2 ದಿನದ ಹಿಂದೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಯುವತಿ ಆತ್ಮಹತ್ಯೆ

Team Newsnap
1 Min Read

ಬೆಂಗಳೂರು ಉತ್ತರ ತಾಲೂಕಿನ ಕದುರುಗೆರೆ ನಿವಾಸಿಯಾದ 23 ವರ್ಷದ ರೇಖಾ, ಸಾವಿರಾರು ಕನಸುಗಳನ್ನ ಹೊತ್ತಿದ್ದಳು. ವೈವಾಹಿಕ ಜೀವನಕ್ಕೆ ಕಾಲಿಟ್ಟು ಹೊಸ ಜೀವನವನ್ನ ಕಟ್ಟಿಕೊಳ್ಳುವ ಕನಸು ಹೊತ್ತಿಕೊಂಡಿದ್ದ ಈ ಯುವತಿಯ ಬದುಕಿನಲ್ಲಿ ವಿಧಿ ಆಟವಾಡಿದೆ. ಹೊಸಬಾಳಿನ ಹೊಸ್ತಿಲು ತುಳಿಯ ಬೇಕಿದ್ದ ಈಕೆ ಸಾವಿನ ಮನೆಯ ಹೊಸ್ತಿಲು ತುಳಿದಿದ್ದಾಳೆ.

ನೂತನ ಜೀವನಕ್ಕೆ ಹೆಜ್ಜೆ ಇಡಲು ಸಿದ್ದವಾಗಿದ್ದ ಈ ರೇಖಾಳಿಗೆ ಎರಡು ದಿನಗಳ ಹಿಂದೆ ನೆಲಮಂಗಲದ ಯುವಕನ ಜೊತೆ ನಿಶ್ಚಿತಾರ್ಥವಾಗಿತ್ತು. ನಿಶ್ಚಿತಾರ್ಥದ ನಂತರ ಇಬ್ಬರು ಅನ್ಯೋನ್ಯವಾಗಿಯೇ ಮಾತನಾಡುತ್ತಿದ್ದರು. ಆದರೆ ಅದೇನಾಯ್ತೋ ಏನೋ ನಿನ್ನೆ ಮಧ್ಯಾಹ್ನನದ ವೇಳೆಗೆ ಮನೆಯಲ್ಲಿ ಯಾರು ಇಲ್ಲದ ಸಂದರ್ಭ ನೋಡಿಕೊಂಡು ಈ ಯುವತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಇನ್ನು ಆತ್ಮಹತ್ಯೆ ಹಿಂದೆ ಹಲವು ಅನುಮಾನಗಳು ಸೃಷ್ಟಿಯಾಗಿವೆ. ಹುಡುಗ ಹುಡುಗಿಯ ನಡುವೆ ಯಾವುದೋ ಕ್ಷುಲ್ಲಕ ವಿಚಾರಕ್ಕೆ ಗಲಾಟೆಯಾಗಿರಬಹುದು ಎಂದು ಅನುಮಾನ ವ್ಯಕ್ತವಾಗಿದೆ. ಪ್ರಕರಣದ ಸತ್ಯಾಸತ್ಯೆಗೆ ಮುಚ್ಚಿಹಾಕಲು ರಾಜಕೀಯ ಮುಖಂಡರ ಪ್ರಭಾವ ಬಳಸಿದ್ದಾರೆ ಎನ್ನಲಾಗಿದೆ. ಆದ್ರೆ ಹೊಟ್ಟೆ ನೋವಿನಿಂದ ನೇಣಿಗೆ ಶರಣಾಗಿದ್ದಾಳೆಂದು ಯುವತಿಯ ಕುಟುಂಬಸ್ಥರು ಪೊಲೀಸರಿಗೆ ತಿಳಿಸಿದ್ದಾರೆ.

ಒಟ್ಟಾರೆ ಘಟನೆಗೆ ಸಂಬಂಧಿಸಿದಂತೆ ಮಾದನಾಯಕನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ. ಆದರೆ ಹೊಸ ಜೀವನಕ್ಕೆ ಕಾಲಿಡಬೇಕಿದ್ದ ಯುವತಿ ಸೂಸೈಡ್ ಮಾಡ್ಕೊಂಡಿದ್ದು ಯಾಕೆ ಅನ್ನೋ ಪ್ರಶ್ನೆ ಎಲ್ಲರನ್ನ ಕಾಡುತ್ತಿದೆ. ಇದಕ್ಕೆ ತನಿಖೆ ನಂತರವೇ ಉತ್ತರ ಸಿಗಬೇಕಿದೆ.

Share This Article
Leave a comment