ಭಾರತಕ್ಕೆ ಮೊಟ್ಟ ಮೊದಲ ವಿಶ್ವಕಪ್ ಗೆದ್ದುಕೊಟ್ಟ ಕ್ರಿಕೆಟ್ ತಂಡದ ಕ್ಯಾಪ್ಟನ್ ಆಗಿದ್ದ ಕಪಿಲ್ ದೇವ್ ನಿನ್ನೆ ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲಾಗಿದ್ದರು.
ಕ್ರಿಕೆಟ್ ಕ್ಷೇತ್ರದ ದಿಗ್ಗಜರಾಗಿರುವ ಅವರ ಆರೋಗ್ಯ ಚೇತರಿಕೆ ಕಾಣಲಿ ಎಂದು ಭಾರತ ಮಾತ್ರವಲ್ಲದೆ ಬೇರೆ ದೇಶಗಳ ಅಭಿಮಾನಿಗಳು ಕೂಡ ಹಾರೈಸಿದ್ದರು. ನಿನ್ನೆ ಆ್ಯಂಜಿಯೋಪ್ಲಾಸ್ಟಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಕಪಿಲ್ ದೇವ್ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ.
ಆಪರೇಷನ್ ಆಗಿ ಇನ್ನೂ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ಮೊದಲೇ ಅವರು ಗಾಲ್ಫ್ ಆಡಲು ಕಾಯುತ್ತಿದ್ದಾರೆ.
ತಮ್ಮ ಮಗಳ ಜೊತೆಗೆ ಕಪಿಲ್ ದೇವ್ ಖುಷಿಯಿಂದ ಆಸ್ಪತ್ರೆಯ ಬೆಡ್ ಮೇಲೆ ಕುಳಿತಿರುವ ಫೋಟೋವನ್ನು ಟ್ವಿಟ್ಟರ್ನಲ್ಲಿ ಶೇರ್ ಮಾಡಲಾಗಿದೆ. ತಮ್ಮ ಆರೋಗ್ಯಕ್ಕೆ ಹಾರೈಸಿದ ಎಲ್ಲರಿಗೂ ಧನ್ಯವಾದವನ್ನು ಅರ್ಪಿಸಿರುವ ಕಪಿಲ್ ದೇವ್, ಎಲ್ಲರಿಗೂ ನಮಸ್ಕಾರ. ನಾನೀಗ ಆರೋಗ್ಯವಾಗಿದ್ದೇನೆ. ಕೆಲವೇ ದಿನಗಳಲ್ಲಿ ಸಂಪೂರ್ಣ ಗುಣವಾಗಿ ಡಿಸ್ಚಾರ್ಜ್ ಆಗುತ್ತೇನೆ. ಮತ್ತೆ ಗಾಲ್ಫ್ ಆಡಲು ಕಾಯುತ್ತಿದ್ದೇನೆ. ನೀವೆಲ್ಲರೂ ನನಗೆ ಕುಟುಂಬದವರಿದ್ದಂತೆ. ನಿಮ್ಮ ಹಾರೈಕೆಯಿಂದ ನಾನು ಆರೋಗ್ಯದಿಂದಿದ್ದೇನೆ, ಎಲ್ಲರಿಗೂ ಧನ್ಯವಾದಗಳು ಎಂದು ಕಪಿಲ್ ದೇವ್ ಟ್ವೀಟ್ ಮಾಡಿದ್ದಾರೆ.
ಶುಕ್ರವಾರ ಹೃದಯಾಘಾತದಿಂದ ನವದೆಹಲಿಯ ಆಸ್ಪತ್ರೆಗೆ ದಾಖಲಾಗಿದ್ದ ಕಪಿಲ್ ದೇವ್ ಅವರಿಗೆ ಆಂಜಿಯೋಪ್ಲಾಸ್ಟಿ ನಡೆಸಲಾಗಿತ್ತು. 61 ವರ್ಷದ ಕಪಿಲ್ ದೇವ್ ಈಗ ಚೇತರಿಸಿಕೊಳ್ಳುತ್ತಿದ್ದಾರೆ.
ಇಂಗ್ಲೆಂಡ್ನ ಲಾರ್ಡ್ಸ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಭಾರತದ ಶ್ರೇಷ್ಠ ಆಲ್ರೌಂಡರ್ಗಳಲ್ಲಿ ಒಬ್ಬರಾದ ಕಪಿಲ್ ದೇವ್ ನಾಯಕತ್ವದಲ್ಲಿ ಭಾರತ ತಂಡ 1983ರಲ್ಲಿ ವಿಶ್ವಕಪ್ ಗೆದ್ದಿತ್ತು.