ನಾಗರ ಪಂಚಮಿ ಹಬ್ಬದ ಮಹತ್ವವೇನು? ಸಮಗ್ರ ಮಾಹಿತಿ ಹೀಗಿದೆ….

Team Newsnap
4 Min Read

ನಾಗರ ಚೌತಿ ಹಾಗೂ ಪಂಚಮಿ ಹಬ್ಬದ ಆಚರಣೆಯ ಹಿಂದಿರುವ ಮಹತ್ವ ತಿಳಿಸುವ ಉದ್ದೇಶ ಲೇಖನದಲ್ಲಿದೆ. ಬಹಳಷ್ಟು ಜನರಿಗೆ ನಾಗರ ಪಂಚಮಿಯ ಮಹತ್ವವನ್ನು ತಿಳಿದೋ ಅಥವಾ ತಿಳಿಯದೆಯೇ ಅದನ್ನು ಆಚರಿಸುತ್ತಿರುತ್ತಾರೆ ಮಾತುಗಳು ಇದ್ದೆ ಇವೆ.

ಈ ನಾಗ ದೇವತೆಯ ಆಚರಣೆಯ, ಪೂಜೆಯ ಮತ್ತು ನೈವೇದ್ಯಗಳ ಹಿಂದೆ ಕೆಲವೊಂದು ಪುರಾಣ ಕತೆಗಳು ಮತ್ತು ಸತ್ಯಾಂಶಗಳು ಇವೆ.

naga

ಇಡೀ ಭಾರತದಾದ್ಯಂತ ಈ ಹಬ್ಬವನ್ನು ಶ್ರದ್ಧಾ ಮತ್ತು ಭಕ್ತಿಗಳ ಜೊತೆಯಲ್ಲಿ ಆಚರಿಸಲಾಗುತ್ತದೆ. ನಾಗರ ಪಂಚಮಿಯನ್ನು ನಾಗ ದೇವತೆಗಳನ್ನು ಅಂದರೆ ಹಾವುಗಳನ್ನು ಆರಾಧಿಸುವ ಒಂದು ಹಬ್ಬವಾಗಿ ಹಿಂದೂಗಳು ಆಚರಿಸುತ್ತಾರೆ.

ಹಿಂದೂ ಧರ್ಮವು ಸತ್ಯವನ್ನು ಹುಡುಕುವುದರ ಸುತ್ತ ನೆಲೆಗೊಂಡಿರುವ ಒಂದು ನಂಬಿಕೆಯಾಗಿದೆ. ಹಿಂದೂಗಳಿಗೆ ಇದು ಜೀವನವನ್ನು ಮತ್ತು ಪ್ರಕೃತಿಯ ಶಕ್ತಿಗಳನ್ನು ಪೂಜಿಸುವ ಒಂದು ಮಾರ್ಗವಾಗಿ ಪ್ರಾಚೀನ ಕಾಲದಿಂದಲು ನಡೆದು ಬಂದಿದೆ. ನಾಗರ ಪಂಚಮಿಯನ್ನು ಶ್ರಾವಣ ಮಾಸದ ಶುಕ್ಲಪಕ್ಷದಲ್ಲಿ ಬರುವ ಐದನೆ ದಿನ ಅಂದರೆ ಪಂಚಮಿಯಂದು ಆಚರಿಸಲಾಗುತ್ತದೆ. ಇದು ಜುಲೈ ಅಥವಾ ಆಗಸ್ಟ್ ತಿಂಗಳಿನಲ್ಲಿ ಬರುತ್ತದೆ.

ಈ ಹಬ್ಬವನ್ನು ಇದೇ ತಿಂಗಳುಗಳಲ್ಲಿ ಆಚರಿಸಲು ಹಿಂದಿರುವ ಪ್ರಧಾನ ಕಾರಣವೆಂದರೆ, ಈ ಸಮಯದಲ್ಲಿ ಹಾವುಗಳು ಜನರಿಗೆ ಭಯಭೀತಿಯನ್ನುಂಟು ಮಾಡಿರುತ್ತವೆ. ಮಳೆಯ ಕಾರಣದಿಂದ ಬಿಲಗಳಲ್ಲಿ ನೀರು ತುಂಬಿಕೊಂಡಾಗ ಹೊರ ಬರುವ ಹಾವುಗಳು ಜನರಿಗೆ ಅಪಾಯವನ್ನುಂಟು ಮಾಡುವ ಸಾಧ್ಯತೆ ಹೆಚ್ಚಿರುತ್ತದೆ. ಹಾಗಾಗಿ ಈ ಸಮಯದಲ್ಲಿ ಹಾವುಗಳಿಗೆ ಹಾಲೆರೆದು ಪೂಜಿಸಲಾಗುತ್ತದೆ.


‌ * ನಾಗರ ಪಂಚಮಿಯ ಆಚರಣೆಯ ಹಿಂದಿನ ಕಾರಣ

ನಂಬಿಕೆಗಳ ಪ್ರಕಾರ ಶ್ರೀ ಕೃಷ್ಣನು ಕಾಳಿಯ ಎಂಬ ಹಾವಿನ ಉಪಟಳದಿಂದ ಜನರನ್ನು ರಕ್ಷಿಸಿದನು.

