ಸದ್ಯಕ್ಕೆ ಶಾಲೆಗಳನ್ನು ಆರಂಭಿಸುವುದಿಲ್ಲ ಎಂದು ಸಿಎಂ ಬಿ.ಎಸ್ ಯಡಿಯೂರಪ್ಪ ತಿಳಿಸಿದರು. ರಾಜ್ಯದಲ್ಲಿ ಮೂರನೇ ಕೊರೊನಾ ಅಲೆ ತಡೆಗಟ್ಟಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಮಂಗಳವಾರ ಡಾ. ದೇವಿಶೆಟ್ಟಿ ನೇತೃತ್ವದ ತಂಡ ಸರ್ಕಾರಕ್ಕೆ ವರದಿ ಸಲ್ಲಿಸಿದೆ.
ವರದಿ ಕೈಸೇರಿದ ಬೆನ್ನಲ್ಲೇ ಸಿಎಂ ಬಿ.ಎಸ್ ಯಡಿಯೂರಪ್ಪ ಗೃಹ ಕಚೇರಿ ಕೃಷ್ಣಾದಲ್ಲಿ ಹಿರಿಯ ಸಚಿವರ ಜೊತೆ ಸಭೆ ನಡೆಸಿದ ನಂತರ ಮಾಧ್ಯಮಗಳಿಗೆ ಈ ಮಾಹಿತಿ ನೀಡಿದರು.
ಡಾ.ದೇವಿಪ್ರಸಾದ್ ಶೆಟ್ಟಿ ಅವರ ಮಧ್ಯಂತರ ವರದಿ ಸಲ್ಲಿಕೆಯಾಗಿದೆ. ಮೂರನೇ ಅಲೆಯಲ್ಲಿ ಮಕ್ಕಳಿಗೆ ಹೆಚ್ಚಿನ ಪ್ರಮಾಣದ ಸೋಂಕು ತಗುಲಲಿದೆ ಎಂದು ವರದಿಯಲ್ಲಿ ಹೇಳಲಾಗಿದೆ ಎಂದರು.
ಮೂರನೇ ಅಲೆ ತಡೆಗಟ್ಟಲು ಆರ್ಥಿಕ ಸಂಪನ್ಮೂಲ, ಮಾನವ ಸಂಪನ್ಮೂಲ ಬೇಕು. ಸಾರ್ವಜನಿಕರ ಸಹಭಾಗಿತ್ವ ಬೇಕು ಎಂದಿದೆ. ಕೋವಿಡ್-19ಗೆ ತುತ್ತಾದ ಮಕ್ಕಳ ಮನೋಸ್ಥೈರ್ಯ ಹೆಚ್ಚಿಸಲು ಶಿಫಾರಸ್ಸು ಮಾಡಿದೆ ಎಂದು ತಿಳಿಸಿದರು.
ತಜ್ಞರ ವರದಿಯಲ್ಲಿ ಇರುವುದು ಏನು ?
- ಮಕ್ಕಳ ಕಲಿಕಾ ಮಟ್ಟ, ಭೌತಿಕ ಆರೋಗ್ಯ, ಮಾನಸಿಕ ಆರೋಗ್ಯ ವೃದ್ಧಿಗೆ ಶಾಲೆಗಳನ್ನು ಆರಂಭಿಸಬೇಕು.
- ಶಾಲೆಗಳ ಆರಂಭ ವಿಳಂಬ ಮಾಡಿದರೆ ಅಪೌಷ್ಠಿಕತೆ, ಬಾಲ ಕಾರ್ಮಿಕ ಪದ್ದತಿ ಹೆಚ್ಚಾಗುತ್ತದೆ
ಅಲ್ಲದೇ ಬಾಲ್ಯ ವಿವಾಹ, ಬಿಕ್ಷಾಟನೆ, ಮಕ್ಕಳ ಲೈಂಗಿಕ ಷೋಷಣೆ ಹೆಚ್ಚಾಗುತ್ತದೆ. - ಆನ್ಲೈನ್ ಶಿಕ್ಷಣ ನಿರೀಕ್ಷಿತ ಮಟ್ಟ ತಲುಪುವಲ್ಲಿ ವಿಫಲವಾಗಿದೆ. ಕಲಿಕೆಯಲ್ಲಿ ಅಜಗಜಾಂತರ ವ್ಯತ್ಯಾಸ ಇದೆ.
- ಹೆಚ್ಚಿನ ಮಕ್ಕಳು ಏಸಿಮ್ಟಮ್ಯಾಟಿಕ್ ಅಥವಾ ಕಡಿಮೆ ಲಕ್ಷಣ ಇರೋ ಮಕ್ಕಳಾಗಿರುತ್ತಾರೆ ಎಂದು ಇಂಡಿಯನ್ ಅಕಾಡಮಿ ಆಫ್ ಪಿಡಿಯಾಟ್ರಿಕ್ಸ್ ಅಭಿಪ್ರಾಯ ಪಟ್ಟಿದೆ.
- ಶಾಲೆ ಆವರಣಗಳು ಹೆಚ್ಚು ಸೋಂಕು ಹಬ್ಬಿಸುತ್ತವೆ ಎಂಬುವುದಕ್ಕೆ ವಿಶ್ವಾದ್ಯಂತ ಯಾವುದೇ ಸಾಕ್ಷಾಧಾರಗಳು ಲಭ್ಯವಿಲ್ಲ.
- ಶಾಲೆ ಆರಂಭಿಸುವುದನ್ನು ಶಾಲಾಭಿವೃದ್ಧಿ ಸಮಿತಿಗಳಿಗೆ ವಹಿಸುವ ಮೂಲಕ ವಿಕೇಂದ್ರೀಕರಣ ಗೊಳಿಸಬೇಕು.
- ಜಿಲ್ಲಾ ಮಟ್ಟದ ಮಕ್ಕಳ ರಕ್ಷಣಾ ಸಮಿತಿಯನ್ನು ರಚಿಸಬೇಕು