಮಾತನಾಡುವ ಕಲೆ ರೂಢಿಸಿಕೊಂಡಿರುವ ವಿಶ್ವನಾಥ್, ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರ ಕನೆಕ್ಟಿಂಗ್ ಫ್ಯಾಮಿಲಿ ಆಗಿತ್ತು. ಆದರೆ ಬೊಮ್ಮಾಯಿ ಸರ್ಕಾರ ಕನೆಕ್ಟಿಂಗ್ ಪೀಪಲ್ ಆಗಿದೆ ಎಂದರು.
ಮುಂದಿನ ಚುನಾವಣೆ ಬೊಮ್ಮಾಯಿ ನೇತೃತ್ವದಲ್ಲಿ ನಡೆಯಲಿದೆ ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆಗೆ ಸಮ್ಮತಿ ಸೂಚಿಸಿದ ವಿಶ್ವನಾಥ್, ಯಾರು ಸಿಎಂ ಅಥವಾ ಪಕ್ಷದ ಅಧ್ಯಕ್ಷರಾಗಿರುತ್ತಾರೋ ಅವರದ್ದೇ ನಾಯಕತ್ವ ಇರುತ್ತೆ. ಸಾಮೂಹಿಕ ನಾಯಕತ್ವವಿದ್ದರೂ ಒಬ್ಬ ಮೇಟಿ ಇರಬೇಕು. ಬೊಮ್ಮಾಯಿ ಆ ಮೇಟಿಯಂತೆ ಎಂದು ಬಣ್ಣಿಸಿದರು.