ಆ ಕತೆ ಹೀಗಿದೆ:- ಒಂದು ದಿನ ಬಾಲಕ ಕೃಷ್ಣನು ಯಮುನಾ ನದಿಯ ತೀರದಲ್ಲಿ ಆಡುತ್ತಿದ್ದನು. ಆಗ ಅವನು ಆಟವಾಡುತ್ತಿದ್ದ ಚೆಂಡು ನದಿ ದಂಡೆಯಲ್ಲಿದ್ದ ಮರದ ಕಾಂಡದಲ್ಲಿ ಸಿಕ್ಕಿ ಹಾಕಿಕೊಂಡಿತು. ಆ ಚೆಂಡನ್ನು ಎತ್ತಿಕೊಳ್ಳಲು ಹೋದಾಗ ಕೃಷ್ಣನು ಜಾರಿ ನದಿಯಲ್ಲಿ ಬಿದ್ದನು. ‌ ಆಗ ಕಾಳಿಯ ಎಂಬ ಹಾವು ಅವನ ಮೇಲೆ ಆಕ್ರಮಣ ಮಾಡಿತು. ಆಗ ಕೃಷ್ಣನು ಆ ಹಾವಿನ ವಿರುದ್ಧ ಹೋರಾಟ ಮಾಡಿದನು. ಸ್ವಲ್ಪ ಸಮಯದ ನಂತರ ಆ ಹಾವಿಗೆ ಕೃಷ್ಣನು ಸಾಮಾನ್ಯ ಬಾಲಕನಲ್ಲ ಎಂದು ಅರಿವಾಯಿತು. ಆಗ ಆ ಹಾವು ಕೃಷ್ಣನನ್ನು ತನ್ನನ್ನು ಕೊಲ್ಲಬೇಡವೆಂದು ಅಂಗಲಾಚಿತು. ಈ ಮಾತಿಗೆ ಒಪ್ಪಿದ ಕೃಷ್ಣನು ಜನರಿಗೆ ತೊಂದರೆ ಮಾಡಬೇಡ ಎಂದು ಬುದ್ಧಿವಾದ ಹೇಳಿ ಆ ಹಾವನ್ನು ಬಿಟ್ಟು ಬಿಟ್ಟನು. ಹೀಗೆ ನಾಗರ ಪಂಚಮಿಯನ್ನು ಕೃಷ್ಣನು ಕಾಳಿಯ ಎಂಬ ಭಯಾನಕ ಸರ್ಪವನ್ನು ಗೆದ್ದ ಸಂತೋಷವನ್ನು ನೆನಪಿಸಿಕೊಳ್ಳುವ ಸಲುವಾಗಿ ಆಚರಿಸಿಕೊಂಡು ಬರಲಾಗುತ್ತಿದೆ.
* ಭಾರತದ ವಿವಿಧ ಭಾಗಗಳಲ್ಲಿ ನಾಗರ ಪಂಚಮಿಯನ್ನು ಆಚರಿಸುವ ಬಗೆ

ಈ ದಿನ ಜನರು ಭೂಮಿಯನ್ನು ಅಗೆಯಲು ಹೋಗುವುದಿಲ್ಲ. ಅದರ ಬದಲಿಗೆ ನಾಗರ ಕಲ್ಲು, ಮಣ್ಣಿನ ನಾಗ ಅಥವಾ ಚಿತ್ರ ಪಟದ ಮುಂದೆ ಭತ್ತ, ಧೂರ್ವವನ್ನು ಇಟ್ಟು ಪೂಜಿಸಲಾಗುತ್ತದೆ. ಈ ಹಬ್ಬವನ್ನು ಭಾರತದ ಎಲ್ಲಾ ಭಾಗಗಳಲ್ಲಿ ಬಹುತೇಕ ಒಂದೇ ಬಗೆಯಲ್ಲಿ ಆಚರಿಸಲಾಗುತ್ತದೆ.

ಹಿಂದೂಗಳ ನಂಬಿಕೆಗಳ ಪ್ರಕಾರ ಭಗವಾನ್ ಶಿವನು ಹಾವುಗಳಿಗೆ ತನ್ನ ಪ್ರೀತಿ ಮತ್ತು ಆಶಿರ್ವಾದಗಳನ್ನು ನೀಡಿದ್ದಾನಂತೆ. ಹಾಗಾಗಿ ಹಾವುಗಳನ್ನು ಪೂಜಿಸುವುದರಿಂದ ಶಿವನನ್ನು ಸಹ ಮೆಚ್ಚಿಸಬಹುದು ಎಂಬ ಭಾವನೆ ಆಸ್ತಿಕರಲ್ಲಿ ಅಡಗಿದೆ. ಭಗವಾನ್ ಶಿವನು ತನ್ನ ಉಗ್ರ ಕೋಪಕ್ಕೆ ಹೆಸರುವಾಸಿ. ಆತನಿಗೆ ಕೋಪ ಬಂದರೆ ಪ್ರಳಯವೇ ಆಗಿ ಹೋಗುತ್ತದೆ ಎಂಬ ಭಾವನೆ ಜನರಲ್ಲಿದೆ. ಕೆಲವೊಂದು ಕಡೆ ನಾಗರ ಪಂಚಮಿಯ ದಿನ ಜನರು ಜೀವಂತ ನಾಗರಹಾವುಗಳನ್ನು ಹಿಡಿದು ತಂದು ಅವುಗಳಿಗೆ ಹಾಲು ಮತ್ತು ನೈವೇದ್ಯವನ್ನು ಅರ್ಪಿಸಿ ಕಾಡಿಗೆ ಬಿಡುವ ಸಂಪ್ರದಾಯವಿದೆ.


