ಹೋಳಿ ಹುಣ್ಣಿಮೆ ಯಾಕೆ ಆಚರಿಸುತ್ತಾರೆ ? ಕಾಮನಹಬ್ಬದ ವೈಶಿಷ್ಟ್ಯ ಹೀಗಿದೆ

Team Newsnap
1 Min Read

ಪೂರ್ವಕಾಲದಲ್ಲಿ ತಾರಕಾಸುರನೆಂಬ ರಾಕ್ಷಸನಿದ್ದ. ದುರಹಂಕಾರಿಯೂ, ಕ್ರೂರಿಯೂ ಆದ ತಾರಕಾಸುರನು ಲೋಕಕಂಟಕನಾಗಿ ಮೆರೆಯುತ್ತಿದ್ದ. ತನಗೆ ಮರಣವು ಬಾರದಿರಲಿ , ಬಂದರೂ ಅದು ಶಿವನಿಗೆ ಜನಿಸಿದ ಏಳು ದಿನದ ಶಿಶುವಿನಿಂದ ಬರಲಿ ಎಂದು ಬ್ರಹ್ಮನಲ್ಲಿ ವರವನ್ನು ಪಡೆದಿದ್ದ.

ಭೋಗಸಮಾಧಿಯಲ್ಲಿದ್ದ ಶಿವನು ತನ್ನ ಪತ್ನಿಯಾದ ಪಾರ್ವತಿಯೊಂದಿಗೆ ಆ ವೇಳೆಯಲ್ಲಿ ಸಮಾಗಮ ಹೊಂದಲು ಸಾಧ್ಯವಿರಲಿಲ್ಲ. ದೇವತೆಗಳು ನಿರುಪಾಯರಾಗಿ ಪಾರ್ವತಿಯಲ್ಲಿ ಮೋಹ ಹೊಂದುವಂತೆ ಮಾಡಲು “ಮನ್ಮಥನಲ್ಲಿ” { ಕಾಮ } ಬೇಡಿದರು.

ಕಾಮ ಮತ್ತು ಅವನ ಪತ್ನಿ ರತಿದೇವಿ ಈ ಸತ್ಕಾರ್ಯಕ್ಕೆ ಒಪ್ಪಿದರು. ಭೋಗಸಮಾಧಿಯಲ್ಲಿದ್ದ ಶಿವನಿಗೆ ಹೂ ಬಾಣಗಳಿಂದ ಹೊಡೆದು ಸಮಾಧಿಯಿಂದ ಎಚ್ಚರಿಸಿದರು.
ಇದರಿಂದ ಕುಪಿತಗೊಂಡ ಶಿವನು ತನ್ನ ಮೂರನೇ ಕಣ್ಣಿನಿಂದ ( ತ್ರಿನೇತ್ರ ) ಕಾಮನನ್ನು ಸುಟ್ಟು ಭಸ್ಮ ಮಾಡಿದನು. ರತಿದೇವಿ ದುಃಖದಿಂದ ಶಿವನ ಹತ್ತಿರ ಪತಿಭಿಕ್ಷೆ ಬೇಡಿದಳು. ಆಗ ಶಾಂತಗೊಂಡ ಶಿವನು…. ಕಾಮನಿಗೆ ಪತ್ನಿಯೊಡನೆ ಮಾತ್ರ ಶರೀರಿಯಾಗುವಂತೆ ವರ ಕೊಟ್ಟನು.

ಲೋಕಕಲ್ಯಾಣಕ್ಕಾಗಿ ಮನ್ಮಥನು ಅನಂಗನಾಗುತ್ತಾನೆ. ಈ ಘಟನೆ ನಡೆದದ್ದು ಪಾಲ್ಗುಣ ಶುದ್ದ ಹುಣ್ಣಿಮೆಯಂದು.
ಆದ್ದರಿಂದ ಈ ದಿನವನ್ನು ಕಾಮನ ಹುಣ್ಣಿಮೆಯಾಗಿ ಆಚರಣೆಗೆ ಬಂದಿದೆ.

ಈ ದಿನದಂದು ಅಕ್ಕಿಹಿಟ್ಟು ಮತ್ತು ಅರಿಶಿನ ಬೆರೆಸಿದ ಗುಲಾಲು ತಯಾರಿಸಿ , ಬಿದರಿನಿಂದ ಪಿಚಕಾರಿ ತಯಾರಿಸಿ ಬಣ್ಣದಾಟ ಆಡುತ್ತಾರೆ.
ರಂಗಿನಾಟದ ನಂತರ ಅಭ್ಯಂಜನ ಸ್ನಾನ ಮಾಡಿ ದೇವರಲ್ಲಿ ಕೆಟ್ಟ ಗುಣಗಳೆಲ್ಲಾ ಸುಟ್ಟು ಹೋಗಲಿ ಅಂತ ಪ್ರಾರ್ಥಿಸಿ ವಿಶೇಷ ಸಿಹಿ ಅಡುಗೆ ಮಾಡಿ ನೈವ್ಯದ್ದೆ ಹಿಡಿದು ಊಟ ಮಾಡುತ್ತಾರೆ.

ಗ್ರಾಮೀಣ ಪ್ರದೇಶಗಳಲ್ಲಿ ಈ ದಿನ ಊರಿನವರ ಮನೆಯಲ್ಲಿ ಸಿಗುವ ಬೇಡದ ವಸ್ತುಗಳನ್ನೆಲ್ಲಾ ತಂದು ಒಂದೆಡೆ ಗುಡ್ಡೆ ಮಾಡಿ, ರಾತ್ರಿ ಹುಡುಗನೊಬ್ಬನಿಗೆ ಶಿಖಂಡಿಯ ವೇಷ ಹಾಕಿಸಿ , ಅವನಿಂದ ಊರಿನ ಐದು ಮನೆಗಳಲ್ಲಿ ಭಿಕ್ಷೆ ಬೇಡಿಸಿ ಕರೆತಂದು ಅವನಿಂದ ಬೇಡದ ವಸ್ತುಗಳ ಗುಡ್ಡೆಗೆ ಬೆಂಕಿ ಇಡಿಸುತ್ತಾರೆ. ಇದು ಕಾಮದಹನದ ಹಬ್ಬ ವೈಶಿಷ್ಟ್ಯ ಪೂರ್ಣ ಆಚರಣೆಯಾಗಿದೆ.

Share This Article
Leave a comment