ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನಟ ದರ್ಶನ್ ವಿರುದ್ಧ ಪ್ರಕರಣ ದಾಖಲು ಮಾಡಿದೆ. ರಾಜರಾಜೇಶ್ವರಿ ನಗರದಲ್ಲಿ ಚುನಾವಣಾ ಪ್ರಚಾರದ ವೇಳೆ ಕೋವಿಡ್ ನಿಯಮಗಳನ್ನು ಪಾಲಿಸಿಲ್ಲ ಎಂದು ಪ್ರಕರಣ ದಾಖಲಿಸಲಾಗಿದೆ.
ಆರ್. ಆರ್. ನಗರ ಚುನಾವಣಾಧಿಕಾರಿ ಮತ್ತು ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್ ಈ ಕುರಿತು ಮಾಹಿತಿ ನೀಡಿದ್ದಾರೆ.
“2005ರ ವಿಪತ್ತು ನಿರ್ವಹಣಾ ಕಾಯ್ದೆ ಅಡಿ ದರ್ಶನ್ ಮತ್ತು ನಿಯಮ ಉಲ್ಲಂಘಿಸಿದ ಇತರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ” ಎಂದು ಹೇಳಿದ್ದಾರೆ.
ಶುಕ್ರವಾರ ನಟ ದರ್ಶನ್ ಆರ್. ಆರ್. ನಗರ ವ್ಯಾಪ್ತಿಯ ಬಿ. ಕೆ. ನಗರ, ಜೆ. ಪಿ. ಪಾರ್ಕ್, ಯಶವಂತಪುರ ಮುಂತಾದ ಪ್ರದೇಶಗಳಲ್ಲಿ ರೋಡ್ ಶೋ ಮೂಲಕ ಬಿಜೆಪಿ ಅಭ್ಯರ್ಥಿ ಮುನಿರತ್ನ ಪರವಾಗಿ ಪ್ರಚಾರ ನಡೆಸಿದ್ದರು.
ಈ ಪ್ರಚಾರದ ಚಿತ್ರಗಳು, ವಿಡಿಯೋಗಳನ್ನು ಚುನಾವಣಾ ವೀಕ್ಷಕರು ಪಡೆದುಕೊಂಡಿದ್ದರು. ಪ್ರಚಾರದ ವೇಳೆ ಕೋವಿಡ್ ಮಾರ್ಗಸೂಚಿ ಉಲ್ಲಂಘನೆ ಮಾಡಿದ ಕಾರಣಕ್ಕೆ ಪ್ರಕರಣವನ್ನು ನಟ ದರ್ಶನ್ ವಿರುದ್ದ ದಾಖಲಿಸಲಾಗಿದೆ.
ಅಕ್ಟೋಬರ್ 30ರಂದು ಬಿಬಿಎಂಪಿ ಕಾಂಗ್ರೆಸ್ ವಿರುದ್ಧ 3, ಬಿಜೆಪಿ ವಿರುದ್ಧ 4 ಪ್ರಕರಣ ದಾಖಲಿಸಿದೆ. ಅಕ್ಟೋಬರ್ 31ರಂದು ಕಾಂಗ್ರೆಸ್ ವಿರುದ್ಧ 1, ಬಿಜೆಪಿ ವಿರುದ್ಧ 4, ಜೆಡಿಎಸ್ ವಿರುದ್ಧ 2 ಪ್ರಕರಣ ದಾಖಲು ಮಾಡಿದೆ.