ಭಾರತವು ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ದೇಶ. ಇಲ್ಲಿ ವಿಭಿನ್ನವಾದ ಸಂಸ್ಕೃತಿಗಳು ಮತ್ತು ಆಚರಣೆಗಳು ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತ ಹೋಗುತ್ತವೆ. ಮಹಾರಾಷ್ಟ್ರದಲ್ಲಿ ಜನರು ಒಂದು ಗುಂಪನ್ನು ಮಾಡಿಕೊಳ್ಳುತ್ತಾರೆ.
ಅವರು ಒಂದು ನಾಗರ ಹಾವಿನ ಪ್ರತಿರೂಪವನ್ನು ಮಾಡಿಕೊಂಡು ಮನೆಗೆ ಮನೆಗೆ ತೆರಳಿ ಭಿಕ್ಷೆ ಬೇಡುತ್ತಾರೆ.

ಕೇರಳದಲ್ಲಿ ಜನರು ಈ ದಿನದಂದು ನಾಗ ದೇವತೆಗಳನ್ನು ಪ್ರತಿಷ್ಠಾಪಿಸಿರುವ ದೇವಾಲಯಗಳಿಗೆ ಭೇಟಿ ನೀಡಿ, ಕಲ್ಲಿನ ಅಥವಾ ಲೋಹದ ನಾಗಗಳನ್ನು ಪೂಜಿಸುತ್ತಾರೆ. ಇದರಿಂದ ವರ್ಷಪೂರ್ತಿ ಅವರು ಮತ್ತು ಅವರ ಕುಟುಂಬದ ಸದಸ್ಯರಿಗೆ ಹಾವುಗಳು ಕಚ್ಚುವುದಿಲ್ಲ ಎಂಬ ನಂಬಿಕೆ ಅವರಲ್ಲಿ ಮನೆ ಮಾಡಿದೆ.

ನಾಗ ದೇವತೆಗಳಿಗೆ ಹಾಲೆರೆಯುವ ಪದ್ಧತಿಯ ಹಿಂದೆ ಹಲವಾರು ನಂಬಿಕೆಗಳು ಅಡಗಿವೆ. ಇವುಗಳಿಗೆ ಇರುವ ಹೆಸರುಗಳು ಸಹ ಬೇರೆ ಬೇರೆಯಾಗಿವೆ. ಮದುವೆಯಾಗದ ಯುವತಿಯರು ನಾಗಗಳಿಗೆ ಹಾಲೆರೆಯುವುದರಿಂದ ಅವರು ಬಯಸಿದಂತಹ ಒಳ್ಳೆಯ ಗಂಡ ಅವರಿಗೆ ದೊರಕುತ್ತಾನೆ ಎಂಬ ನಂಬಿಕೆ ಇದೆ.

ಇದರಿಂದ ಅವರು ಬಾಳು ಸುಖಮಯವಾಗುತ್ತದೆ. ಇನ್ನು ಮದುವೆಯಾದ ಹೆಂಗಸರು ನಾಗಗಳಿಗೆ ಹಾಲೆರೆಯುವ ಹಿಂದೆ ಕುತೂಹಲಕಾರಿ ವಿಚಾರ ಅಡಗಿದೆ. ಅದೇನೆಂದರೆ ಹಾವುಗಳು ತಮಗೆ ನೋವನ್ನು ಉಂಟು ಮಾಡಿದವರ ಮೇಲೆ ದ್ವೇಷವನ್ನು ತೀರಿಸಿಕೊಳ್ಳುವ ಮತ್ತು ಅವರು ಇಲ್ಲದಿದ್ದಲ್ಲಿ ಅವರ ಕುಟುಂಬದ ಸದಸ್ಯರ ಮೇಲೆ ದ್ವೇಷವನ್ನು ತೀರಿಸಿಕೊಳ್ಳುವ ಛಲವನ್ನು ಹೊಂದಿರುತ್ತವೆಯಂತೆ. ಹಾಗಾಗಿ ಮುತ್ತೈದೆಯರು ನಾಗ ದೇವತೆಗಳನ್ನು ಪೂಜಿಸಿ, ತಮ್ಮ ಕುಟುಂಬ ಸದಸ್ಯರು ತಿಳಿದೊ ಅಥವಾ ತಿಳಿಯದೆಯೋ ಮಾಡಿದ ಅಪರಾಧವನ್ನು ಮನ್ನಿಸುವಂತೆ ಕೋರುತ್ತಾರೆ.

Share This Article
Leave a comment