ಗಾಡಿ ಟೋಯಿಂಗ್ ಮಾಡುತ್ತಿದ್ದ ಸಂದರ್ಭದಲ್ಲಿ ಕಲ್ಲೇಟು ಹೊಡೆದ ವಿಕಲಚೇತನ ಮಹಿಳೆಯ ಮೇಲೆ ಎಎಸ್ಐ ನಾರಾಯಣ ಎಂಬ ಪೋಲೀಸ್ ಅಧಿಕಾರಿ ದರ್ಪ ತೋರಿದ ಘಟನೆ ಬೆಂಗಳೂರಿನಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಬೆಂಗಳೂರಿನ ಹಲಸೂರು ಗೇಟ್ ಠಾಣಾ ವ್ಯಾಪ್ತಿಯ ಎಸ್ ಜೆ ಪಾಕ್೯ ಬಳಿ ಸರ್ಕಾರಿ ಕೆಲಸಕ್ಕೆ ಅಡ್ಡಿ ಮಾಡಿದರು ಎಂಬ ಆರೋಪದಲ್ಲಿ ಮಹಿಳೆ ವಿರುದ್ದ ಕೇಸ್ ದಾಖಲಾಗಿದೆ.
ಜ.24 ರಂದು ನಡೆದಿರುವ ಘಟನೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ನಂತರ ಬೆಳಕಿಗೆ ಬಂದಿದೆ. ವೀಡಿಯೋದಲ್ಲಿ ಅಂಗವಿಕಲ ಮಹಿಳೆ ಮೇಲೆ ಎಎಸ್ಐ ಹಲ್ಲೆ ಮಾಡಿರುವುದನ್ನು ಕಾಣಬಹುದಾಗಿದೆ.
ಟೋಯಿಂಗ್ ವಾಹನದಲ್ಲಿ ಕೂತಿದ್ದ ಹಲಸೂರ್ ಗೇಟ್ ಸಂಚಾರಿ ಟೋಯಿಂಗ್ ಎಎಸ್ ಐ ನಾರಾಯಣ್ ಮೇಲೆ ವಿಕಲಚೇತನ ಮಹಿಳೆ ಕಲ್ಲೇಟು ನೀಡಿದ್ದಾರೆ.
ಪರಿಣಾಮ ಎಎಸ್ಐ ಮುಖಕ್ಕೆ ಕಲ್ಲು ತಾಗಿ ರಕ್ತ ಬಂದಿದೆ. ಇದರಿಂದ ಸಿಟ್ಟಿಗೆದ್ದ ಎಎಸ್ಐ, ಕೂಡಲೇ ವಾಹನದಿಂದ ಕೆಳಗಿಳಿದು ಮಹಿಳೆಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅಲ್ಲದೆ ಬೂಟಿನಿಂದ ಒದ್ದು ಹಲ್ಲೆ ಮಾಡಿದ್ದಾರೆ.
ಈ ಮಹಿಳೆ ಕಲ್ಲಿನಿಂದ ಹಲ್ಲೆ ಮಾಡಿದ್ದೇಕೆ..?
ಈ ವಿಕಲಚೇತನ ಮಹಿಳೆಗೆ ಟೋಯಿಂಗ್ ಮಾಡುವುದನ್ನು ಕಂಡರೆ ಆಗುತ್ತಿರಲಿಲ್ಲವಂತೆ. ಹೀಗಾಗಿ ಟೋಯಿಂಗ್ ನವರು ಕಂಡರೆ ಸಾಕು ಕಲ್ಲಿನಿಂದ ಹಲ್ಲೆ ಮಾಡುತ್ತಾರೆ. ಅದೇ ರೀತಿ ಎಎಸ್ಐ ಮೇಲೆಯೂ ಆಕೆ ಕಲ್ಲಿನಿಂದ ಹಲ್ಲೆ ಮಾಡಿದ್ದಾರೆ. ಈಗ ಆಕೆಯನ್ನು ಬಂಧಿಸಲಾಗಿದೆ.